ಚಿಕ್ಕಮಗಳೂರು: 11 ತಿಂಗಳಿಂದ ಸಂಬಳವಿಲ್ಲ, ಸಾಲಗಾರರ ಕಾಟ; ಡೆತ್ನೋಟ್ ಬರೆದಿಟ್ಟು ಗ್ರಾ ಪಂ ನೀರುಗಂಟಿ ಆತ್ಮಹತ್ಯೆ
ಚಿಕ್ಕಮಗಳೂರು ಜಿಲ್ಲೆಯ ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. 11 ತಿಂಗಳಿಂದ ಸಂಬಳ ನೀಡದೆ ಸಾಲಗಾರರ, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಸಾವನ್ನಪ್ಪಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ. ಸದ್ಯ ಘಟನೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು, ಮಾರ್ಚ್ 15: ಡೆತ್ನೋಟ್ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ. ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ರಮೇಶ್(47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ, ಸಾಲಗಾರರ ಕಾಟ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ನೋಟ್ನಲ್ಲಿ ಏನಿದೆ?
ನಾನು ತುಂಬಾ ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನಗೆ 11 ತಿಂಗಳ ವೇತನ ಕೊಟ್ಟಿಲ್ಲ. ಹಾಗೂ ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ.
ಇದನ್ನೂ ಓದಿ: ಬಹಿಷ್ಕಾರಕ್ಕೆ ಮನನೊಂದ ಮಹಿಳೆ: ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಆತ್ಮಹತ್ಯೆ
ಫೈನಾನ್ಸ್ನಲ್ಲಿ ಸಾಲ ಮಾಡಿರುವೆ, ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಹಾಸ್ಟೆಲ್ ವಾರ್ಡನ್ ಮನೆಯಲ್ಲಿ ನೇಣಿಗೆ ಶರಣು
ಹಾಸನ ನಗರದ ದಾಸರಕೊಪ್ಪಲಿನಲ್ಲಿ ಹಾಸ್ಟೆಲ್ ವಾರ್ಡನ್ ಲೋಕೇಶ್(45) ಆತ್ಮಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಮುಂಬಡ್ತಿ ಪಡೆದು ಚನ್ನರಾಯಪಟ್ಟಣ ಹಾಸ್ಟೆಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಲೋಕೇಶ್ ನೇಣಿಗೆ ಶರಣಾಗಿದ್ದಾರೆ. ಹಾಸನದ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
KSRTC ಬಸ್ನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ
ಕೆಎಸ್ಆರ್ಟಿಸಿ ಬಸ್ನಲ್ಲಿ ಹೃದಯಾಘಾತವಾಗಿ ಪ್ರಯಾಣಿಕ ಸಾವನ್ನಪ್ಪಿರುವಂತ ಘಟನೆ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಬಸ್ನಲ್ಲಿ ನಡೆದಿದೆ. ಕೊಳ್ಳೇಗಾಲದ ವಡ್ಡರ ದೊಡ್ಡಿಯ ಆರೋಗ್ಯ ಸ್ವಾಮಿ ಮೃತ ದುರ್ದೈವಿ.
ಇದನ್ನೂ ಓದಿ: ಮದುವೆಯಾಗಿ ಒಂದುವರೆ ವರ್ಷಕ್ಕೆ ವಿವಾಹಿತೆ ಸಾವು: ಅಳಿಯನೇ ಕೊಲೆಗೈದದ್ದು ಎಂದ ಮಹಿಳೆ ಪೋಷಕರು
ಬಸ್ ನಿಲ್ಧಾಣಕ್ಕೆ ಬಂದಾಗ ಎಲ್ಲಾ ಪ್ರಯಾಣಿಕರು ಇಳಿದಿದ್ದಾರೆ. ಆದರೆ ಆರೋಗ್ಯ ಸ್ವಾಮಿ ಮಾತ್ರ ಬಸ್ನಲ್ಲೇ ಕುಳಿತಿದ್ದರು. ಬಸ್ ನಿಂದ ಕಂಡಕ್ಟರ್ ಇಳಿಸಲು ಮುಂದಾದಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ 112 ಕರೆ ಮಾಡಿ ಬಸ್ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ. ಮೃತದೇಹವನ್ನ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
