Karnataka Snakebite Cases: ಕೇವಲ 120 ದಿನಗಳಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಹಾವು ಕಡಿತ!
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಾಂಕ್ರೀಟೀಕರಣ ಹೆಚ್ಚಾಗುತ್ತಿದೆ. ಕಾಡು ಮೇಡಿನ ಜಾಗದಲ್ಲಿ ಬೃಹತ್ ಕಟ್ಟಡಗಳು ಮೇಲೇಳುತ್ತಿವೆ. ಎಲ್ಲೂ ಆಶ್ರಯ ಸಿಗದೇ ಮೂಕ ರೋಧನೆ ಅನುಭವಿಸುತ್ತಿರುವ ಪ್ರಾಣಿ, ಪಕ್ಷಿಗಳ ಮಧ್ಯೆ ಇತರ ಜಿಲ್ಲೆಗಳೂ ಸೇರಿ ರಾಜಧಾನಿ ಬೆಂಗಳೂರಿನಲ್ಲಿ ಹಾವುಗಳ ಕಡಿತ ಪ್ರಕರಣಗಳು ಹೆಚ್ಚಾಗಿವೆ. ಕೇವಲ 120 ದಿನಗಳಲ್ಲಿ 3259 ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ಇದು ಆರೋಗ್ಯ ಇಲಾಖೆಯ ನಿದ್ದೆ ಕೆಡಿಸಿದ್ದು, ಹಾವು ಕಡಿತದಿಂದ ಸಂಭವಿಸಿದ ಸಾವುಗಳ ಆಡಿಟ್ಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಬೆಂಗಳೂರು, ಏಪ್ರಿಲ್ 30: ಕರ್ನಾಟಕದಲ್ಲಿ ದಿನೇ ದಿನೇ ಹಾವು ಕಡಿತದ (Snake Bites) ಪ್ರಕರಣಗಳು ಹೆಚ್ಚಾಗುತ್ತಿವೆ. ಕೇವಲ 120 ದಿನಗಳಲ್ಲಿ 3259 ಪ್ರಕರಣಗಳು ದಾಖಲಾದ್ದು, 20 ಜನ ಹಾವಿನ ಕಡಿತಕ್ಕೆ ಬಲಿಯಾಗಿದ್ದಾರೆ. ಹಾವು ಕಡಿತ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ಎಚ್ಚರಿಕೆ ಸಂದೇಶ ಸಹಿತ ‘ಟಿವಿ9’ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಇದೀಗ ಡೆತ್ ಆಡಿಟ್ ಮಾಡಲು ಮುಂದಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಹಾವು ಕಡಿತವಾಗಿದೆ. ಇದು ಆರೋಗ್ಯ ಇಲಾಖೆಯ ನಿದ್ದೆ ಕೆಡಿಸಿದೆ. ಕಳೆದ ಒಂದೇ ವಾರದಲ್ಲಿ 243 ಹಾವು ಕಡಿತ ಪ್ರಕರಣ ವರದಿಯಾಗಿದೆ. ಈ ಪೈಕಿ ಇಬ್ಬರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ 3259 ಜನರಿಗೆ ಹಾವು ಕಡಿತವಾದರೆ, 20 ಜನ ಅಸುನೀಗಿದ್ದಾರೆ. ಹಾವು ಕಡಿತ ಪ್ರಕರಣಗಳು ಹೆಚ್ಚಳವಾದ ಬೆನ್ನಲ್ಲೇ ಎಚ್ಚೆತ್ತುಗೊಂಡ ಆರೋಗ್ಯ ಇಲಾಖೆ, ರಾಜ್ಯದಲ್ಲಿನ ಹಾವು ಕಡಿತ ಏರಿಕೆ ಹಾಗೂ ಸಾವುಗಳ ಬಗ್ಗೆ ಡೆತ್ ಆಡಿಟ್ ಮಾಡಲು ಮುಂದಾಗಿದೆ.
ಮೂರು ವರ್ಷಗಳಲ್ಲಿ 15 ಸಾವಿರ ಜನರಿಗೆ ಹಾವು ಕಡಿತ
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 60ಕ್ಕೂ ಹೆಚ್ಚು ಜನರು ಹಾವು ಕಡಿತದಿಂದ ಸಾವಿಗೀಡಾಗಿದ್ದಾರೆ. ಕೆಲವರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ಇನ್ನು ಕೆಲವರು ಔಷಧ ಸಿಗದೆ ಸಾವನ್ನಪ್ಪಿದ್ದರು. ಮೂರು ವರ್ಷಗಳಲ್ಲಿ 15 ಸಾವಿರ ಜನರು ಹಾವು ಕಡಿತಕ್ಕೆ ಒಳಗಾಗಿದ್ದು, ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹಾವು ಕಡಿತ ಪ್ರಕರಣ ಏರಿಕೆ ಹಿನ್ನಲೆ ರಾಜ್ಯದ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತದ ಚಿಕಿತ್ಸೆಗೆ ಅಗತ್ಯ ಇರುವ ಔಷಧ ದಾಸ್ತಾನು ಇಟ್ಟುಕೊಳ್ಳವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಅಷ್ಟೇ ಅಲ್ಲ 20 ಸಾವುಗಳು ಯಾಕೆ ಸಂಭವಿಸಿವೆ? ಯಾಕೆ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ? ಏನೆಲ್ಲ ನಿರ್ಲಕ್ಷ್ಯವಾಗಿದೆ ಎಂಬುದನ್ನು ಪರಾಮರ್ಶಿಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಇಲಾಖೆಯ ಯೋಜನಾ ವಿಭಾಗದ ನಿರ್ದೇಶಕ ಅನ್ಸರ್ ಅಹಮ್ಮದ್ ತಿಳಿಸಿದ್ದಾರೆ.
ಆ್ಯಂಟಿ ಸ್ನೇಕ್ ವೀನೋಮ್ ಔಷಧ ಕೊರತೆ
ಹಾವಿನ ಕಡಿತಕ್ಕೆ ವಿಷ ನಿರೋಧಕ ಔಷಧ ಅಂದರೆ ಎಎಸ್ವಿ ನೀಡಬೇಕು. ಉಸಿರಾಟದ ತೊಂದರೆ, ಉರಿ, ಊತ, ನರದೌರ್ಬಲ್ಯ, ರಕ್ತದೊತ್ತಡದಲ್ಲಿ ಏರುಪೇರು, ಕಣ್ಣುಗಳ ರೆಪ್ಪೆ ಮುಚ್ಚಿದ್ದು ಮುಂತಾದವು ಕಂಡುಬಂದಲ್ಲಿ ಆ್ಯಂಟಿ ಸ್ನೇಕ್ ವೀನೋಮ್ ಎಎಸ್ವಿ ಕೊಟ್ಟು ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಸದ್ಯ ದೇಶದಲ್ಲಿ ಈ ಔಷಧ ತಯಾರಿಕೆ ಘಟಕ ಇರುವುದು ಚೆನೈ ಹಾಗೂ ಪುಣೆಯ್ಲಿ ಮಾತ್ರ. ಹೀಗಾಗಿ ತುರ್ತು ಬೇಡಿಕೆಯಷ್ಟು ಔಷಧ ಲಭ್ಯವಾಗುತ್ತಿಲ್ಲ.
ಹೆಚ್ಚಾಗುತ್ತಿದೆ ಹಾವುಗಳ ವಿಷ!
ಹಿಂದೆಲ್ಲಾ ಹಾವು ಕಚ್ಚಿದಾಗ 10 ಆ್ಯಂಟಿ ಸ್ನೇಕ್ ವೈಯಲ್ ಸಾಕಾಗುತ್ತಿತ್ತು. ಆದರೀಗ ಹಾವುಗಳ ವಿಷದ ಪ್ರಮಾಣ ಜಾಸ್ತಿ ಆಗಿದ್ದು, 25 ವೈಯಲ್ ಕೂಡ ಸಾಲುತ್ತಿಲ್ಲ ಎಂದು ಉರಗ ತಜ್ಞ ಮೋಹನ್ ತಿಳಿಸಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್ಗೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ
ಕಳೆದ ವರ್ಷ ಫೆಬ್ರವರಿ 12ರಂದು ರಾಜ್ಯ ಸರಕಾರ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದೆ. ರಾಜ್ಯದ ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಹಾವು ಕಡಿತದ ಎಲ್ಲ ಪ್ರಕರಣಗಳನ್ನು ಅಂದರೆ ಒಳ ರೋಗಿಗಳು, ಹೊರ ರೋಗಿಗಳು ಮತ್ತು ಸಾವಿನ ಪ್ರಕರಣಗಳೇ ಆಗಿರಲಿ ಸಮಗ್ರ ಆರೋಗ್ಯ ಮಾಹಿತಿ ನೋಂದಾಯಿಸಬೇಕು ಎಂದು ಆದೇಶಿಸಿದೆ. ಕರ್ನಾಟಕದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಾವಿನ ಸಂಖ್ಯೆ ಮಾತ್ರ ತಗ್ಗಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Wed, 30 April 25







