ಶವಗಳನ್ನೂ ಬಿಡುತ್ತಿಲ್ಲ ಕಾಮುಕರು! ಮೃತದೇಹದ ಮೇಲೆ ಅತ್ಯಾಚಾರ ತಡೆಗೆ ಕಾನೂನು ರೂಪಿಸಲು ಕರ್ನಾಟಕ ಹೈಕೋರ್ಟ್ ಶಿಫಾರಸು

ಮೃತದೇಹಗಳ ಮೇಲಿನ ಅತ್ಯಾಚಾರ ಹಾಗೂ ವಿಕೃತಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಅತ್ಯಾಚಾರ (Rape) ತಡೆ ಕಾನೂನಿಗೆ ತಿದ್ದುಪಡಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ವಿಭಾಗೀಯ ಪೀಠ ಬುಧವಾರ ಅಭಿಪ್ರಾಯಪಟ್ಟಿದೆ.

ಶವಗಳನ್ನೂ ಬಿಡುತ್ತಿಲ್ಲ ಕಾಮುಕರು! ಮೃತದೇಹದ ಮೇಲೆ ಅತ್ಯಾಚಾರ ತಡೆಗೆ ಕಾನೂನು ರೂಪಿಸಲು ಕರ್ನಾಟಕ ಹೈಕೋರ್ಟ್ ಶಿಫಾರಸು
ಕರ್ನಾಟಕ ಹೈಕೋರ್ಟ್

Updated on: May 31, 2023 | 4:07 PM

ಬೆಂಗಳೂರು: ಮೃತದೇಹಗಳ ಮೇಲಿನ ಅತ್ಯಾಚಾರ ಹಾಗೂ ವಿಕೃತಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಅತ್ಯಾಚಾರ (Rape) ತಡೆ ಕಾನೂನಿಗೆ ತಿದ್ದುಪಡಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ವಿಭಾಗೀಯ ಪೀಠ ಬುಧವಾರ ಅಭಿಪ್ರಾಯಪಟ್ಟಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನೂ ಮಾಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ (IPC Section 377) ವ್ಯಾಪ್ತಿಗೆ ಮೃತದೇಹದ ಮೇಲಿನ ಅತ್ಯಾಚಾರವೂ ಸೇರಬೇಕು. ಈ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ಮಾಡಬೇಕು ಎಂದು ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ ನಾಯಕ್ ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಮೃತದೇಹಗಳ ಮೇಲಿನ ವಿಕೃತಿಗೆ ಶಿಕ್ಷೆಯಿದೆ. ಜೀವನದ ಹಕ್ಕಿನಲ್ಲಿ ಮೃತ ದೇಹದ ಘನತೆಯ ಹಕ್ಕೂ ಸೇರಿದೆ. ಹೀಗಾಗಿ 6 ತಿಂಗಳಲ್ಲಿ ಐಪಿಸಿ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಪೀಠವು ಶಿಫಾರಸು ಮಾಡಿದೆ.

ಏನಿದು ಮೃತದೇಹದ ಮೇಲಿನ ಅತ್ಯಾಚಾರ ಪ್ರಕರಣ?

ತುಮಕೂರಿನ ಯುವತಿಯೊಬ್ಬಳ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಪೀಠ, ಮೃತದೇಹದ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ ನೀಡಲು ಸದ್ಯಕ್ಕೆ ಕಾನೂನಿಲ್ಲದ ಕಾರಣ ಕೊಲೆ ಅಪರಾಧಕ್ಕೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿದೆ. ತುಮಕೂರಿನ ರಂಗರಾಜು ಅಲಿಯಾಸ್ ವಾಜಪೇಯಿ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕನ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಆಸ್ಪತ್ರೆಗಳ ಶವಾಗಾರಗಳಲ್ಲಿ ಮೃತ ದೇಹದ ಮೇಲೆ ಅತ್ಯಾಚಾರದ ಘಟನೆಗಳು ನಡೆದಿವೆ. ಇಂಥ ಕೃತ್ಯಗಳ ತಡೆಗಾಗಿ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. 6 ತಿಂಗಳಲ್ಲಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದೂ ನ್ಯಾಯಪೀಠ ಶಿಫಾರಸು ಮಾಡಿದೆ. ಜತೆಗೆ ಶವಾಗಾರಗಳಲ್ಲಿ ಶುಚಿತ್ವ ಕಾಪಾಡಲೂ ನಿರ್ದೇಶನ ನೀಡಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us