
ಬೆಂಗಳೂರು, ಮೇ 2: ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ಸಾರಿಗೆ ಬಸ್ಗಳು ಮೇ 20ರಿಂದ ರಸ್ತೆಗಿಳಿಯುವುದು ಅನುಮಾನವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ (Karnataka Transport Strike) ನಡೆಸಲು ಮುಂದಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸುಮಾರು 1.25 ಲಕ್ಷ ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಸಾರಿಗೆ ಬಸ್ಗಳ ಸಂಚಾರ ಅನುಮಾನವಾಗಿದೆ.
ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಈಗಾಗಲೇ 12 ಬಾರಿ ಮಾತುಕತೆ ನಡೆದಿದೆ. ಆದರೆ, ಈ ಎಲ್ಲಾ ಸಭೆಗಳು ವಿಫಲವಾಗಿವೆ. ಸರ್ಕಾರವು 38 ತಿಂಗಳ ಹಿಂಬಾಕಿಯ ಬದಲಾಗಿ ಕೇವಲ 26 ತಿಂಗಳ ಬಾಕಿ ಹಣ ನೀಡಲು ಮುಂದಾಗಿದೆ. ಆದರೆ ನೌಕರರು ಪೂರ್ಣ ಪ್ರಮಾಣದ 38 ತಿಂಗಳ ಬಾಕಿ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಧೋರಣೆಯನ್ನು ಖಂಡಿಸಿರುವ ನೌಕರರ ಸಂಘಟನೆಗಳು, ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ಜಂಟಿ ಕ್ರಿಯಾ ಸಮಿತಿ ಕೈಗೊಂಡ ನಿರ್ಧಾರವೇನು?
ಈ ಹಿಂದೆ ಕೂಡ ಹಲವು ಬಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೇ ಘಳಿಗೆಯಲ್ಲಿ ಸರ್ಕಾರ ಮಾತುಕತೆ ನಡೆಸಿ ಅವರ ಮನವೊಲಿಸುತ್ತಿತ್ತು. ಆದರೆ, ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ