‘ಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ’: ಸಚಿವ ವಿಜಯಾನಂದ ಕಾಶಪ್ಪನವರ್ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯ
ಬಾಗಲಕೋಟೆಯ ಸಿದ್ದನಕೊಳ್ಳ ಶ್ರೀಮಠಕ್ಕೆ ಭೇಟಿ ನೀಡಿದ್ದ ಸಚಿವ ವಿಜಯಾನಂದ ಕಾಶಪ್ಪನವರ್ಗೆ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. "ಸಿಟ್ಟನ್ನು ತ್ಯಾಗ ಮಾಡಿದರೆ ನೀನು ರಾಜ್ಯದ ಮುಖ್ಯಮಂತ್ರಿ ಆಗುತ್ತೀಯಾ" ಎಂದು ಸ್ವಾಮೀಜಿ ಆಶೀರ್ವದಿಸಿದ್ದಾರೆ. ಈ ಭವಿಷ್ಯವು ಉತ್ತರ ಕರ್ನಾಟಕ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬಾಗಲಕೋಟೆ, ಆ. 08: ನೂತನವಾಗಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯಾನಂದ ಕಾಶಪ್ಪನವರ್ ಅವರು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಪ್ರಸಿದ್ಧ ಸಿದ್ದನಕೊಳ್ಳ ಶ್ರೀಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವೇಳೆ, ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.
“ನಿನ್ನ ಕೋಪವನ್ನು (ಸಿಟ್ಟು) ಸಂಪೂರ್ಣವಾಗಿ ತ್ಯಾಗ ಮಾಡಿದರೆ ನೀನು ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುತ್ತೀಯಾ” ಎಂದು ಶಿವಕುಮಾರ ಶ್ರೀಗಳು ನೂತನ ಸಚಿವರಿಗೆ ಆಶೀರ್ವದಿಸಿದ್ದಾರೆ. ಸಚಿವ ವಿಜಯಾನಂದ ಕಾಶಪ್ಪನವರ್ ಅವರು ತಮ್ಮ ತಾಯಿ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ್ ಅವರೊಂದಿಗೆ ಮಠಕ್ಕೆ ಆಗಮಿಸಿ, ಸಿದ್ದಪ್ಪಜ್ಜನ ಪವಿತ್ರ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಇಲ್ಲಿದೆ ನೋಡಿ ವಿಡಿಯೋ:
“ಕಳೆದ 2023ರಲ್ಲಿ ನೀನು ಶಾಸಕನಾಗಿ ಸಚಿವನಾಗುತ್ತೀಯಾ ಎಂದು ಭವಿಷ್ಯ ನುಡಿದಿದ್ದೆ. ಸಿದ್ದಪ್ಪಜ್ಜನ ಗದ್ದುಗೆಯ ಮುಂದೆ ನೀನು ಮಾಡಿದ ಪ್ರಾರ್ಥನೆ ಫಲಿಸಿದ್ದು, 2023ರಲ್ಲಿ ನುಡಿದ ಭವಿಷ್ಯ 2026ರಲ್ಲಿ ನಿಜವಾಗಿದೆ” ಎಂದು ಸ್ವಾಮೀಜಿ ನೆನಪಿಸಿಕೊಂಡರು.
ಇದನ್ನೂ ಓದಿ: ‘ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ’: ಅಕ್ರಮ ವಲಸಿಗರ ವೀಡಿಯೊ ವೈರಲ್ ಮಾಡುವವರಿಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್
ಸಚಿವರಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, “ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಅಲ್ಲ ಎನ್ನುವ ನಿನ್ನ ಮಾತು ನನಗೆ ತುಂಬಾ ಇಷ್ಟವಾಯಿತು. ನಿನ್ನಲ್ಲಿರುವ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ. ಆದರೆ ಸಿಎಂ ಆಗ್ತಿ ಅಂದರೆ ಮಂದಿ ಸುಮ್ಮನಿರಲ್ಲ, ಎಚ್ಚರಿಕೆಯಿಂದಿರು” ಎಂದು ಮಾರ್ಮಿಕವಾಗಿ ಕಿವಿಮಾತು ಹೇಳಿದರು. ಕಲಾಪೋಷಕ ಮಠವೆಂದೇ ಪ್ರಸಿದ್ಧಿ ಪಡೆದಿರುವ ಸಿದ್ದನಕೊಳ್ಳ ಶ್ರೀಗಳು ನುಡಿದಿರುವ ಈ ಭವಿಷ್ಯ ಇದೀಗ ಉತ್ತರ ಕರ್ನಾಟಕ ಹಾಗೂ ರಾಜ್ಯ ರಾಜಕೀಯ ಅಂಗಳದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Sat, 8 August 26




