ಟ್ರಾಫಿಕ್ ಫೈನ್ ಡಿಸ್ಕೌಂಟ್ ಆಫರ್ ಬಳಸಿಕೊಂಡ ಸಿಎಂ! ಸಿದ್ದರಾಮಯ್ಯ ಪಾವತಿಸಿದ ದಂಡ ಎಷ್ಟು ಗೊತ್ತೇ?
ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ 50ರ ರಿಯಾಯಿತಿಯನ್ನು ಬಳಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದೀರ್ಘಾವಧಿಯಿಂದ ಬಾಕಿ ಇದ್ದ ದಂಡದ ಮೊತ್ತ ಪಾವತಿಸಿದ್ದಾರೆ. ಇದರೊಂದಿಗೆ, ಗಣ್ಯರಿಗೂ ಯಾವುದೇ ವಿನಾಯಿತಿ ನೀಡದೆ ದಂಡ ಪಾವತಿಸಿಕೊಳ್ಳಲಾಗುತ್ತಿದೆ ಎಂಬ ಸಂದೇಶವನ್ನು ಟ್ರಾಫಿಕ್ ಪೊಲೀಸರು ರವಾನಿಸಿದಂತಾಗಿದೆ.

ಬೆಂಗಳೂರು, ಸೆಪ್ಟೆಂಬರ್ 8: ಸಂಚಾರ ನಿಯಮಗಳ ಉಲ್ಲಂಘನೆಯ ದಂಡ (Traffic Fine) ಪಾವತಿಗೆ ನೀಡಲಾಗಿರುವ ಶೇ 50ರ ರಿಯಾಯಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮುಂತಾದ ರಾಜಕೀಯ ವ್ಯಕ್ತಿಗಳೂ ಸಹ ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘನೆಗೆ ಶೇ 50 ರ ರಿಯಾಯಿತಿ ಅಡಿ ದಂಡ ಪಾವತಿಸಿದ್ದಾರೆ.
2024 ರ ಜನವರಿ ಮತ್ತು ಆಗಸ್ಟ್ ನಡುವೆ ಮುಖ್ಯಮಂತ್ರಿಗಳ ಅಧಿಕೃತ ಟೊಯೋಟಾ ಫಾರ್ಚೂನರ್ ಕಾರು ಆರು ಸೀಟ್ಬೆಲ್ಟ್ ಉಲ್ಲಂಘನೆ ಮತ್ತು ಒಂದು ವೇಗದ ಚಾಲನೆ ಪ್ರಕರಣದಲ್ಲಿ ಸಿಲುಕಿತ್ತು. ಇವೆಲ್ಲವೂ ಬಂಗಳೂರಿನ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿಯಲ್ಲಿ ಕಣ್ಗಾವಲು ಕ್ಯಾಮರಾಗಳಲ್ಲಿ ಸೆರೆಯಾಗಿದ್ದವು. ಸೀಟ್ಬೆಲ್ಟ್ ಉಲ್ಲಂಘನೆಯ ಸಮಯದಲ್ಲಿ ಸಿದ್ದರಾಮಯ್ಯ ಅವರೇ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.
ಸರ್ಕಾರ ಶೇಕಡಾ 50 ರಷ್ಟು ಸಂಚಾರ ದಂಡ ವಿನಾಯಿತಿಯನ್ನು ಪಡೆದುಕೊಂಡು ಮುಖ್ಯಮಂತ್ರಿ ಕಚೇರಿ 2,500 ರೂ. ದಂಡ ಪಾವತಿಸಿ, ಬಾಕಿ ಹಣವನ್ನು ಇತ್ಯರ್ಥಪಡಿಸಿದೆ. ಗಣ್ಯರಿಗೂ ಯಾವುದೇ ವಿನಾಯಿತಿ ನೀಡದೆ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯೇಂದ್ರ ಕೂಡ ಅವರ ವಾಹನಕ್ಕೆ ಸಂಬಂಧಿಸಿದ 10 ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಪಾವತಿಸಿದ್ದಾರೆ. ಇದರಲ್ಲಿ ವೇಗದ ಚಾಲನೆ, ಸಿಗ್ನಲ್ ಉಲ್ಲಂಘನೆ ಮತ್ತು ಸೀಟ್ಬೆಲ್ಟ್ ಸಂಬಂಧಿತ ಅಪರಾಧಗಳು ಸೇರಿವೆ. ಅವರ ಕಚೇರಿಯು ಒಟ್ಟು 3,250 ರೂ. ಪಾವತಿಸಿದೆ. ಇದರಲ್ಲಿ, ಕೆಲವು ದಂಡಗಳು 2020 ಕ್ಕಿಂತಲೂ ಹಿಂದಿನವುಗಳಾಗಿವೆ.
ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ಜಾರಿಯಲ್ಲಿರುವ ಈ ರಿಯಾಯಿತಿ ಯೋಜನೆಯು ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. 2019 ಮತ್ತು 2025 ರ ನಡುವೆ ಸುಮಾರು 3 ಕೋಟಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿ ಬಾಕಿ ಉಳಿದಿವೆ. ಇವುಗಳು ಟ್ಟಾರೆಯಾಗಿ ಸುಮಾರು 1,000 ಕೋಟಿ ರೂ. ಮೌಲ್ಯದ್ದಾಗಿವೆ.
ಇದನ್ನೂ ಓದಿ: ಅತ್ಯಂತ ದುಬಾರಿ ನಮ್ಮ ಮೆಟ್ರೋ: ದೆಹಲಿ ಮೆಟ್ರೋ ದರ ಏರಿಕೆ ಜತೆ ಹೋಲಿಸಿ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ
ಸಂಚಾರ ನಿಯಮ ಉಲ್ಲಂಘನೆ ದಂಡ ರಿಯಾಯಿತಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಶನಿವಾರದ ವೇಳೆಗೆ, ಅಧಿಕಾರಿಗಳು 16.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ ಮತ್ತು 45.5 ಕೋಟಿ ರೂ. ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.




