ಧಾರವಾಡ, ಫೆಬ್ರವರಿ 17: ಕರ್ನಾಟಕದಲ್ಲಿ (Karnataka) ಕಳೆದ ಒಂದು ವರ್ಷದಲ್ಲಿ ಒಟ್ಟು 22,445 ಸೈಬರ್ ವಂಚನೆ (Cyber Crime) ಪ್ರಕರಣಗಳು ದಾಖಲಾಗಿವೆ. 2024ರಲ್ಲಿ ಆನ್ ಲೈನ್ ಮೂಲಕ ಒಟ್ಟು 298 ಕೋಟಿ ರೂಪಾಯಿ ಹಣವನ್ನು ಜನರು ಕಳೆದುಕೊಂಡಿದ್ದಾರೆ. ಟಿವಿ9ಗೆ ಲಭ್ಯವಾಗಿರುವ ಎನ್. ಸಿ. ಆರ್. ಪಿ. ಪೋರ್ಟಲ್ನ ಅಂಕಿ-ಅಂಶ ಪ್ರಕಾರ ದೇಶಾದ್ಯಂತ 2024ರಲ್ಲಿ ಒಟ್ಟು 7,79,435 ಸೈಬರ್ ವಂಚನೆ ಪ್ರರಕರಣಗಳು ದಾಖಲಾಗಿವೆ.
ಅದರಲ್ಲಿ ಒಟ್ಟು 22,445 ಪ್ರಕರಣಗಳು ಕರ್ನಾಟಕದಲ್ಲಿ ನಡೆದಿದ್ದು, ಇದರಲ್ಲಿ 8677 ಆರೋಪಿಗಳು ಪತ್ತೆಯಾಗಿದ್ದರೂ ಕೇವಲ 643 ವಂಚಕರು ಮಾತ್ರ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಸೈಬರ್ ಕಳ್ಳರನ್ನು ಬೆನ್ನತ್ತಿ ಹೋಗಿ ಹಿಡಿಯೋದೇ ದೊಡ್ಡ ಸವಾಲಿನ ಕೆಲಸವಾಗಿದೆ. ಕೇವಲ ದೇಶದ ನಾನಾ ಕಡೆಗಷ್ಟೇ ಅಲ್ಲದೇ ದುಬೈ, ಕಾಂಬೋಡಿಯಾ, ಥೈಲ್ಯಾಂಡ್, ಲಾವೋಸ್, ಮ್ಯಾನ್ಮಾರ್, ಹಾಂಗ್ಕಾಂಗ್, ಚೀನಾ ಮೂಲದ ಸೈಬರ್ ಅಪರಾಧಿಗಳು ಇದ್ದಾರೆ. ಹೀಗಾಗಿ ಜನ ಈ ವಿಷಯದಲ್ಲಿ ಜಾಗೃತ ಆಗಬೇಕು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇನ್ನು, ಸೈಬರ್ ಅಪರಾಧಗಳಲ್ಲಿ ಡಿಜಿಟಲ್ ಅರೆಸ್ಟ್ನಿಂದ ಹಿಡಿದು ನಿಮಗೆ ಬಹುಮಾನ ಬಂದಿದೆ ಅಂತ, ಬಂಪರ್ ಆಫರ್ ಇದೆ ಅಂತ ವಂಚಿಸುವುದು ಸಾಮಾನ್ಯವಾಗಿದೆ. ಡಿಜಿಟಲ್ ಅರೆಸ್ಟ್ ಬಗ್ಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿ, ಜನರು ಜಾಗೃತರಾಗಿ ಇರುವಂತೆ ವಿನಂತಿಸಿಕೊಂಡಿದ್ದರು.
ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಸೈಬರ್ ವಂಚಕರ ಬಗ್ಗೆ ಜಾಗೃತಿಯ ಜಾಹೀರಾತುಗಳು ಬರುತ್ತಲೇ ಇವೆ. ಆದರೂ, ಈ ಸೈಬರ್ ಕಳ್ಳರ ಮಾತಿಗೆ ಮರುಳಾಗಿ ಜನ ಹಣ ಕಳೆದುಕೊಳ್ಳುವುದು ಮಾತ್ರ ನಿಲ್ಲುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು
ಅದರಲ್ಲಿಯೂ ನಗರ ಪ್ರದೇಶದ ಸುಶಿಕ್ಷಿತರು, ನೌಕರರೇ ಈ ಸೈಬರ್ ಕಳ್ಳರ ಜಾಲಕ್ಕೆ ಮರುಳಾಗುತ್ತಿರುವುದು ವಿಪರ್ಯಾಸವೆ ಸರಿ. ಹೀಗಾಗಿ, ಯಾರೇ ಸೈಬರ್ ಕಳ್ಳರು ಕರೆ ಮಾಡಿದರೂ, ನಮಗೆ ಎಲ್ಲ ಗೊತ್ತಿದೆ ಎನ್ನುವ ರೀತಿಯಲ್ಲಿ ಮಾತನಾಡಬಾರದು. ಈ ಮೂಲಕ ಅವರ ಮಾತು, ಭಾಷೆ, ಗೊತ್ತಿದ್ದೂ ಗೊತ್ತಿಲ್ಲದಂತೆ ಜಾಣತನ ತೋರಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸಲಹೆಗಳನ್ನು ನೀಡಿದರು.
ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇದ್ದೆ ಇರುತ್ತಾರೆ ಅನ್ನೋ ಮಾತು ಈ ಸೈಬರ್ ಕಳ್ಳರ ವಿಷಯದಲ್ಲಿ ಸತ್ಯವಾಗಿದೆ. ಇದೇ ಕಾರಣಕ್ಕೆ ಜನರು ಸೈಬರ್ ಕಳ್ಳರ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕಾದ ಅಗತ್ಯವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ