
ಬೆಂಗಳೂರು, (ಏಪ್ರಿಲ್ 13): ರಾಜ್ಯ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗೆ (employees transfer) ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಾವಳಿಗಳನ್ನು ರೂಪಿಸಲಾಗಿದೆ. ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದ್ದು ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ನೌಕರರು ತಮ್ಮ ಸೇವಾ ದಾಖಲೆಗಳನ್ನು (Service Records) ನಿಖರವಾಗಿ ಒದಗಿಸುವುದು ಕಡ್ಡಾಯವಾಗಿದೆ. ಕೇವಲ ವೈಯಕ್ತಿಕ ಬೇಡಿಕೆಗಳಲ್ಲದೆ, ಇಲಾಖೆಯ ಆಡಳಿತಾತ್ಮಕ ಅಗತ್ಯತೆಗಳನ್ನು (Administrative Exigencies) ಪ್ರಮುಖ ಮಾನದಂಡವಾಗಿ ಪರಿಗಣಿಸಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತದೆ.
ಏಪ್ರಿಲ್ 13ರಿಂದ ಮೇ 31ರ ವರಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಈ ದಿನಾಂಕದೊಳಗೆ ಆಸಕ್ತ ಮತ್ತು ಅರ್ಹ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ವಿಶೇಷಚೇತನ ನೌಕರರಿಗೆ ವಿನಾಯಿತಿ ಸೇರಿದಂತೆ ಹಲವು ನಿಯಮಗಳನ್ನು ವಿಧಿಸಲಾಗಿದೆ.
ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯ ನೆಲೆಯ ಮೇಲೆ ಆದ್ಯತೆ ನೀಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅವು ಈ ಕೆಳಗಿನಂತಿವೆ ನೋಡಿ.
ಆರೋಗ್ಯ ಸಮಸ್ಯೆ: ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ ವಿಶೇಷ ಆದ್ಯತೆ.
ಮಹಿಳಾ ನೌಕರರು:ಗರ್ಭಿಣಿ ಮಹಿಳಾ ನೌಕರರ ವರ್ಗಾವಣೆ ವಿನಂತಿಗಳನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು.
ಕುಟುಂಬದ ತುರ್ತು:ಕುಟುಂಬದ ಅನಿವಾರ್ಯ ಪರಿಸ್ಥಿತಿ ಅಥವಾ ಮಕ್ಕಳ ಶಿಕ್ಷಣದಂತಹ ಕಾರಣಗಳಿಗೆ ನಿಯಮಾನುಸಾರ ವಿನಾಯಿತಿ ನೀಡಲಾಗುತ್ತದೆ.
ಭತ್ಯೆ ಮತ್ತು ಸೌಲಭ್ಯಗಳು: ವರ್ಗಾವಣೆಗೊಂಡ ನೌಕರರಿಗೆ ಅವರ ಸೇವಾ ಅವಧಿ ಮತ್ತು ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ನಿಗದಿಪಡಿಸಿದ ವರ್ಗಾವಣೆ ಭತ್ಯೆ (Transfer Allowance) ಹಾಗೂ ಇತರ ಸರ್ಕಾರಿ ಸೌಲಭ್ಯಗಳು ಲಭ್ಯವಿರಲಿವೆ.
ಸೂಚನೆ: ಅರ್ಹ ನೌಕರರು ನಿಗದಿತ ಕಾಲಮಿತಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕೃತ ಜಾಲತಾಣ ಅಥವಾ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ