AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಆರೋಪ; ಠಾಣೆಗೆ ನುಗ್ಗುವುದಾಗಿ ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಪ್ರತಾಪ್​ ಸಿಂಹ

ಬಿಜೆಪಿ ಕಾರ್ಯಕರ್ತನೊಬ್ಬ ರಾಜ್ಯ ಸರ್ಕಾರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್​ವೊಂದು ಕೊಡಗು ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಇದೀಗ ಜಿಲ್ಲಾ ಪೊಲೀಸರ ವಿರುದ್ಧ ಸಂಸದ ಪ್ರತಾಪ್​ ಸಿಂಹ ಗುಡುಗಿದ್ದು, ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂದು ಆವಾಜ್ ಹಾಕಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಆರೋಪ; ಠಾಣೆಗೆ ನುಗ್ಗುವುದಾಗಿ ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಪ್ರತಾಪ್​ ಸಿಂಹ
ಪ್ರತಾಪ್​ ಸಿಂಹ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 25, 2023 | 6:36 PM

ಕೊಡಗು, ನ.25: ಸಾಮಾಜಿಕ‌ ಜಾಲತಾಣದಲ್ಲಿ ಸರ್ಕಾರದ‌ ವಿರುದ್ಧ ಪೋಸ್ಟ್ ವಿಚಾರವಾಗಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಹಿನ್ನಲೆ ಕೊಡಗು ಜಿಲ್ಲೆಯ ವಿರಾಜಪೇಟೆ(Virajpete) ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದು ಆಗಮಿಸಿದ ಸಂಸದ ಪ್ರತಾಪ್ ಸಿಂಹ(Pratap Simha) ಅವರು, ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ನಾವು ಖುದ್ದಾಗಿ ಬಂದು ಪೊಲೀಸ್​​ ಠಾಣೆಗೆ ನುಗ್ಗುತ್ತೇವೆ ಎಂದು ಕಿಡಿಕಾರಿದ್ದಾರೆ.

ಘಟನೆ ವಿವರ

ಅಮ್ಮತ್ತಿ ಗ್ರಾಮದ ಲೋಶನ್ ಕಾರ್ಯಪ್ಪ ಎಂಬ ಬಿಜೆಪಿ ಕಾರ್ಯಕರ್ತ ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತೆಲಂಗಾಣ ಸರ್ಕಾರಕ್ಕೆ ಕರ್ನಾಟಕದ ದುಡ್ಡು ಹಂಚುತ್ತಿರುವ ಎಟಿಎಂ ಸರ್ಕಾರ ಎಂದು ಟೀಕೆ ಮಾಡಲಾಗಿತ್ತು. ಈ ಸಂಬಂಧ ಎಸ್​ಪಿಗೆ ದೂರು ಬಂದ ಹಿನ್ನಲೆ  ಅದನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದ್ದು, ಅದನ್ನು ಪರಿಗಣಿಸಿದ ಪೊಲಿಸರು ಲೋಶನ್​ ಎಂಬುವವರನ್ನು ಠಾಣೆಗೆ ಕರೆಸಿ ಪೋಸ್ಟ್​ ಡೀಲಿಟ್​​ ಮಾಡುವಂತೆ ಸೂಚಿಸಿ ತಪ್ಪೊಪ್ಪಿಗೆ ಬರೆಸಿಕೊಂಡು ಕಳುಹಿಸಿದ್ದರು.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಪೊಲೀಸರಿಂದ ಕಿರುಕುಳ ಆರೋಪ! ವಿಷ ಸೇವಿಸಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

ಪೊಲೀಸರಿಗೆ ಮುಚ್ಚಳಿಕೆ ಬರೆಸಿಕೊಳ್ಳುವ ಅಧಿಕಾರ ಇಲ್ಲ

ಬಿಜೆಪಿ ಕಾರ್ಯಕರ್ತ ಕೇವಲ ಒಂದು ಪೋಸ್ಟ್​ ಹಂಚಿಕೊಂಡಿದ್ದಕ್ಕೆ ಪೊಲಿಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡ ಕ್ರಮ ಜಿಲ್ಲಾ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ವಿಚಾರ ಅರಿಯುತ್ತಲೇ ಮಾಜಿ ಶಾಸಕ ಕೆಜಿ ಬೋಪಯ್ಯ ಜೊತೆಗೂ ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವಾಣಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಆಧಾರದ ಮೇಲೆ ತಾವು ಮುಚ್ಚಳಿಕೆ ಬರೆಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಅಪ ಪ್ರಚಾರ ಮಾಡಿದಾಗ ಯಾಕೆ ನೀವು ಅವರನ್ನು ಕರೆದು ಮುಚ್ಚಳಿಕೆ ಕರೆಸಿಕೊಳ್ಳಲಿಲ್ಲ ಎಂದು ಗುಡುಗಿದರು. ಇನ್ನು ಮುಂದೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಪೊಲಿಸ್ ಠಾಣೆಗೆ ನುಗ್ಗುವುದಾಗಿ ಪೊಲಿಸರಿಗೆ ಎಚ್ಚರಿಕೆ ನೀಡದರು. ಸಧ್ಯ ವಿರಾಜಪೇಟೆ ಪೊಲೀಸರು ಲೋಶನ್ ಕಾರ್ಯಪ್ಪನವರ ಪ್ರಕರಣವನ್ನು ಇಲ್ಲಿಗೆ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ