Covid Compensation: ಬಿಪಿಎಲ್​ ಕುಟುಂಬದ ಸದಸ್ಯರು ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ರೂ. 1 ಲಕ್ಷ ಪರಿಹಾರ; ರಾಜ್ಯ ಸರ್ಕಾರ ಆದೇಶ

ಕೊವಿಡ್-19ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಮಹತ್ವದ ಬದಲಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ನೀಡಿದೆ.

Covid Compensation: ಬಿಪಿಎಲ್​ ಕುಟುಂಬದ ಸದಸ್ಯರು ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ರೂ. 1 ಲಕ್ಷ ಪರಿಹಾರ; ರಾಜ್ಯ ಸರ್ಕಾರ ಆದೇಶ
ಕರ್ನಾಟಕ ಸರ್ಕಾರದ ಅಧಿಸೂಚನೆ
Edited By:

Updated on: Dec 03, 2021 | 11:05 AM

ಬೆಂಗಳೂರು: ಕರ್ನಾಟಕ ಸರ್ಕಾರವು ಡಿಸೆಂಬರ್ 2ರ ಗುರುವಾರದಂದು ಪ್ರಮುಖವಾದ ತಿದ್ದುಪಡಿ ಆದೇಶವೊಂದನ್ನು ಹೊರಡಿಸಿದೆ. ಈ ಹಿಂದೆ, ಅಂದರೆ ಸೆಪ್ಟೆಂಬರ್ 28ರಂದು ಹೊರಡಿಸಿದ್ದ ಆದೇಶ ಮತ್ತು ಅಕ್ಟೋಬರ್ 1ರಂದು ರಾಜ್ಯ ಸರ್ಕಾರವು ತಿದ್ದುಪಡಿಯ ಮಾಡಿದ ನಂತರದಲ್ಲಿ ಈ ಹೊಸ ತಿದ್ದುಪಡಿ ಬಂದಿದೆ. ಹೊಸ ಘೋಷಣೆಯಲ್ಲಿ ಏನು ತಿಳಿಸಲಾಗಿದೆ ಅಂದರೆ, ಬಡತನ ರೇಖೆಗಿಂತ ಕೆಳಗಿರುವ “ದುಡಿಯುವ ವ್ಯಕ್ತಿ” ಕೊರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಆ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಲಾಗಿತ್ತು. ಅಂದರೆ, ಮೃತ ವ್ಯಕ್ತಿ “ದುಡಿಯುವ ಸದಸ್ಯನಾಗಿರಬೇಕು” ಎಂಬ ನಿಯಮ ಇತ್ತು.

ಆದರೆ, ಈಗ “ದುಡಿಯುವ ಸದಸ್ಯನಾಗಿರಬೇಕು” ಎಂಬುದು ಅಧಿಸೂಚನೆಯಲ್ಲಿ ಎಲ್ಲೆಲ್ಲಿ ಬಳಕೆ ಆಗಿದೆಯೋ ಅಲ್ಲೆಲ್ಲ “ದುಡಿಯುವ” ಎಂಬ ಪದವನ್ನು ಬಿಟ್ಟು ಓದಿಕೊಳ್ಳಬೇಕು ಎಂದು ತಿದ್ದುಪಡಿಯಲ್ಲಿ ತಿಳಿಸಲಾಗಿದೆ. ಹೀಗೆ ಮಾಡುವುದರಿಂದ ಬಿಪಿಎಲ್ ಕುಟುಂಬದ ಸದಸ್ಯರು ಯಾರೇ ಕೊವಿಡ್- 19ನಿಂದ ಮೃತಪಟ್ಟರೂ ಕರ್ನಾಟಕ ಸರ್ಕಾರದಿಂದ 1 ಲಕ್ಷ ರೂಪಾಯಿ ಪರಿಹಾರ ದೊರೆಯುತ್ತದೆ.

ತಿದ್ದುಪಡಿಗೆ ಸಂಬಂಧಿಸಿದಂತೆ ಇನ್ನೂ ಮುಂದುವರಿದು, ಯಾವುದೇ ವಯಸ್ಸಿನ ನಿಬಂಧನೆ ಇಲ್ಲದೆ ಕೊವಿಡ್- 19 ವೈರಾಣು ಸೋಂಕಿನಿಂದ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬದ ಅರ್ಹ ಕಾನೂನುಬದ್ಧ ವಾರಸುದಾರರಿಗೆ ರಾಜ್ಯ ಸರ್ಕಾರದ ರೂ. 1 ಲಕ್ಷ ಪರಿಹಾರದ ಆರ್ಥಿಕ ನೆರವನ್ನು ನೀಡತಕ್ಕದ್ದು ಎಂದು ತಿಳಿಸಲಾಗಿದೆ.

ಇದನ್ನು ಹೊರತುಪಡಿಸಿದಂತೆ ದಿನಾಂಕ 28.09.2021ರಂದು ಹೊರಡಿಸಿದ ಆದೇಶ, ಮಾರ್ಗಸೂಚಿಗಳು ಮತ್ತು ಆ ನಂತರ ಅಕ್ಟೋಬರ್ 1ರಂದು ತಂದ ತಿದ್ದುಪಡಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕೊವಿಡ್ ಎದುರಿಸಿದ ರೀತಿ ಒಮಿಕ್ರಾನ್ ನಿಭಾಯಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ