Karnataka News Highlights: ಚುನಾವಣೆ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸ್ತೇವೆ: ಕಾರಜೋಳ
Karnataka Assembly Polls 2023 Highlights News: ಶೃಂಗೇರಿ ಮಠಕ್ಕೆ ಇಂದು ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಉಭಯ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಇಂದು ರಾತ್ರಿ ಶ್ರೀಗಳ ಭೇಟಿಗೆ ಕುಮಾರಸ್ವಾಮಿ ಸಮಯ ಕೇಳಿದ್ದಾರೆ.
ರಾಜ್ಯದಲ್ಲಿ ಬೇಸಿಗೆಯ ಬಿಸಿ ಜೊತೆಗೆ ಚುನಾವಣೆಯ ಬಿಸಿ ಕೂಡ ಹೆಚ್ಚುತ್ತಿದೆ. ವಿಧಾನಸಭೆ ಚುನಾವಣೆಗೆ ದಿನಗಳ ಎಣಿಕೆ ಪ್ರಾರಂಭವಾಗಿದ್ದು ರಾಜಕೀಯ ಪಕ್ಷಗಳು ಪ್ರಚಾರವನ್ನು ಜೋರಾಗಿಯೇ ನಡೆಸುತ್ತಿವೆ. ಆಣೆ-ಪ್ರಮಾಣ, ಗಿಫ್ಟ್ ಪಾಲಿಟಿಕ್ಸ್ ಹೀಗೆ ನಾನಾ ತರಹದ ಆಮಿಷಗಳನ್ನು ಒಡ್ಡುತ್ತಿವೆ. ಇನ್ನು ಆರೋಪ-ಪ್ರತ್ಯಾರೋಪ ಕೂಡ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿಯ ಕೇಂದ್ರ ನಾಯಕರು ನೀನಾದ ಮೇಲೆ ನಾನು ಎಂಬಂತೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ರಾಜ್ಯದ ನಾಲ್ಕು ದಿಕ್ಕಲ್ಲೂ ಪಕ್ಷವನ್ನು ಸಂಘಟಿಸುತ್ತಿದ್ದು, ಕಾರ್ಯಕರ್ತರಲ್ಲಿ ಚುನಾವಣೆಯ ಹುರಪನ್ನು ತುಂಬಿಸುತ್ತಿದ್ದಾರೆ. ಬಿಜೆಪಿ ಪಾಲಿಗೆ ಕಾರ್ಯಕರ್ತರೇ ಬಲವಾಗಿದ್ದು, ಈ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಬಸ್ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ನ ನಾಯಕರು ಶಕ್ತಿ ಪ್ರದರ್ಶನ ಮಾಡುತ್ತಿದ್ದು, ತಮ್ಮ ಕ್ಷೇತ್ರದಲ್ಲಿ ಪ್ರಾಭಲ್ಯವನ್ನು ವೃದ್ದಿಸಿಕೊಳ್ಳುತ್ತಿದ್ದಾರೆ. ಇನ್ನು ಜೆಡಿಎಸ್ಗೆ ಹಾಸನ ತಲೆಬಿಸಿಯಾಗಿದ್ದು, ಕುಟುಂಬದಲ್ಲೇ ವಾಗ್ಯುದ್ದ ಶುರುವಾಗಿದೆ. ಇದರ ಜೊತೆಗೆ ಇಂದಿನ ಅಪ್ಡೇಟ್ಸ್ ತಿಳಿಯಲು ಟಿವಿ9 ಲೈವ್ ಫಲೋ ಮಾಡಿ.
LIVE NEWS & UPDATES
-
Karnataka News Live: ಸಿದ್ದರಾಮಯ್ಯ ವಿರುದ್ಧ ಗೋವಿಂದ್ ಕಾರಜೋಳ ತೀವ್ರ ವಾಗ್ದಾಳಿ
ಬೆಳಗಾವಿ: ಕಾಂಗ್ರೆಸ್ನವರಿಗೆ ಯಾವುದರ ಮೇಲೆ ನಂಬಿಕೆ ಇಲ್ಲಾ. ಸುಳ್ಳು ಹೇಳಿಕೊಂಡು ಓಡಾಡುವುದರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯನವರು ಐದು ವರ್ಷ ಯಾವುದೇ ಅಡೆತಡೆ ಇಲ್ಲದೆ ಮುಖ್ಯಮಂತ್ರಿ ಇದ್ದವರು. ನಾನು ಇಂತಹದ್ದೊಂದು ಕೆಲಸ ಮಾಡಿದೀನಿ ಅಂತಾ ಹೇಳಲಿ ನೋಡೋಣ. ಬರೀ ಅಕ್ಕಿ ಕೊಟ್ಟಿದ್ದೇನೆ ಅಂತಾ ಜಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಗೋವಿಂದ್ ಕಾರಜೋಳ ತೀವ್ರ ವಾಗ್ದಾಳಿ ಮಾಡಿದರು.
-
Karnataka News Live: ಚುನಾವಣೆ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸ್ತೇವೆ
ಬೆಳಗಾವಿ: ಚುನಾವಣೆ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸ್ತೇವೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಕಾರಜೋಳ ಹೇಳಿದರು. ಯಾರೇ ವಿರೋಧಿಸಿದ್ರೂ ನಮ್ಮ ಪಾಲಿನ 3.9 ಟಿಎಂಸಿ ನೀರು ಬಳಸ್ತೇವೆ. ನಮ್ಮ ಪಾಲಿನ ನೀರಿನ ಬಳಕೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ನ್ಯಾಯಾಲಯದ ಮೂಲಕವೇ ಕರ್ನಾಟಕ ಪಾಲಿನ ನೀರು ಹಂಚಿಕೆ ಆಗಿದೆ. ಹೀಗಾಗಿ ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಮಗಾರಿ ಆರಂಭಿಸ್ತೇವೆ ಎಂದು ಹೇಳಿದರು.
-
Karnataka News Live: ಕಾಂಗ್ರೆಸ್ ಘೋಷಣೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್
ಧಾರವಾಡ: ಅಧಿಕಾರಕ್ಕೆ ಬಂದ್ರೆ ಉಚಿತವಾಗಿ 10 ಕೆಜಿ ಅಕ್ಕಿ ಘೋಷಣೆ ವಿಚಾರವಾಗಿ ಕಾಂಗ್ರೆಸ್ ಘೋಷಣೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದ್ದು, ಕಾಂಗ್ರೆಸ್ ಪಕ್ಷ ಇಷ್ಟು ವರ್ಷಗಳ ಕಾಲ ಕತ್ತೆ ಕಾಯ್ತಾ ಇತ್ತಾ ಎಂದು ಪ್ರಶ್ನಿಸಿದ್ದಾರೆ. ನಾವು ಈಗಾಗಲೇ ಉಚಿತವಾಗಿ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಾವು 10 ಕೆಜಿ ಕೊಟ್ಟರೆ ಕಾಂಗ್ರೆಸ್ನವರು 20 ಕೆಜಿ ಅಂತಾರೆ. ಕಾಂಗ್ರೆಸ್ನವರು ಹೇಳಿದ್ದನ್ನು ಯಾವುದಾದರೂ ಮಾಡಿದ್ದಾರಾ ಎಂದರು.
Karnataka News Live: ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವ ಕಾರಜೋಳ ತಿರುಗೇಟು
ಬೆಳಗಾವಿ: ಬಿಜೆಪಿಗೆ ಸೋಲಿನ ಭೀತಿಯಿಂದ ಮೋದಿ, ಶಾರನ್ನು ಕರೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಚಿವ ಕಾರಜೋಳ ತಿರುಗೇಟು ನೀಡಿದ್ದು, ಸೋಲಿನ ಭೀತಿ ಕಾಡುತ್ತಿರುವುದು ಕಾಂಗ್ರೆಸ್ನವರಿಗೆ. ಕಾಂಗ್ರೆಸ್ನವರು ಎಲ್ಲಾ ಕಡೆ ಆಣೆ ಮಾಡಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಒಂದಾಗಿದ್ದೇವೆಂದು ಹೇಳಿಕೊಂಡು ತಿರುಗುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ತಿಮ್ಮಾಪುರ, ಬಂಡಿವಡ್ಡರ್ ಆಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂತಹ ದುಸ್ಥಿತಿ ಬಂದಿದೆ ಎಂದು ಕಾರಜೋಳ ಕಿಡಿಕಾರಿದರು.
Karnataka News Live: ಯಡಿಯೂರಪ್ಪ ನಿರ್ಧಾರ ಸ್ವಾಗತಿಸಿದ ಎಸ್.ಎಂ.ಕೃಷ್ಣ
ಬೆಂಗಳೂರು: ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸ್ವಾಗತಿಸಿದ್ದಾರೆ.
ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಯಡಿಯೂರಪ್ಪ ನಿರ್ಧಾರ ಸ್ವಾಗತಿಸಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ
Karnataka News Live: ಕುಟುಂಬ ರಾಜಕಾರಣ ಪ್ರಸ್ತಾಪಿಸಿದ ಅಮಿತ್ ಶಾಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ
ಶಿವಮೊಗ್ಗ: ಅಧಿವೇಶನದಲ್ಲಿ ಯಡಿಯೂರಪ್ಪ ವಿದಾಯ ಭಾಷಣ ವೇಳೆ ದೇವೇಗೌಡರನ್ನು ಹೊಗಳಿದ್ದಾರೆ. ಯಡಿಯೂರಪ್ಪನವರ ಈ ವಿಚಾರವನ್ನು ನಾನು ಸ್ವಾಗತಿಸುತ್ತೇನೆ ಅಂತಾ ಶಿವಮೊಗ್ಗದಲ್ಲಿ ಟಿವಿ9ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್.ಡಿ.ದೇವೇಗೌಡರ ವ್ಯಕ್ತಿತ್ವ ಹಾಗೇ ಇದೆ. ತಮ್ಮ ರಾಜಕೀಯ ಅನುಭವ ಮೂಲಕ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕರ್ನಾಟಕದ ಹಲವು ಸಮಸ್ಯೆಗಳಿಗೆ ದೇವೇಗೌಡರು ಸ್ಪಂದಿಸಿದ್ದಾರೆ ಎಂದು ಹೇಳಿದರು.
Karnataka News Live: ಮಾ.4ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಸಮಾವೇಶ
ಬೆಂಗಳೂರು: ಮಾ.4ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಸಮಾವೇಶ ಹಿನ್ನೆಲೆ ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಭಾಗವಹಿಸಲಿದ್ದಾರೆ. ದಾವಣಗೆರೆಯಲ್ಲಿ ಎಎಪಿ ಪದಾಧಿಕಾರಿಗಳ ಸಾರ್ವಜನಿಕ ಸಮಾವೇಶ ನಡೆಯಲಿದೆ.
Karnataka News Live: 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ
ಬೆಂಗಳೂರು: 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸುತ್ತೇನೆ. ಈ ಮೂಲಕ ಕೇಂದ್ರ ನಾಯಕರಿಗೆ ನಾವು ಕೊಡುಗೆ ನೀಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಕೊಡುಗೆ ನೀಡುತ್ತೇವೆ. ಪಕ್ಷದ ಹಿರಿಯರ ಸಹಕಾರದಿಂದ ಗುರಿ ತಲುಪುವ ವಿಶ್ವಾಸವಿದೆ ಎಂದು ಹೇಳಿದರು.
Karnataka News Live: ನಾನು ರಿಟೈರ್ಡ್ ಆಗುವ ಪ್ರಶ್ನೇಯೇ ಇಲ್ಲ: ಯಡಿಯೂರಪ್ಪ
ಬೆಂಗಳೂರು: ಜನರ ಆಶೀರ್ವಾದದಿಂದ ವಿಧಾನಸೌಧದಲ್ಲಿ ಕೆಲಸ ಮಾಡಿದ್ದೇವೆ. ಮೋದಿಜೀಯವರ ನೇತೃತ್ವದಲ್ಲಿ ಮೊತ್ತಮ್ಮೆ ಅಧಿಕಾರಕ್ಕೆ ಬರುತ್ತೇವೆ. ಚುನಾವಣೆಯಲ್ಲಿ ಬಹುಮತ ಸಾಧಿಸಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಪಕ್ಷ ಒಪ್ಪಿಗೆ ಕೊಟ್ಟರೆ ಶಿಕಾರಿಪುರದಲ್ಲಿ ವಿಜಯೇಂದ್ರನೇ ನೀಲ್ತಾನೆ. ನಾನು ರಿಟೈರ್ಡ್ ಆಗುವ ಪ್ರಶ್ನೇಯೇ ಇಲ್ಲ ಪಕ್ಷಕ್ಕಾಗಿ ದುಡಿಯುತ್ತೇನೆ. ರಾಜ್ಯದ ಉದ್ದಗಲಕ್ಕೂ ಚುನಾವಣೆ ಪ್ರವಾಸ ಮಾಡುತ್ತೇನೆ ಎಂದು ಟಿವಿ9ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
Karnataka News Live: ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು -ಯುಟಿ ಖಾದರ್
ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು ಎಂದು ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. BSY ರಕ್ಷಣೆ ಕೊಟ್ಟಿದ್ದರಿಂದ ಮುಕ್ತವಾಗಿ ಓಡಾಡಲು ಸಾಧ್ಯವಾಯ್ತು. ಜನರ ಕೆಲಸ ಫುಟ್ಬಾಲ್ ರೀತಿ ಆಗಬಾರದು. ಆಧಿಕಾರಿಗಳು ಕೆಲಸ ಮಾಡಬೇಕು, ನಾವು ನೇರಾನೇರ ಇರಬೇಕು. ಎಲ್ಲವನ್ನೂ ಗಳಿಸಿ ಪರಿಸ್ಥಿತಿ ವಿಷಮವಾದರೆ ಪ್ರಯೋಜನ ಆಗಲ್ಲ. ಟೆನ್ಷನ್ ರಹಿತ ರಾಜಕಾರಣ ಆಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
Karnataka News Live: ವಿಧಾನಪರಿಷತ್ನಲ್ಲಿ ಯಡಿಯೂರಪ್ಪರನ್ನು ಹೊಗಳಿದ ಟಿ.ಎ.ಶರವಣ
ವಿಧಾನಪರಿಷತ್ನಲ್ಲಿ ಟಿ.ಎ.ಶರವಣ, ಯಡಿಯೂರಪ್ಪರನ್ನು ಹೊಗಳಿದ್ದಾರೆ. ಯಡಿಯೂರಪ್ಪ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ HDK, ಸಿದ್ದರಾಮಯ್ಯ ಸ್ಥಾನವನ್ನೂ ತುಂಬಲು ಆಗಲ್ಲ ಎಂದರು. ಈ ವೇಳೆ ವಿಧಾನಪರಿಷತ್ ಸದಸ್ಯರು ಹೆಚ್.ಡಿ.ದೇವೇಗೌಡರ ಹೆಸರನ್ನು ನೆನಪಿಸಿದರು. ದೇವೇಗೌಡರು ದೇವರು ಬಿಡಿ ಎಂದು ಶರವಣ ಚರ್ಚೆ ಮುಂದುವರಿಸಿದರು.
Karnataka News Live: ಧಾರವಾಡದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಅಸಮಾಧಾನ
ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಮುಖಂಡರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಬ್ಯಾನರ್ ಅಂಟಿಸಿ, ಕರಪತ್ರ ಹಂಚಿ ಪ್ರಚಾರ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನಾಯಕರ ಫೋಟೋಗಳನ್ನು ಬಳಸದಂತೆ ಸೂಚಿಸಿದ್ದರೆ.
Karnataka News Live: ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂಗಳ ಕೊಲೆಗಳಾದವು -ಕಟೀಲು
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂಗಳ ಕೊಲೆಗಳಾದವು ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಹೇಳಿಕೆ ನೀಡಿದ್ದಾರೆ. IAS ಅಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ಸಾವು ಆಯ್ತು. ಕಾಂಗ್ರೆಸ್ನ ಭ್ರಷ್ಟಾಚಾರ, ರೀಡೂ, ಹಾಸಿಗೆ, ತಲೆ ದಿಂಬು ಹಗರಣ ಇದೆಲ್ಲವೂ ಪ್ರಗತಿ ರಥ ಯಾತ್ರೆಯ ವೇಳೆ ಜನರಿಗೆ ತೋರಿಸ್ತೇವೆ. ಕಾಂಗ್ರೆಸ್ ಅವಧಿಯಲ್ಲಿನ ವೈಫಲ್ಯ ಜನರ ಮುಂದೆ ಇಡುತ್ತೇವೆ. ಬಿಜೆಪಿ ಸರ್ಕಾರದ 4 ವರ್ಷಗಳ ಸಾಧನೆಯನ್ನು ತೋರಿಸುತ್ತೇವೆ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಜನರಿಗೆ ತೋರಿಸುತ್ತೇವೆ. ಪ್ರಗತಿ ರಥಯಾತ್ರೆ ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗುವ ಕೆಲಸ ಆಗುತ್ತದೆ. ಯುವ ಮೋರ್ಚಾ ಕಾರ್ಯಕರ್ತರು ತೆಗೆದುಕೊಂಡು ಹೋಗ್ತಾರೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ತಿಳಿಸಿದ್ದಾರೆ.
Karnataka News Live: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯವೈಖರಿಗೆ ಬಿಎಸ್ವೈ ಮೆಚ್ಚುಗೆ
ವಿಧಾನಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ. ಸ್ಪೀಕರ್ ಮತ್ತೆ ಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಗಳಾಗಲಿ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದನಕ್ಕೆ ಆಯ್ಕೆಯಾಗಿ ಬರಬೇಕು. ಶಿಕಾರಿಪುರ ತಾಲೂಕಿನ ಜನರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಅಂದೇ ಏರ್ಪೋರ್ಟ್ ಉದ್ಘಾಟನೆಗೆ ಬರುತ್ತೇನೆಂದು ಮೋದಿ ಹೇಳಿದ್ದಾರೆ ಎಂದರು.
Karnataka News Live:ಕೊವಿಡ್ನಿಂದ ಮಾಸ್ಕ್ ಹಾಕಿಕೊಂಡು ವಿಧಾನಸಭೆ ನಡೆಸಿದ್ದೇವೆ -ಸಿಎಂ ಬೊಮ್ಮಾಯಿ
15ನೇ ವಿಧಾನಸಭೆ ಅವಧಿ 2-3 ವಿಚಾರಗಳಲ್ಲಿ ನಮ್ಮನ್ನು ಗಟ್ಟಿಗೊಳಿಸಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್, ಗಾಂಧಿ, ನೆಹರು ದೂರದೃಷ್ಟಿಯಿಂದ ಅಡಿಪಾಯ ಹಾಕಿದ್ದಾರೆ. ಅದರಲ್ಲೂ ಡಾ.ಬಿ.ಆರ್.ಅಂಬೇಡ್ಕರ್ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕ ಏಕೀಕರಣಕ್ಕೂ ಸಾಕಷ್ಟು ಜನರು ಕೊಡುಗೆ ನೀಡಿದ್ದಾರೆ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯನವರ ಕೊಡುಗೆ ಹೆಚ್ಚಿದೆ. 5 ವರ್ಷಗಳಲ್ಲಿ ನಾವು ಎಂದೂ ಕಾಣದ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಕೊವಿಡ್ನಿಂದ ಮಾಸ್ಕ್ ಹಾಕಿಕೊಂಡು ವಿಧಾನಸಭೆ ನಡೆಸಿದ್ದೇವೆ ಎಂದರು.
Karnataka News Live: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತವಾಗಿ 10 ಕೆಜಿ ಅಕ್ಕಿ ನೀಡ್ತೇವೆ -ಸಿದ್ದು
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತವಾಗಿ 10 ಕೆಜಿ ಅಕ್ಕಿ ನೀಡ್ತೇವೆ. ಮೂರನೇ ಗ್ಯಾರಂಟಿ ಡಿಕೆಶಿ ಪ್ರಸ್ತಾಪ ಮಾಡಿ ಘೋಷಣೆ ಮಾಡಿದ್ದಾರೆ. ಆಹಾರ ಭದ್ರತೆ ಕಾಯ್ದೆ ಮಾಡಿದ್ದು ಯುಪಿಎ ಸರ್ಕಾರ. ಬಡತನ ರೇಖೆಗಿಂತ ಕೆಳಗಿನವರಿಗೆ ಕಡಿಮೆ ದರದಲ್ಲಿ ಅಕ್ಕಿಕೊಡಲು ಕಾಯ್ದೆ ಮಾಡಿದ್ದೇವೆ. ಅಧಿಕಾರದಲ್ಲಿದ್ದಾಗ ಉಚಿತವಾಗಿ ತಲಾ 7 ಕೆಜಿ ಅಕ್ಕಿ ಕೊಡ್ತಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ 7ರಿಂದ 5 ಕೆಜಿಗೆ ಅಕ್ಕಿ ಇಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Karnataka News Live: ಸ್ಪೀಕರ್ ಕಾಗೇರಿ ಹಾಡಿಹೊಗಳಿದ ಮಾಜಿ ಸಿಎಂ ಯಡಿಯೂರಪ್ಪ
ವಿಧಾನಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣ ಶುರು ಮಾಡಿದ್ದು ಸ್ಪೀಕರ್ ಕಾಗೇರಿ ಹಾಡಿಹೊಗಳಿದ್ದಾರೆ. ಸಭಾಧ್ಯಕ್ಷರಾಗಿ ಸದನ ನಡೆಸಿದ ರೀತಿ ಎಲ್ಲರೂ ಮೆಚ್ಚುವಂತಹದ್ದು ಮುಂದಿನ ಅಧಿವೇಶನದಲ್ಲಿ ಸ್ಪೀಕರ್ ಪೀಠದಲ್ಲಿ ಕೂರದೇ ಸಚಿವರಾಗಿ. ಇದನ್ನು ನಾನು ಸಿಎಂಗೆ ಮನವಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ರು. ಈ ವೇಳೆ ಬಿ.ಎಸ್.ಯಡಿಯೂರಪ್ಪ ಮಾತಿಗೆ ಸ್ಪೀಕರ್ ಕಾಗೇರಿ ಧನ್ಯವಾದ ತಿಳಿಸಿದ್ರು.
Karnataka News Live: ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿಯವರು ಕಡ್ಲೆಪುರಿ ತಿಂತಿದ್ರಾ?
ಅರ್ಕಾವತಿ ರೀಡೂ ಅಂತಾ 8 ಸಾವಿರ ಕೋಟಿ ಮೋಸ ಆರೋಪ ಸಂಬಂಧ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿಯವರು ಕಡ್ಲೆಪುರಿ ತಿಂತಿದ್ರಾ? ಎಂದು ಬಿಜೆಪಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಸದನದಲ್ಲಿ ಎಲ್ಲಾ ಡಿನೋಟಿಫೈ, ರೀಡೂ ಬಗ್ಗೆಯೂ ಚರ್ಚೆ ಆಗಲಿ. ಭ್ರಷ್ಟಾಚಾರ ಜಾಸ್ತಿ ಆಗಿರೋದನ್ನು ಗೃಹಸಚಿವರು ಒಪ್ಪಿಕೊಂಡಿದ್ದಾರೆ. ಆರಗ ಜ್ಞಾನೇಂದ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಯುದ್ಧ ನಡೆಯುತ್ತಿರುವುದು ಬಿಜೆಪಿಯಲ್ಲಿ, ಕಾಂಗ್ರೆಸ್ನಲ್ಲಿ ಅಲ್ಲ. ಬಿ.ಎಸ್.ಯಡಿಯೂರಪ್ಪನವರ ಕಣ್ಣಲ್ಲಿ ಯಾಕೆ ನೀರು ಹಾಕಿಸಿದ್ರಿ? ಗೂಳಿಹಟ್ಟಿ ಶೇಖರ್, ಯತ್ನಾಳ್, ಯೋಗೇಶ್ವರ್ ಏನ್ ಹೇಳಿದ್ದಾರೆ. ಅವನ್ಯಾರೋ ಮಂಚದ ಮೇಲೆ ಏನ್ ಹೇಳಿದ್ದಾ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
Karnataka News Live: ಸಿಎಂ ಬಸವರಾಜ ಬೊಮ್ಮಾಯಿ ಕೇವಲ ಸುಳ್ಳುಗಳನ್ನು ಹೇಳುತ್ತಾರೆ -ಸಿದ್ದರಾಮಯ್ಯ
ಸಿಎಂ ಬಸವರಾಜ ಬೊಮ್ಮಾಯಿ ಕೇವಲ ಸುಳ್ಳುಗಳನ್ನು ಹೇಳುತ್ತಾರೆ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಬೊಮ್ಮಾಯಿ ಸುಳ್ಳು ಹೇಳ್ತಾರೆಂದು RSS ಆಯ್ಕೆ ಮಾಡಿಕೊಂಡಿದೆ. ಆರ್ಎಸ್ಎಸ್ ಅದಕ್ಕಾಗಿಯೇ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿದೆ. ಆರ್ಎಸ್ಎಸ್ ಒಂದು ಸುಳ್ಳಿನ ಕಾರ್ಖಾನೆ ಎಂದು ಸಿಎಂ ಬೊಮ್ಮಾಯಿ, ಆರ್ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Karnataka News Live: BJP ಕಾರ್ಯಕರ್ತರು ಮೈ ಮರೆತರೆ ತಾಲಿಬಾನ್ ಸರ್ಕಾರ ಬರುತ್ತೆ
BJP ಕಾರ್ಯಕರ್ತರು ಮೈ ಮರೆತರೆ ತಾಲಿಬಾನ್ ಸರ್ಕಾರ ಬರುತ್ತೆ ಎಂದು ಮೈಸೂರಿನಲ್ಲಿ ಬಿಜೆಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ PFI ಮತ್ತು KFDಯ 175 ಸದಸ್ಯರ ಮೇಲಿದ್ದ ಕೇಸ್ ವಾಪಸ್ ಪಡೆದಿದ್ದರು ಎಂದು ಮೈಸೂರಿನಲ್ಲಿ ಬಿಜೆಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
Karnataka News Live: ಕಾಂಗ್ರೆಸ್ ವಿರುದ್ಧ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ
ಕೇಂದ್ರದಲ್ಲಿ ತಾಯಿ-ಮಕ್ಕಳ ಪಾರ್ಟಿ ಇದೆ. ಬಿಟಿಎಂ ಲೇಔಟ್ ನಲ್ಲಿ ಅಪ್ಪ- ಮಗಳ ಆಡಳಿತ ಇದೆ. ಈ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕೀಯ ಹೋಗಲಾಡಿಸುತ್ತೇವೆ. ಅದಕ್ಕಾಗಿಯೇ ಬಿಟಿಎಂ ನಿMದ ರಥ ಯಾತ್ರೆ ಚಾಲನೆ ಮಾಡಿದ್ದೇವೆ. ಈ ಬಾರಿ ಈ ಕ್ಷೇತ್ರ ಗೆಲ್ಲುವ ಸಂಕಲ್ಪ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
Karnataka News Live: ಪ್ರಚಾರ ಶುರು ಮಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಅಖಾಡಕ್ಕೆ ಪುತ್ರನನ್ನ ಬಿಟ್ಟು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಮನೆ ಮನೆಗೆ ಕಾರ್ಯಕ್ರಮ ಹಾಕಿಕೊಂಡು ನಿತ್ಯ ಹತ್ತಾರು ಹಳ್ಳಿಗಳನ್ನ ಸುತ್ತುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಯಸ್ಸಿನ ಕಾರಣಕ್ಕಾಗಿ ಅಧಿಕೃತವಾಗಿ ಪುತ್ರನನ್ನ ಕಣಕ್ಕಿಳಿಸಲು ಮುಂದಾಗಿದ್ದಾರೆ. ಆದ್ರೆ ಪುತ್ರನೇ ಅಭ್ಯರ್ಥಿ ಎಂದು ಹೆಸರು ಘೋಷಣೆ ಮಾಡಿಲ್ಲ.
Karnataka News Live: ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಬಜೆಟ್ ಮೇಲೆ ನಡೆದ ಚರ್ಚೆ ವೇಳೆ ಕೆಲವು ವಿಚಾರಗಳ ಬಗ್ಗೆ ವೀರಾವೇಷದಲ್ಲಿ ಸಿಎಂ ಉತ್ತರ ನೀಡಿದ್ದಾರೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತ ಸಂಸ್ಥೆ ಮುಚ್ಚಿದರೆಂದು ಆರೋಪ ವಿದೆ. ಸಿಎಂ ಆಗಿರುವವರಿಗೆ ಕಾನೂನು ಜ್ಞಾನ ಇದೆ ಎಂದುಕೊಂಡಿದ್ದೇನೆ. ದೇಶದ 16 ರಾಜ್ಯಗಳಲ್ಲಿ ಎಸಿಬಿ, ಲೋಕಾಯುಕ್ತ ಎರಡೂ ಇದೆ. ಇದನ್ನು ಅವರ ಅಡ್ವೊಕೇಟ್ ಜನರಲ್ ನಾವದಗಿ ಹೇಳಿದ್ದಾರೆ. ಕೋರ್ಟ್ನಲ್ಲಿ ವಾದ ಮಂಡಿಸುವಾಗ ಎಜಿ ನಾವದಗಿ ಹೇಳಿದ್ದಾರೆ. ಸರ್ಕಾರದ ನಿಲುವನ್ನು ಕೋರ್ಟ್ನಲ್ಲಿ ಎಜಿ ಪ್ರತಿಪಾದನೆ ಮಾಡಿದ್ದಾರೆ. 2016ರ ಮಾರ್ಚ್ 14ರಲ್ಲಿ ನಾವು ಎಸಿಬಿ ರಚನೆ ಮಾಡಿದ್ದೆವು. ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಸುಳ್ಳು ಹೇಳಿದ್ದಾರೆ. ನಮ್ಮ ಕಾಲದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ರಚನೆ ಎಂದಿದ್ದಾರೆ. 1984ರ ಕಾಯ್ದೆ ಅನ್ವಯ ಲೋಕಾಯುಕ್ತ ಸಂಸ್ಥೆ ರಚನೆಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Karnataka News Live: ಸ್ವಯಂಘೋಷಿಸಿ ಕಾಂಗ್ರೆಸ್ ಅಭ್ಯರ್ಥಿ ವರ್ತನೆಗೆ ನೆಟ್ಟಿಗರ ಆಕ್ರೋಶ
ಸ್ವಯಂಘೋಷಿಸಿ ಕಾಂಗ್ರೆಸ್ ಅಭ್ಯರ್ಥಿ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ನೆಲಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಎನ್.ಶ್ರೀನಿವಾಸ್ ಹಜರತ್ ಸೈಯದ್ ಹಿದಾಯತುಲ್ಲಾ ಷಾ ಖಾದ್ರಿ ಉರುಸ್ ವೇಳೆ ಮೈಮೇಲೆ ಹಣದ ಮಳೆ ಸುರಿಸಿಕೊಂಡಿದ್ದರು. ವೇದಿಕೆ ಮೇಲೆ ನಿಂತಿದ್ದ ಶ್ರೀನಿವಾಸನ ಮೇಲೆ ಮೂವರು ಹಣ ಸುರಿದಿದ್ದರು. ಶ್ರೀನಿವಾಸನ ಮೇಲೆ ಹಣ ಸುರಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Karnataka News Live: ವಿಧಾನಸಭೆಯಲ್ಲಿ B.S.ಯಡಿಯೂರಪ್ಪ ಭಾಷಣಕ್ಕೆ ಮೋದಿ ಮೆಚ್ಚುಗೆ
ವಿಧಾನಸಭೆಯಲ್ಲಿ B.S.ಯಡಿಯೂರಪ್ಪರ ವಿದಾಯ ಭಾಷಣಕ್ಕೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದಲ್ಲೇ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಸ್ಫೂರ್ತಿದಾಯಕ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತಾ ಇತರೆ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ ಎಂದು ಬಿಎಸ್ವೈ ಭಾಷಣಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ. https://t.co/tdpgUXqRAz
— Narendra Modi (@narendramodi) February 24, 2023
Karnataka News Live: ಅಮಿತ್ ಶಾ ಭೇಟಿಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಭೇಟಿಗೆ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ ಆಗಮಿಸಿದ್ದಾರೆ. ಅಮಿತ್ ಶಾ ಕೆಲ ಹೊತ್ತಿನಲ್ಲೇ ದೆಹಲಿಗೆ ನಿರ್ಗಮಿಸಲಿದ್ದಾರೆ.
Karnataka News Live: ಬೆಂಗಳೂರಿನಿಂದ ನವದೆಹಲಿಗೆ ಹಿಂದಿರುಗಿದ ಅರುಣ್ ಸಿಂಗ್
ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಹ ಉಸ್ತುವಾರಿಗಳಾದ ಮಾಂಡವೀಯ, ಅಣ್ಣಾಮಲೈ ಹಿಂತಿರುಗಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಜತೆ ಚುನಾವಣಾ ಉಸ್ತುವಾರಿಗಳು ಸಭೆ ನಡೆಸಿದ್ದರು.
Karnataka News Live: ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಭರದ ಸಿದ್ಧತೆ
ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಇಂದು ಪ್ರಗತಿ ರಥಕ್ಕೆ ಸಿಎಂ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಚಾಲನೆ ನೀಡಲಿದ್ದಾರೆ. ಬಿಜೆಪಿ ಎಲ್ಇಡಿ ಪ್ರಚಾರದ ವಾಹನಗಳು ಪ್ರಗತಿ ರಥದ ಹೆಸರಿನಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾವೆ. ಪ್ರತಿ ಕ್ಷೇತ್ರದಲ್ಲಿ 15 ದಿನಗಳ ಕಾಲ ಸಂಚರಿಸಲಿವೆ.
Karnataka News Live: ಇಂದು ಬಜೆಟ್ ಅಧಿವೇಶನದ ಕೊನೆಯ ದಿನ
ಮೇ 23ಕ್ಕೆ 15ನೇ ವಿಧಾನಸಭೆಯ ಅವಧಿ ಮುಕ್ತಾಯವಾಗಲಿದೆ. ಬಿಎಸ್ವೈ ಸೇರಿದಂತೆ ಕೆಲ ಹಿರಿಯ ಶಾಸಕರಿಗೆ ಕೊನೆಯ ಅಧಿವೇಶನ ಇದಾಗಿದ್ದು ಕೆಲ ಶಾಸಕರ ವಿದಾಯದ ಭಾಷಣ ರೀತಿಯಲ್ಲಿ ಕಲಾಪ ನಡೆಯುವ ನಿರೀಕ್ಷೆ ಇದೆ.
Karnataka News Live: ದೆಹಲಿ ಚಲೋಗೆ ನಿರ್ಧರಿಸಿದ ಬಾದಾಮಿ ಕ್ಷೇತ್ರದ ಅಭಿಮಾನಿಗಳು
ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಬೆಂಬಲಿಗರು ಒತ್ತಡ ಹೇರಿದ್ದು ದೆಹಲಿ ಚಲೋಗೆ ನಿರ್ಧರಿಸಿದ್ದಾರೆ. ಹೈಕಮಾಂಡ್ಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
Karnataka News Live: ತಮ್ಮ ನೆಚ್ಚಿನ ನಾಯಕ ಶಾಸಕ ಆಗಲೆಂದು ಅಭಿಮಾನಿಯ ವಿಶೇಷ ಪ್ರಾರ್ಥನೆ
ದೀಪಕ ಚಿಂಚೋರೆ ಭಾವಚಿತ್ರ ಹಿಡಿದು ಅಭಿಮಾನಿ ಶಿವಕುಮಾರ್ ಗೋಕಾವಿ ಎಂಬುವವರು ಅಂಬೆಗಾಲಿಡುತ್ತ ತಿರುಪತಿ ಬೆಟ್ಟ ಹತ್ತಿದ್ದಾರೆ. ದೀಪಕ ಚಿಂಚೋರೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಚಿಂಚೋರೆ ಶಾಸಕರಾಗಲಿ ಎಂದು ಅಭಿಮಾನಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ.
Karnataka News Live: ಕಲಬುರಗಿಯಲ್ಲಿ ಇಂದಿನಿಂದ 3 ದಿನ ಕಲ್ಯಾಣ ಕರ್ನಾಟಕ ಉತ್ಸವ
ಕಲಬುರಗಿ ನಗರದ ಗುಲ್ಬರ್ಗಾ ವಿವಿ ಆವರಣದಲ್ಲಿ ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ ಮಾಡಲಾಗಿದೆ. ಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
Karnataka News Live: ಶೃಂಗೇರಿ ಮಠಕ್ಕೆ ಜೆ.ಪಿ.ನಡ್ಡಾ ಭೇಟಿ ಬೆನ್ನಲ್ಲೇ ಹೆಚ್ಡಿಕೆ ಭೇಟಿ
ಶೃಂಗೇರಿ ಮಠಕ್ಕೆ ಇಂದು ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಉಭಯ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಇಂದು ರಾತ್ರಿ ಶ್ರೀಗಳ ಭೇಟಿಗೆ ಕುಮಾರಸ್ವಾಮಿ ಸಮಯ ಕೇಳಿದ್ದಾರೆ.
Published On - Feb 24,2023 9:39 AM