ಗಡುವು ಮುಗಿದರೂ ಕರ್ನಾಟಕದಲ್ಲಿ ಇನ್ನೂ ಇದ್ದಾರೆ ಪಾಕಿಸ್ತಾನೀಯರು: ಕಾರಣ ಇಲ್ಲಿದೆ
ಪಹಲ್ಗಾಮ್ ದಾಳಿ ಹಿನ್ನೆಲೆ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಸರಣಿ ಕ್ರಮಗಳ ನಂತರ, ಭಾರತದಲ್ಲಿರುವ ಅನೇಕ ಪಾಕಿಸ್ತಾನಿ ಪ್ರಜೆಗಳು ತಾಯ್ನಾಡಿಗೆ ಮರಳಿದ್ದಾರೆ. ಕರ್ನಾಟಕದಲ್ಲಿದ್ದ ಅನೇಕರು ಸ್ವದೇಶಕ್ಕೆ ತೆರಳಿದ್ದಾರೆ, ಆದರೆ ಕೆಲವರು ವಿವಿಧ ಕಾರಣಗಳಿಂದ ಉಳಿದುಕೊಂಡಿದ್ದಾರೆ. ಕರ್ನಾಟಕದಿಂದ ಎಷ್ಟು ಮಂದಿ ಪಾಕಿಸ್ತಾನಕ್ಕೆ ವಾಪಸಾದರು? ಇನ್ನೆಷ್ಟು ಮಂದಿ ಇಲ್ಲೇ ಇದ್ದಾರೆ? ಯಾವ ಜಿಲ್ಲೆಯಲ್ಲಿ ಎಷ್ಟು ಪಾಕಿಸ್ತಾನೀಯರು ಇದ್ದಾರೆ? ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 30: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ (Terror Attack) ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾರತದಲ್ಲಿರುವ ಪಾಕಿಸ್ತಾನೀಯರು (Pakistanis) ದೇಶ ಬಿಟ್ಟು ತೆರಳುವಂತೆ ಆದೇಶಿಸಿರುವುದೂ ಅವುಗಳಲ್ಲೊಂದು. ಅದರಂತೆ, ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗಲು ನಿಗದಿ ಮಾಡಿದ್ದ ಗಡುವು ಕೊನೆಗೊಂಡಿದೆ. ಕರ್ನಾಟಕದಲ್ಲಿದ್ದ (Karnataka) ಅನೇಕ ಪಾಕಿಸ್ತಾನೀಯರು ಮಂಗಳವಾರ ತವರಿಗೆ ತೆರಳಿದ್ದಾರೆ.
17 ವೀಸಾಗಳಡಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿಯರಿಗೆ ಏಪ್ರಿಲ್ 27ರೊಳಗೆ ತೊರೆಯುವಂತೆ ಸೂಚಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದವರಿಗೆ ಏಪ್ರಿಲ್ 29 ರೊಳಗೆ ಭಾರತದಿಂದ ವಾಪಸ್ ಹೋಗುವಂತೆ ಆದೇಶಿಸಲಾಗಿತ್ತು. ಹೀಗಾಗಿ, ಪಾಕಿಸ್ತಾನೀಯರು ಭಾರತ ತೊರೆದಿದ್ದಾರೆ. ಕರ್ನಾಟಕದಲ್ಲಿದ್ದ ಹಲವು ಪಾಕ್ ಪ್ರಜೆಗಳು ಮಂಗಳವಾರವೇ ತೆರಳಿದ್ದಾರೆ. ಆದರೆ ಇನ್ನೂ ಕೆಲವು ಮಂದಿ ಇಲ್ಲೇ ಉಳಿದುಕೊಂಡಿದ್ದಾರೆ. ಹೋದವರೆಷ್ಟು ಮಂದಿ? ಇನ್ನೂ ಇಲ್ಲೇ ಇರುವವರು ಎಷ್ಟು ಮಂದಿ ಮತ್ತು ಯಾಕೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕದಿಂದ ಹೋದವರೆಷ್ಟು? ಉಳಿದವರೆಷ್ಟು?
- ಮೈಸೂರಿನಲ್ಲಿದ್ದ 8 ಮಂದಿ ಪಾಕ್ ಪ್ರಜೆಗಳ ಪೈಕಿ ಮೂವರು ವಾಪಸಾಗಿದ್ದಾರೆ.
- ಬೆಂಗಳೂರಿನಲ್ಲಿದ್ದ ನಾಲ್ವರು ಪಾಕ್ ಪ್ರಜೆಗಳು ತವರಿಗೆ ತೆರಳಿದ್ದಾರೆ.
- ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಪಾಕಿಸ್ತಾನಿ ಪ್ರಜೆಗಳು ಇದ್ದು, ಇವರೆಲ್ಲ ದೀರ್ಘಾವಧಿ ವೀಸಾದಲ್ಲಿ ಇರುವುದರಿಂದ ಪಾಕಿಸ್ತಾನಕ್ಕೆ ತೆರಳಿಲ್ಲ.
- ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಇದ್ದಾರೆ.
- ಓರ್ವ ಪಾಕ್ ಮಹಿಳೆ ಕೋಲಾರದ ವ್ಯಕ್ತಿಯನ್ನು ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ.
- ಬೆಳಗಾವಿಯಲ್ಲಿ 6 ಪಾಕಿಸ್ತಾನೀಯರು ದೀರ್ಘಾವಧಿ ವೀಸಾದಲ್ಲಿ ಇದ್ದಾರೆ.
- ಓರ್ವ ಮಹಿಳೆ ರಾಯಚೂರಿನ ವ್ಯಕ್ತಿಯನ್ನು ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ.
- ತುಮಕೂರಿನಲ್ಲಿ ಮೂವರು ದೀರ್ಘಾವಧಿ ವೀಸಾದಡಿ ವಾಸವಿದ್ದಾರೆ.
- ಕಲಬುರಗಿಯಲ್ಲಿ 6 ಪಾಕಿಸ್ತಾನೀಯರು ಇಲ್ಲಿನವರನ್ನು ವಿವಾಹವಾಗಿ ವಾಸವಿದ್ದಾರೆ.
- ರಾಮನಗರದಲ್ಲಿಯೂ ಓರ್ವ ಮಹಿಳೆ ವಿವಾಹವಾಗಿ ವಾಸವಿದ್ದಾಳೆ.
- ಯಾದಗಿರಿ ಜಿಲ್ಲೆ ಸುರಪುರದಲ್ಲಿಯೂ ವಿವಾಹಿತ ಪಾಕ್ ಮಹಿಳೆ ಒಬ್ಬರಿದ್ದಾರೆ.
ದಾವಣಗೆರೆಯಲ್ಲಿರುವ ಪಾಕ್ ವಿದ್ಯಾರ್ಥಿನಿಗಿಲ್ಲ ಅಡ್ಡಿ!
ದಾವಣಗೆರೆಯಲ್ಲಿ ಪಾಕ್ ಮೂಲದ ಓರ್ವ ಮೆಡಿಕಲ್ ವಿದ್ಯಾರ್ಥಿನಿ ಇದ್ದಾಳೆ. ಆಕೆ ಹಿಂದು ಧರ್ಮದವಳಾಗಿದ್ದು, ಪಾಕಿಸ್ತಾನದಲ್ಲಿ ಎಂಬಿಬಿಎಸ್ ಮುಗಿಸಿ ಈಗ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಳೆ. ಈಕೆಯ ವಿಸಾ 2027ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ, ಜಿಲ್ಲಾಡಳಿತ ಕೂಡ ವಿದ್ಯಾರ್ಥಿನಿಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಿಲ್ಲ.
ಇದನ್ನೂ ಓದಿ: ನನ್ನಲ್ಲಿ ಧೈರ್ಯ ತುಂಬಲು ಅಷ್ಟು ದೂರದಿಂದ ಬಂದ ಅಜ್ಜಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು? ಪಲ್ಲವಿ ರಾವ್
ಸದ್ಯ, 17 ವೀಸಾಗಳಡಿ ದೇಶದಲ್ಲಿದ್ದ ಪಾಕ್ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ. ಇದರ ಹೊರತಾಗೂ ಕದ್ದು ಮುಚ್ಚಿ ಭಾರತದಲ್ಲೇ ಉಳಿದವರಿಗೆ 3 ವರ್ಷ ಜೈಲು ಶಿಕ್ಷೆ, 3 ಲಕ್ಷ ರೂ. ದಂಡ ಬೀಳಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 am, Wed, 30 April 25








