AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್​​ ವೇಳೆ ಹೈಡ್ರಾಮಾ: ಚುನಾವಣಾ ಅಧಿಕಾರಿಯಿಂದಲೇ ಕಳ್ಳ ಮತದಾನ?

ತುಮಕೂರು ಕುಣಿಗಲ್‌ನ ಸಂತೆಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಚುನಾವಣಾಧಿಕಾರಿಯೇ ಕಾಂಗ್ರೆಸ್ ಪರವಾಗಿ ಕಳ್ಳ ಮತದಾನ ಮಾಡಿದ್ದಾರೆಂದು ಜೆಡಿಎಸ್ ಆರೋಪಿಸಿದೆ. ಜೇಬಿನಲ್ಲಿ ಮತಪತ್ರಗಳನ್ನು ತಂದು ಅಧಿಕಾರಿಯೇ ಮತಪೆಟ್ಟಿಗೆಗೆ ಹಾಕುತ್ತಿದ್ದಾಗ ಜೆಡಿಎಸ್ ಏಜೆಂಟ್‌ ತಡೆದಿದ್ದಾರೆ. ಪರಿಶೀಲನೆ ವೇಳೆ ಕಿಸೆಯಲ್ಲಿ 25 ಮತಪತ್ರಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಈ ಸಂಬಂಧ ಚುನಾವಣಾಧಿಕಾರಿ ವಿರುದ್ಧ ದೂರು ದಾಖಲಾಗಿದೆ. ಪರಿಣಾಮವಾಗಿ, ಚುನಾವಣೆಯನ್ನು ರದ್ದುಗೊಳಿಸಲಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್​​ ವೇಳೆ ಹೈಡ್ರಾಮಾ: ಚುನಾವಣಾ ಅಧಿಕಾರಿಯಿಂದಲೇ ಕಳ್ಳ ಮತದಾನ?
ಎಲೆಕ್ಷನ್​​ ವೇಳೆ ಭಾರಿ ಹೈಡ್ರಾಮಾImage Credit source: Tv9 Kannada
Jagadisha B
| Edited By: |

Updated on:Mar 15, 2026 | 10:43 PM

Share

ತುಮಕೂರು, ಮಾರ್ಚ್​​ 15: ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಚುನಾವಣಾ ಅಧಿಕಾರಿಯೇ ಕಾಂಗ್ರೆಸ್​​ ಪರ ಫೋರ್ಜರಿ ಮಾಡಿರುವ ಆರೋಪ ಕೇಳಿಬಂದಿದ್ದು, ಜೇಬಿನಲ್ಲಿ ಮತಪತ್ರಗಳನ್ನು ತುಂಬಿಕೊಂಡು ಬಂದು ಮತ ಪೆಟ್ಟಿಗೆಗೆ ಹಾಕಿರೋದಾಗಿ ಜೆಡಿಎಸ್​​ ದೂರಿದೆ. ಈ ಸಂಬಂಧ ಚುನಾವಣಾಧಿಕಾರಿ ವಿರುದ್ಧ ಕುಣಿಗಲ್​​ನ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿದ್ದು, ಹೈಡ್ರಾಮಾದ ಬಳಿಕ ಚುನಾವಣೆಯನ್ನೇ ರದ್ದು ಮಾಡಿದ ಪ್ರಸಂಗ ನಡೆದಿದೆ.

ಸಂತೆಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಮಂದಿ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. ಸಾಲಗಾರರ 11 ಕ್ಷೇತ್ರ ಮತ್ತು 1 ಸಾಮಾನ್ಯ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ನಡೆದ ಎಲೆಕ್ಷನ್​​ಗೆ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇಕಡ 20ರಷ್ಟು ಮತದಾನ ಬಾಕಿ ಇರುವಾಗ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಬ್ಯಾಲೇಟ್ ಪೇಪರನ್ನು ಅಕ್ರಮವಾಗಿ ಮತಪೆಟ್ಟಿಗೆಗೆ ಚುನಾವಣಾಧಿಕಾರಿ ಸುನೀಲ್​​ ಸೇರಿಸಿದ‌ ಆರೋಪವನ್ನು ಜೆಡಿಎಸ್​​ ಮಾಡಿದೆ. ಸಾಲಗಾರರ ಕ್ಷೇತ್ರ ಮತಗಟ್ಟೆ ಸಂಖ್ಯೆ 1ರಲ್ಲಿ ಚುನಾವಣಾಧಿಕಾರಿಯೇ ಜೇಬಿನಲ್ಲಿ ತುಂಬಿಕೊಂಡು ಬಂದು ಮತಪತ್ರವನ್ನು ಮತಪೆಟ್ಟಿಗೆಗೆ ಹಾಕಿದ್ದಾರೆ. ಇದನ್ನು ಜೆಡಿಎಸ್ ಎಂಜೆಂಟ್ ಕಂಡು ತಡೆದಿದ್ದಾರೆ. ಈ ವೇಳೆ ಸುನೀಲ್​​ ಅವರ ಜೇಬಿನಲ್ಲಿ 25 ಮತಪತ್ರಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದ್ದು, ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್; ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್​​​​ ಮನೆಯೊಂದು ಎರಡು ಬಾಗಿಲು

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಣಿಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಚುನಾವಣಾಧಿಕಾರಿಯಿಂದ ಕಳ್ಳ ಮತದಾನ ನಡೆದಿದೆ. ತಮ್ಮದೇ ಸರ್ಕಾರ ಇದೆ ಎಂದು ಶಾಸಕರು ತಾಲೂಕಿನಲ್ಲಿ ಮಾಡಬಾರದ ಅನಾಚಾರ ಮಾಡುತ್ತಿದ್ದಾರೆ. ಈ ಹಿಂದೆ ರಾಮನಗರ ಮತ್ತು ಹಾಸನದಲ್ಲಿ ಚುನಾವಣಾ ಅಕ್ರಮ ಮಾಡಿದ್ದ ಸುನೀಲ್​​ರನ್ನು ಕುಣಿಗಲ್ ತಾಲೂಕಿಗೆ ಹಾಕಿಸಿದ್ದಾರೆ. ಕಿಟಿಕಿಯಿಂದ ಗೌಪ್ಯವಾಗಿ ಮತಪತ್ರಗಳನ್ನು ತಂದು ಏಜೆಂಟರು ಇಲ್ಲದಿದ್ದಾಗ ಮತಪೆಟ್ಟಿಗೆಗೆ ತುಂಬುತ್ತಿದ್ದರು. ಸುಮಾರು ನೂರರಿಂದ ನೂರೈವತ್ತು ಈ ರೀತಿ ಕಳ್ಳಮತದಾನ ನಡೆದಿದೆ. ಚುನಾವಣಾಧಿಕಾರಿ ವಿರುದ್ಧ ನಾವು ದೂರು ನೀಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಅವರ ಜೊತೆ ಯಾರ್ಯಾರು ಭಾಗಿಯಾಗಿದ್ದಾರೋ ಅವರಿಗೂ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 10:31 pm, Sun, 15 March 26

Follow Us