ಜನ ಉದಾರವಾಗಿ ಶಾಲೆಗೆ ನೀಡಿದ್ದ ಜಾಗದಲ್ಲಿ ಶಾದಿ ಮಹಲ್: ಊರಿನಲ್ಲಿ ನೆಮ್ಮದಿ ಕೆಡಿಸಿದ ಕಟ್ಟಡ

ಮಡಿಕೇರಿಯ ನಾಪೋಕ್ಲುವಿನಲ್ಲಿ ನಿರ್ಮಾಣವಾಗುತ್ತಿರುವ ಶಾದಿ ಮಹಲ್ ಕಾಮಗಾರಿ ವಿವಾದಕ್ಕೆ ಕಾರಣವಾಗಿದೆ. ಕೆಪಿಎಸ್ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಅತಿಕ್ರಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಸದ್ಯ ವಿವಾದ ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜನ ಉದಾರವಾಗಿ ಶಾಲೆಗೆ ನೀಡಿದ್ದ ಜಾಗದಲ್ಲಿ ಶಾದಿ ಮಹಲ್: ಊರಿನಲ್ಲಿ ನೆಮ್ಮದಿ ಕೆಡಿಸಿದ ಕಟ್ಟಡ
ಶಾದಿ‌ ಮಹಲ್‌ ನಿರ್ಮಾಣ ಕಾರ್ಯ
Edited By:

Updated on: Jan 30, 2026 | 9:06 PM

ಕೊಡಗು, ಜನವರಿ 30: ಊರಿನ ಜನರು ಶಾಲೆಗೆ ಉದಾರವಾಗಿ ನೀಡಿದ್ದ ಜಾಗದಲ್ಲಿ ಇದೀಗ ಅಕ್ರಮವಾಗಿ ಶಾದಿ ಮಹಲ್ (Shadi Mahal) ನಿರ್ಮಿಸುತ್ತಿರುವ ಆರೋಪ ಮಡಿಕೇರಿಯಲ್ಲಿ (Madikeri) ಕೇಳಿಬಂದಿದೆ. ಈ ವಿಚಾರ ಸದ್ಯ ಊರಿನ ಜನರ ನೆಮ್ಮದಿ ಕೆಡಿಸಿದೆ. ಶಾದಿ ಮಹಲ್ ಪರ-ವಿರೋಧ ಹೋರಾಟ ಜೋರಾಗಿದ್ದು, ಜಿಲ್ಲಾಧಿಕಾರಿ ಶಾದಿ ಮಹಲ್ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

ಏನಿದು ವಿವಾದ?

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯ ಪರಂಬು ಎಂಬ ಗ್ರಾಮ ಇದೀಗ ವಿವಾದದ ಕೇಂದ್ರವಾಗಿದೆ. ಊರಿನಲ್ಲಿ ನಡೆಯುತ್ತಿರುವ ಕಾಮಗಾರಿಯೊಂದು ಭಾರೀ ವಿವಾದ ಸೃಷ್ಟಿಸಿದೆ. ಈ ಊರಿನಲ್ಲಿ ನಾಪೋಕ್ಲು ಪಟ್ಟಣ ಮುಸ್ಲಿಂ ಜಮಾಅತ್​ನಿಂದ ದೊಡ್ಡದಾದ ಶಾದಿ ಮಹಲ್ ಕಾಮಗಾರಿ ನಡೆಯುತ್ತಿದೆ. ಕಳೆದ ತಿಂಗಳಷ್ಟೇ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದ್ದರು.

ಇದನ್ನೂ ಓದಿ: ಮನೆ ಹೆಸರಲ್ಲಿ ಮಸೀದಿ ನಿರ್ಮಾಣ: ರೊಚ್ಚಿಗೆದ್ದ ಹಿಂದೂ ಸಂಘಟನೆಗಳು

ಇದೀಗ ತಳಪಾಯ ಮುಗಿದು ಕಟ್ಟಡ ಕಾಮಗಾರಿ ಶುರು ಮಾಡುವಷ್ಟರಲ್ಲಿ ಈ ಜಾಗದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಶಾದಿ ಮಹಲ್ ನಿರ್ಮಾಣವಾಗುತ್ತಿರುವ ಜಾಗ ಇದೇ ಊರಿನ ಕೆಪಿಎಸ್ ಶಾಲೆಗೆ ಸೇರಿದ್ದು ಎಂದು ಊರಿನ ಹಲವರು ತಗಾದೆ ತೆಗೆದಿದ್ದಾರೆ. ದಶಕಗಳ ಹಿಂದೆ ಶಾಲೆಗೆ ಉದಾರವಾಗಿ ನೀಡಿದ್ದ ಜಾಗವನ್ನ ಅತಿಕ್ರಮಿಸಿ ಶಾದಿ ಮಹಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಈಗಾಗಲೇ ಶಾಸಕ ಎಎಸ್ ಪೊನ್ನಣ್ಣ ಮತ್ತು ಜಿಲ್ಲಾಧಿಕಾರಿಗೆ ಅಂಬಿ ಕಾರ್ಯಪ್ಪ ಎಂಬುವವರು ದೂರು ನೀಡಿದ್ದಾರೆ.

ಊರಿನವರ ಆರೋಪವನ್ನ ನಾಪೋಕ್ಲು ಜಮಾಅತ್ ನಿರಾಕರಿಸಿದೆ. ಹತ್ತಾರು ವರ್ಷಗಳಿಂದ ಇದು ಜಮಾಅತ್​ನದ್ದೇ ಆಗಿದ್ದು, ಪಕ್ಕಾ ದಾಖಲೆಗಳಿವೆ ಎಂದು ಪ್ರತಿಪಾದಿಸಿದೆ. ರಾಜಕೀಯಕ್ಕಾಗಿ ಬಿಜೆಪಿಯ ಕೆಲವರು ಈ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕಳೆದ 30 ವರ್ಷಗಳಿಂದ ಈ ಊರಿನಲ್ಲಿ ಶಾದಿ ಮಹಲ್ ಇರಲಿಲ್ಲ. ಇದೀಗ ಶಾಸಕ ಪೊನ್ನಣ್ಣ ಅವರ ಪ್ರತ್ನದಿಂದ ಸರ್ಕಾರದಿಂದ 1 ಕೋಟಿ ರೂ ಬಿಡುಗಡೆಯಾಗಿದ್ದು ಶಾದಿ ಮಹಲ್ ನಿರ್ಮಾಣವಾಗುತ್ತಿದೆ. ಇದನ್ನ ಸಹಿಸದ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಭಾಗಿಗೆ ವಿರೋಧ: ಕೃಷಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಪದಗ್ರಹಣ ರದ್ದು

ಸದ್ಯ ವಿವಾದ ಬೆನ್ನಲ್ಲೇ ಶಾಸಕ ಪೊನ್ನಣ್ಣ ಜಿಲ್ಲಾಡಳಿತಕ್ಕೆ ತಕ್ಷಣವೇ ಸರ್ವೆ ನಡೆಸಿ ಸತ್ಯಾಂಶ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತಾಧಿಕಾರಿ ಇದೀಗ ಸರ್ವೆ ಮಾಡಲು ಮುಂದಾಗಿದ್ದು, ಇದಾದ ಬಳಿಕವಷ್ಟೇ ಈ ಭೂಮಿ ಯಾರಿಗೆ ಸೇರಿದ್ದು ಎಂದು ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.