
ಬೆಂಗಳೂರು, ಜುಲೈ 21: ಲಕ್ಷ ಲಕ್ಷ ರೂಪಾಯಿ ತೆರಿಗೆ, ಸಣ್ಣ ಸಣ್ಣ ವರ್ತಕರ ಮೇಲೆ ಬರೆ. ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Karnataka Commercial Tax Department) ನೀಡಿರುವ ತೆರಿಗೆ ನೋಟಿಸ್ಗಳಿಂದ ಕಂಗಲಾಗಿರುವ ಅಂಗಡಿ ಮಾಲೀಕರು ಇದೀಗ ಕೆರಳಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ (Karnataka Traders’ strike) ಮಾಡಿ ಸರ್ಕಾರಕ್ಕೆ ಒಗ್ಗಟ್ಟು ತೋರಿಸಲು, ಸರ್ಕಾರವನ್ನು ಪ್ರಶ್ನಿಸಲು ನಿರ್ಧರಿಸಿದ್ದಾರೆ. ಜುಲೈ 23ರಿಂದ ಜುಲೈ 25ರವರೆಗೆ ಹಂತ ಹಂತವಾಗಿ ಅಂಗಡಿ ಬಂದ್ ಮಾಡಲಾಗುತ್ತದೆ ಎಂದು ವರ್ತಕರು ತಿಳಿಸಿದ್ದಾರೆ. ಹೀಗಾಗಿ ಕಾರ್ಮಿಕ ಪರಿಷತ್ ಸದ್ಯ ಪ್ರತಿ ಅಂಗಡಿಗೂ ತೆರಳಿ ಕರಪತ್ರ ನೀಡುತ್ತಿದೆ. ಬಂದ್ಗೆ ಬಂಬಲಿಸಿ ಎಂದು ಮನವಿ ಮಾಡುತ್ತಿದೆ.
ಜುಲೈ 25ರ ಬಂದ್ಗೆ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದು, ಅನಿವಾರ್ಯವಾದಲ್ಲಿ ಒಂದು ವಾರದ ಬಂದ್ಗೂ ಸಿದ್ಧ ಎಂದಿದ್ದಾರೆ.
ತೆರಿಗೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ನೋಟಿಸ್ ನೀಡುತ್ತಿದ್ದಾರೆ ಎಂದು ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ, ಜಿಎಸ್ಟಿ ಕೇಂದ್ರ ಸರ್ಕಾರದ್ದು, ನಮ್ಮ ವ್ಯಾಪ್ತಿಗೆ ಹೇಗೆ ಬರುತ್ತದೆ ಎಂದು ಮರುಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಜು.25ರಂದು ಕಾಂಡಿಮೆಂಟ್ಸ್-ಬೇಕರಿ, ಅಂಗಡಿಗಳು ಬಂದ್: ಹಾಲು, ಸಿಗರೇಟ್ ಸಿಗಲ್ಲ!
ರಾಜಕೀಯ, ಹೋರಾಟ ಏನೇ ಇದ್ದರೂ ವ್ಯಾಪಾರಸ್ಥರು ಮಾತ್ರ ನೋಟಿಸ್ ವಿರುದ್ಧ ಸಿಡಿದೆದ್ದಿದ್ದಾರೆ. ಆದರೆ, ದಾಖಲೆ ಸಮೇತ ಮಾಹಿತಿ ನೀಡಿದರೆ, ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳಿದೆ. ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಪಡೆದವರ ಗೊಂದಲಕ್ಕೆ ಸರ್ಕಾರ ಯಾವಾಗ ತೆರೆ ಎಳೆಯುತ್ತದೆ ಎಂದುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ