ಜೂನ್ ತಿಂಗಳಲ್ಲಿ ಅನ್ನಭಾಗ್ಯದ ಅಕ್ಕಿ ಪಡೆಯದವರಿಗಿಲ್ಲ ಹಣ; ಆಹಾರ ಇಲಾಖೆ ನಿರ್ಧಾರ

ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಹಾಕಲು ಸರ್ಕಾರ ತೀರ್ಮಾನಿಸಿದೆ. ಕಳೆದ ತಿಂಗಳು 1,28,23,868 ಪೈಕಿ 1,17,29,296 ಕುಟುಂಬಗಳು ಅಕ್ಕಿ ಪಡೆದಿದ್ದವು. ಉಳಿದ 10.94 ಲಕ್ಷ ಬಿಪಿಎಲ್​​ ಕುಟುಂಬ​​ಗಳು ಪಡಿತರ ಅಕ್ಕಿ ಪಡೆದಿರಲಿಲ್ಲ.

ಜೂನ್ ತಿಂಗಳಲ್ಲಿ ಅನ್ನಭಾಗ್ಯದ ಅಕ್ಕಿ ಪಡೆಯದವರಿಗಿಲ್ಲ ಹಣ; ಆಹಾರ ಇಲಾಖೆ ನಿರ್ಧಾರ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Jul 06, 2023 | 8:58 PM

ಬೆಂಗಳೂರು: ಐದು ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಐದು ಕೆಜಿ ಅಕ್ಕಿಯ (Rice) ಬದಲು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಕಾಂಗ್ರೆಸ್ ಸರ್ಕಾರ (Congres Government) ಈಗಾಗಲೇ ತೀರ್ಮಾನಿಸಿದೆ. ಅಕ್ಕಿ ಖರೀದಿಸಲು ಸಮಸ್ಯೆಯಾಗಿರುವ ಕಾರಣ ಅದಕ್ಕೆ ವ್ಯವಸ್ಥೆ ಆಗುವ ವರೆಗೆ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ತೀರ್ಮಾನ ಮಾಡಿತ್ತು. ಆದರೆ, ಇದೀಗ ಜೂನ್ ತಿಂಗಳಲ್ಲಿ ‘ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ಪಡೆದ ಬಿಪಿಎಲ್ ಕಾರ್ಡ್​​​ದಾರರ ಖಾತೆಗೆ ಮಾತ್ರ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ.

ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಹಾಕಲು ಸರ್ಕಾರ ತೀರ್ಮಾನಿಸಿದೆ. ಕಳೆದ ತಿಂಗಳು 1,28,23,868 ಪೈಕಿ 1,17,29,296 ಕುಟುಂಬಗಳು ಅಕ್ಕಿ ಪಡೆದಿದ್ದವು. ಉಳಿದ 10.94 ಲಕ್ಷ ಬಿಪಿಎಲ್​​ ಕುಟುಂಬ​​ಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬಗಳು ಅಂದರೆ, ಅಂದಾಜು 20 ಲಕ್ಷ ಜನ ಅಕ್ಕಿ ಪಡೆದಿಲ್ಲ. 20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂ. ಹಣ ಉಳಿತಾಯ ಆಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕೆಲವರು ಬಿಪಿಎಲ್ ಕಾರ್ಡ್‌ ಹೊಂದುವ ಉದ್ದೇಶದಿಂದ ಪಡಿತರ ಪಡೆಯುವುದಿಲ್ಲ. ಉಚಿತ ಆರೋಗ್ಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್‌ ಹೊಂದಿರುತ್ತಾರೆ. ಇಂತಹವರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ನೀಡುವುದು ಅನಗತ್ಯ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Anna Bhagya: ಹೆಚ್ಚುವರಿ 5ಕೆಜಿ ಅಕ್ಕಿ ಬದಲು ಹಣ ನೀಡಲು ನಿರ್ಧಾರ; ಇದರಿಂದ ಸರ್ಕಾರಕ್ಕೆ ಉಳಿಯುತ್ತೆ ಕೋಟಿ ಕೋಟಿ ರೂ

ಕಳೆದ 3 ತಿಂಗಳಿನಿಂದ 5,37,213 ಬಿಪಿಎಲ್ ಕುಟುಂಬಸ್ಥರು ಅಕ್ಕಿ ಪಡೆದಿಲ್ಲ. ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಆಹಾರ ಇಲಾಖೆ ನಿರ್ಧರಿಸಿದೆ.

ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದಿಂದ ದೊರೆಯುತ್ತದೆ. ಹೆಚ್ಚುವರಿಯಾಗಿ 5 ಕೆಜಿ ರಾಜ್ಯ ಸರ್ಕಾರ ನೀಡಬೇಕಾಗಿದೆ. ಖರೀದಿಗೆ ಸಮಸ್ಯೆಯಾಗಿರುವುದರಿಂದ ಅಕ್ಕಿ ಬದಲಿಗೆ 170 ರೂ. ಹಣ ವರ್ಗಾವಣೆ ಮಾಡಲು ಸರ್ಕಾರ ಇತ್ತೀಚೆಗೆ ತೀರ್ಮಾನ ಕೈಗೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Thu, 6 July 23