ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೋಲಾರಕ್ಕೆ ದೊಡ್ಡ ಮೋಸ ಮಾಡಿದ್ದಾರೆ: ಶಾಸಕ ನಾರಾಯಣಸ್ವಾಮಿ ಆಕ್ರೋಶ
ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜಿಲ್ಲೆಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ತಮ್ಮ ಮಂತ್ರಿಗಿರಿ ತಪ್ಪಿಸಲು ಕೆಲವರು ಪ್ರಯತ್ನಿಸಿದ್ದು, ಕೋಲಾರದ ಜನರು ಮಂತ್ರಿಯಾಗಲು ನಿರೀಕ್ಷಿಸಿದ್ದರು, ಆದರೆ ಈಗ ನಿರಾಸೆ ಮೂಡಿದೆ ಎಂದು ನಾರಾಯಣಸ್ವಾಮಿ ನೋವು ತೋಡಿಕೊಂಡಿದ್ದಾರೆ.
ಕೋಲಾರ, ಆಗಸ್ಟ್ 03: ‘ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತೆಂಬ ನಂಬಿಕೆ ಇತ್ತು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಡಿಕೆ ಶಿವಕುಮಾರ್ ಅವರು ಕೋಲಾರಕ್ಕೆ ದೊಡ್ಡ ಮೋಸ ಮಾಡಿದ್ದಾರೆ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರತಿ ಬಾರಿ ಎಡಗೈ ಸಮುದಾಯದ ಮುನಿಯಪ್ಪ ಗೆಲ್ಲಬೇಕು, ಮುನಿಯಪ್ಪರ ಮಗಳು KGF ಶಾಸಕಿ ರೂಪಾ ಗೆಲ್ಲಬೇಕು. ಇಲ್ಲಿ ಬಲಗೈ ಸಮುದಾಯದ ಸಹಾಯ ಪಡೆದು ಗೆಲುತ್ತಾರೆ. ಎಡಗೈ-ಬಲಗೈ ಸಮುದಾಯ ಅಂತ ಹುಟ್ಟು ಹಾಕಿದ್ದಾರೆ ಎಂದು ಕೆ.ಹೆಚ್.ಮುನಿಯಪ್ಪ ವಿರುದ್ಧ ಗರಂ ಆದರು. ‘ಇದರ ಪ್ರತಿಫಲವನ್ನು ಅವರೇ ಮುಂದೆ ಅನುಭವಿಸುತ್ತಾರೆ. ಕಾಣದ ಕೈಗಳು ನನಗೆ ಸಚಿವ ಸ್ಥಾನವನ್ನ ತಪ್ಪಿಸಿದ್ದಾರೆ. ನಾಳೆ ನಾವು ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಒಮ್ಮತ ಮೂಡಿದರೆ ರಾಜೀನಾಮೆ ನೀಡಲು ನಾವು ಸಿದ್ಧ. ರಾಜೀನಾಮೆ ನೀಡಿ ಹೈಕಮಾಂಡ್ಗೆ ಸಂದೇಶ ರವಾನಿಸುತ್ತೇವೆ’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
