
ಬೆಂಗಳೂರು, ಫೆ.2: ರಾಜ್ಯದ ಖಾದಿ ಬಟ್ಟೆಗಳಿಗೆ (Khadi Push in Karnataka) ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸರ್ಕಾರ ತನ್ನ ಅಧಿಕಾರಿಗಳಿಗೆ ಹೊಸ ಆದೇಶವೊಂದನ್ನು ನೀಡಿದೆ. ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಖಾದಿ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂಬ ಆದೇಶವನ್ನು ನೀಡಲಾಗಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಹೇಳಿದೆ. ದೇಶೀಯವಾಗಿ ತಯಾರಿಸಿದ ಖಾದಿ ಬಟ್ಟೆಗಳಿಗೆ ಉತ್ತೇಜನ ನೀಡುವುದು ಮತ್ತು ಖಾದಿ ಗ್ರಾಮೋದ್ಯೋಗ ವಲಯವನ್ನು ಆರ್ಥಿಕವಾಗಿ ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸರ್ಕಾರಿ ನೌಕರರು ಖಾದಿ ಬಟ್ಟೆಗಳನ್ನು ಖರೀದಿಸಲು ಅನುಕೂಲವಾಗುವಂತೆ, ಸರ್ಕಾರಿ ಖಾದಿ ಮಳಿಗೆಗಳಲ್ಲಿ ಈಗಿರುವ ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ 5% ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಈ ನಿಯಮವನ್ನು ಅಧಿಕೃತವಾಗಿ ಏಪ್ರಿಲ್ 21, 2026ರಂದು (ಸರ್ಕಾರಿ ನೌಕರರ ದಿನಾಚರಣೆ) ಚಾಲನೆ ನೀಡಲಾಗುವುದು ಎಂದು ಹೇಳಲಾಗಿದೆ.ರಕ್ಷಣಾ ಇಲಾಖೆಯ (Military Canteen) ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು MSIL ಮೂಲಕ ಕ್ಯಾಂಟೀನ್ ಸ್ಥಾಪಿಸುವ ಪ್ರಸ್ತಾವನೆಯೂ ಬಜೆಟ್ನಲ್ಲಿ ಸೇರುವ ಸಾಧ್ಯತೆಯಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (KSIC) ವತಿಯಿಂದ ರೇಷ್ಮೆ ಸೀರೆ ಮತ್ತು ಬಟ್ಟೆಗಳ ಖರೀದಿಯ ಮೇಲೆ ಎಲ್ಲಾ ನೌಕರರಿಗೆ ವಿಶೇಷ ರಿಯಾಯಿತಿ ವಿಸ್ತರಿಸಲು ಚರ್ಚಿಸಲಾಗಿದೆ. ಈ ನಿರ್ಧಾರವು ರಾಜ್ಯದ ಸಾವಿರಾರು ನೇಕಾರರಿಗೆ ಮತ್ತು ಖಾದಿ ಉದ್ಯಮಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಪುರುಷ ಉದ್ಯೋಗಿಗಳಿಗೆ ಸೂಚಿಸಲಾದ ಉಡುಪು ಖಾದಿ ಶರ್ಟ್ಗಳು, ಪ್ಯಾಂಟ್ಗಳು, ಓವರ್ಕೋಟ್ಗಳು ಮತ್ತು ಇತರ ಔಪಚಾರಿಕ ಉಡುಪುಗಳನ್ನು ಧರಿಸಬಹುದು, ಮಹಿಳಾ ಉದ್ಯೋಗಿಗಳು ಖಾದಿ ರೇಷ್ಮೆ ಸೀರೆಗಳು, ಚೂಡಿದಾರ್ಗಳು ಮತ್ತು ಇತರ ಔಪಚಾರಿಕ ಉಡುಪುಗಳನ್ನು ಧರಿಸಬಹುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ