ಅತ್ಯಾಚಾರ ಕೇಸ್: ಹೊಸ ವಕೀಲರಿಗಾಗಿ ಕೋರ್ಟ್ ಮುಂದೆ ಪರಿ ಪರಿಯಾಗಿ ಬೇಡಿಕೊಂಡ ಪ್ರಜ್ವಲ್-ಭವಾನಿ ರೇವಣ್ಣ!
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಹೊಸ ವಕೀಲರ ನೇಮಕ ಮಾಡಿಕೊಳ್ಳಲು ಪ್ರಜ್ವಲ್ ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಕೋರ್ಟ್ ಮುಂದೆ ಅಂಗಲಾಚಿದ್ದಾರೆ. ಆದರೂ ಸಹ ಜನಪ್ರತಿನಿಶಿಗಳ ವಿಶೇಷ ಕೋರ್ಟ್, ತಾಯಿ ಮಗ ಕೇಳಿದಷ್ಟು ಸಮಯ ನೀಡಲು ನಿರಾಕರಿಸಿದೆ.

ಬೆಂಗಳೂರು, (ಏಪ್ರಿಲ್ 28): ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ನಿಂದ ವಕೀಲ ಜಿ ಅರುಣ್ ವಕಾಲತ್ತಿನಿಂದ ನಿವೃತ್ತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಹೊಸ ವಕೀಲರ (New Advocate) ನೇಮಿಸಿಕೊಳ್ಳಲು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾಲಾವಕಾಶ ಕೇಳಿದ್ದಾರೆ. ಆದ್ರೆ, ಇದಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರಾಕರಿಸಿದೆ. ಆದರೂ ವಕೀಲರನ್ನು ನೇಮಿಸಲು ಕಾಲಾವಕಾಶ ನೀಡಬೇಕೆಂದು ಪುತ್ರನ ಪರವಾಗಿ ಮನವಿ ಮಾಡಲು ಬಂದ ಭವಾನಿ ರೇವಣ್ಣಗೆ ಕೋರ್ಟ್ ಅವಕಾಶ ನೀಡಿಲ್ಲ. ವಕೀಲರ ನೇಮಿಸಿಕೊಳ್ಳಲು ನಾಳೆವರೆಗೆ (ಏಪ್ರಿಲ್ 29) ಕೊನೆಯ ಅವಕಾಶ ನೀಡುತ್ತೇನೆ. ನೀವು ಕೇಳಿದಷ್ಟು ಸಮಯ ನೀಡಲಾಗುವುದಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ಜಡ್ಜ್ ಸಂತೋಷ್ ಗಜಾನನ ಭಟ್ ಖಡಕ್ ಆಗಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರನ್ನು ಬದಲಿಸುವಂತೆ ಪ್ರಜ್ವಲ್ ಪರ ವಕೀಲರು ಕೋರಿದ್ದ ಜ್ಞಾಪನಾ ಪತ್ರ (ಮೆಮೋ)ವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಬುಧವಾರ ತಿರಸ್ಕರಿಸಿದ್ದರು. ಈ ಬೆನ್ನಲ್ಲೇ ಪ್ರಜ್ವಲ್ ಪರ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ನ್ಯಾಯಾಧೀಶರಿಗೆ ಮೆಮೋ ಸಲ್ಲಿಸಿದ್ದರು. ಹೀಗಾಗಿ ಬೇರೆ ವಕೀಲರನ್ನು ನೇಮಿಸಿಕೊಳ್ಳಲು ಸಮಯ ನೀಡುವಂತೆ ಪ್ರಜ್ವಲ್ ರೇವಣ್ಣ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಮನವಿ ಮಾಡಿದ್ದಾರೆ. ಆದ್ರೆ, ಇದಕ್ಕೆ ಕೋರ್ಟ್ ಅವಕಾಶ ನೀಡಿಲ್ಲ. ನಾಳೆ(ಏಪ್ರಿಲ್ 29) ವೇಲೆಗೆ ವಕೀಲರನ್ನು ನೇಮಿಸಿಕೊಳ್ಳಬೇಕೆಂದು ನ್ಯಾಯಧೀಶ ಸಂತೋಷ್ ಗಜಾನನ ಭಟ್ ಸೂಚಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಕೇಸ್ ಬೇರೆ ಕೋರ್ಟ್ಗೆ ವರ್ಗಾಯಿಸಲು ಕೋರಿದ್ದ ಅರ್ಜಿ ವಜಾ
ಸಮಯಕ್ಕೆ ಅಂಗಲಾಚಿದ ತಾಯಿ-ಮಗ
ಟ್ರಯಲ್ ನಿಗದಿ ಮಾಡುವುದಾಗಿ ಜಡ್ಜ್ ಹೇಳಿದಾಗ ವಕೀಲರನ್ನು ನೇಮಿಸಲು ಕಾಲಾವಕಾಶ ನಿಡುವಂತೆ ಪ್ರಜ್ವಲ್ ರೇವಣ್ಣ ಅವರು ಮತ್ತೆ ಮನವಿ ಮಾಡಿದರು. ದಯವಿಟ್ಟು ಮೇ 2ರ ವರೆಗಾದರೂ ಸಮಯ ಕೊಡಿ ಎಂದು ಅಂಗಲಾಚಿದರು. ಇದಕ್ಕೆ ಗರಂ ಆದ ಜಡ್ಜ್ ಸಂತೋಷ್ ಗಜಾನನ ಭಟ್, ನೀವು ಕೇಳಿದಷ್ಟು ಸಮಯ ನೀಡಲಾಗುವುದಿಲ್ಲ. ನಮ್ಮ ತಾಯಿಯವರು ವಕೀಲರ ನೇಮಿಸಲು ಯತ್ನಿಸುತ್ತಿದ್ದಾರೆ ಎಂದರು.
ಈ ವೇಳೆ ಭವಾನಿ ರೇವಣ್ಣ ಅವರು ಮತ್ತೆ ಮನವಿ ಮಾಡಲು ಮುಂದಾದರು. ಆದ್ರೆ, ಇದಕ್ಕೆ ಕೋರ್ಟ್, ಅವಕಾಶ ನೀಡಿಲ್ಲ. ಇದರಿಂದ ಭವಾನಿ ರೇವಣ್ಣ ಕೋರ್ಟ್ ಹಾಲ್ನಿಂದ ಹೊರನಡೆದರು. ಬಳಿಕ ಕೋರ್ಟ್, ವಿಚಾರಣೆಯನ್ನು ನಾಳೆಗೆ(ಏಪ್ರಿಲ್ 29) ಮುಂದೂಡಿದರು.
ಇನ್ನು ಕೋರ್ಟ್ ಹಾಲ್ನಲ್ಲಿ ಪ್ರಜ್ವಲ್ ರೇವಣ್ಣನನ್ನು ನೋಡಿ ತಾಯಿ ಭವಾನಿ ಕಣ್ಣು ಒರೆಸಿಕೊಂಡು ಕೈಕಟ್ಟಿ ನಿಂತಕೊಂಡಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲೆಯೂ ಹಾಜರಾಗಿದ್ದರು.
Published On - 5:03 pm, Mon, 28 April 25







