
ಬೆಂಗಳೂರು, ಏಪ್ರಿಲ್ 29: ರಾಜ್ಯ ಪೊಲೀಸ್ (Karnataka Police) ಮಹಾನಿರ್ದೇಶಕ (ಡಿಜಿ&ಐಜಿಪಿ) ಅಲೋಕ್ ಮೋಹನ್ (Alok Mohan) ಅವರ ಸೇವಾವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಿ ಮಂಗಳವಾರ (ಏ.29) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ಇಲಾಖೆಗೆ ನೂತನ ಡಿಜಿಪಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಬುಧವಾರ (ಏ.30) ರಂದು ವಯೋನಿವೃತ್ತಿ ಹೊಂದಬೇಕಿದ್ದ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿಯನ್ನು 22 ದಿವಸಗಳ ಮಟ್ಟಿಗೆ ರಾಜ್ಯ ಸರ್ಕಾರ ವಿಸ್ತರಿಸಿದೆ. ಡಿಜಿಪಿ ಅಲೋಕ್ ಮೋಹನ್ ಅವರು ತಮ್ಮ ಸೇವೆಯನ್ನು ಮೂರು ತಿಂಗಳ ಕಾಲ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು ಎಂದು ವರದಿಯಾಗಿತ್ತು.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಎನ್ಐಎ ತನಿಖೆ ಚುರುಕು: ಭರತ್ ಭೂಷಣ್ ಪತ್ನಿಯಿಂದ ಮಹತ್ವದ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು
ಈ ತಿಂಗಳ ಅಂತ್ಯಕ್ಕೆ ತಾವು (ಅಲೋಕ್ ಮೋಹನ್) ನಿವೃತ್ತಿಯಾಗುತ್ತಿರುವ ಕಾರಣ ಈ ಹುದ್ದೆಯಲ್ಲಿ ಎರಡು ವರ್ಷ ಪೂರೈಸಲು ಆಗುತ್ತಿಲ್ಲ. ಆದುದರಿಂದ ಸುಪ್ರೀಂಕೋರ್ಟ್ ತೀರ್ಪನ ಪ್ರಕಾರ ಪೊಲೀಸ್ ಮುಖ್ಯಸ್ಥರ ಹುದ್ದೆಗಳಿಗೆ ಎರಡು ವರ್ಷಗಳ ಅವಧಿ ನೀಡಬೇಕೆಂದು ವಿನಂತಿಸಿದ್ದರು. ಇದನ್ನು ಸರ್ಕಾರ ಪುರಸ್ಕರಿಸಿದೆ.
2023ರಲ್ಲಿ ಅಲೋಕ್ ಮೋಹನ್ ಅವರು ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಅಲೋಕ್ ಮೋಹನ್ ಅವರು 1987ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ವರದಿ: ಈರಣ್ಣ ಬಸವ
Published On - 9:25 pm, Tue, 29 April 25