ಮೇ 20 ರಿಂದ ರಾಜ್ಯಾದ್ಯಂತ ಸಾರಿಗೆ ಬಸ್​ಗಳು ರಸ್ತೆಗಿಳಿಯುವುದು ಡೌಟ್! ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ತೀರ್ಮಾನ

ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ರಾಜ್ಯದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ಮತ್ತು ನೌಕರರ ನಡುವಿನ ಸಂಧಾನ ಸಭೆಗಳು ವಿಫಲವಾಗಿದ್ದು, ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಮೇ 20 ರಿಂದ ರಾಜ್ಯಾದ್ಯಂತ ಸಾರಿಗೆ ಬಸ್​ಗಳು ರಸ್ತೆಗಿಳಿಯುವುದು ಡೌಟ್! ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ತೀರ್ಮಾನ
ಸಾಂದರ್ಭಿಕ ಚಿತ್ರ
Image Credit source: tv9

Updated on: May 02, 2026 | 5:00 PM

ಬೆಂಗಳೂರು, ಮೇ 2: ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ಸಾರಿಗೆ ಬಸ್‌ಗಳು ಮೇ 20ರಿಂದ ರಸ್ತೆಗಿಳಿಯುವುದು ಅನುಮಾನವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ (Karnataka Transport Strike) ನಡೆಸಲು ಮುಂದಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸುಮಾರು 1.25 ಲಕ್ಷ ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಸಾರಿಗೆ ಬಸ್​​ಗಳ ಸಂಚಾರ ಅನುಮಾನವಾಗಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

  • ವೇತನ ಹಿಂಬಾಕಿ: ಬಾಕಿ ಇರುವ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ನೀಡಬೇಕು.
  • ವೇತನ ಹೆಚ್ಚಳ: 2024ರ ಜನವರಿ 1 ರಿಂದ ಅನ್ವಯವಾಗುವಂತೆ ಮೂಲ ವೇತನವನ್ನು ಶೇ 25ರಷ್ಟು ಏರಿಕೆ ಮಾಡಬೇಕು.
  • ತುಟ್ಟಿಭತ್ಯೆ ವಿಲೀನ: ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು.
  • ಒಂದೇ ಕಂತಿನಲ್ಲಿ ಪಾವತಿ: ಸರ್ಕಾರ ಒಪ್ಪಿರುವ 26 ತಿಂಗಳ ಬಾಕಿ ಹಣ 1272 ಕೋಟಿ ರೂಪಾಯಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.
  • ಇತರೆ ಭತ್ಯೆಗಳು: ಬಾಟಾ ಸೇರಿದಂತೆ ಇತರೆ ಭತ್ಯೆಗಳನ್ನು ಹೆಚ್ಚಿಸಬೇಕು ಹಾಗೂ ಕೋವಿಡ್ ಸಮಯದ ಬಾಕಿ ಹಣವನ್ನು (Arrears) ನೀಡಬೇಕು.

ವಿಫಲವಾದ 12 ಸುತ್ತಿನ ಸಭೆಗಳು

ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಈಗಾಗಲೇ 12 ಬಾರಿ ಮಾತುಕತೆ ನಡೆದಿದೆ. ಆದರೆ, ಈ ಎಲ್ಲಾ ಸಭೆಗಳು ವಿಫಲವಾಗಿವೆ. ಸರ್ಕಾರವು 38 ತಿಂಗಳ ಹಿಂಬಾಕಿಯ ಬದಲಾಗಿ ಕೇವಲ 26 ತಿಂಗಳ ಬಾಕಿ ಹಣ ನೀಡಲು ಮುಂದಾಗಿದೆ. ಆದರೆ ನೌಕರರು ಪೂರ್ಣ ಪ್ರಮಾಣದ 38 ತಿಂಗಳ ಬಾಕಿ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಧೋರಣೆಯನ್ನು ಖಂಡಿಸಿರುವ ನೌಕರರ ಸಂಘಟನೆಗಳು, ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.

ಇದನ್ನೂ ಓದಿ: KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ಜಂಟಿ ಕ್ರಿಯಾ ಸಮಿತಿ ಕೈಗೊಂಡ ನಿರ್ಧಾರವೇನು?

ಈ ಹಿಂದೆ ಕೂಡ ಹಲವು ಬಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೇ ಘಳಿಗೆಯಲ್ಲಿ ಸರ್ಕಾರ ಮಾತುಕತೆ ನಡೆಸಿ ಅವರ ಮನವೊಲಿಸುತ್ತಿತ್ತು. ಆದರೆ, ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us