Kolar Lakes: ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಮನಸೋಇಚ್ಛೆ ಕೆರೆಗಳನ್ನು ಬಗೆಯುತ್ತಿರುವ ಹೈವೇ ಗುತ್ತಿಗೆದಾರರು

Bangalore–Chennai Expressway contractors: ಬೇತಮಂಗಲ ಹೋಬಳಿಯ ಕಮ್ಮಸಂದ್ರ, ದೊಡ್ಡಕಾರಿ, ಪೋತರಾಜನಹಳ್ಳಿ, ಬೆಟ್ಕೂರು, ವಡ್ರಹಳ್ಳಿ, ಗೆನ್ನೇರಹಳ್ಳಿ, ಎನ್​.ಜಿ.ಹುಲ್ಕೂರು, ರಾಮಸಾಗರ, ಸುಂದರಪಾಳ್ಯ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕೆರೆಗಳಲ್ಲಿ ಮಣ್ಣು ಬಗೆದುಹಾಕಲಾಗಿದೆ. ಪರಿಣಾಮ ಕೆರೆಯಲ್ಲಿ ಸಣ್ಣ ಪ್ರಾಣಿಯೂ ಹೋಗದ ಪರಿಸ್ಥಿತಿಯಿದೆ. ಕೆರೆಗಳು ದೊಡ್ಡ ಪ್ರಪಾತದ ರೀತಿ ಕಂಡುಬರುತ್ತಿವೆ.

Kolar Lakes: ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಮನಸೋಇಚ್ಛೆ ಕೆರೆಗಳನ್ನು ಬಗೆಯುತ್ತಿರುವ ಹೈವೇ ಗುತ್ತಿಗೆದಾರರು
ಅಧಿಕಾರಿಗಳ ಬುಟ್ಟಿಗೆ ಹಾಕ್ಕೊಂಡು ಕೆರೆಗಳ ಬಗೆಯುತ್ತಿರುವ ಗುತ್ತಿಗೆದಾರರು
Edited By: ಸಾಧು ಶ್ರೀನಾಥ್​

Updated on: Jan 29, 2024 | 10:37 AM

ಅದು 2 ಪ್ರಮುಖ ನಗರಗಳ ಮಧ್ಯೆ ಅಂದ್ರೆ ಚೆನೈ-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಕ್ಸ್ ಹೈವೇ ಕಾರಿಡಾರ್​ ಯೋಜನೆ. ಸುಮಾರು 3500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೆದ್ದಾರಿ ಕಾಮಗಾರಿಯಿಂದ ಕೆರೆಗಳನ್ನು ಸರ್ವನಾಶ ಮಾಡುವ ಜೊತೆಗೆ ದೊಡ್ಡ ಮಟ್ಟದ ಮಣ್ಣು ಮಾಫಿಯಾಗೆ ಕೆರೆಗಳ ಸ್ವರೂಪ ಹಾಳಾಗಿದೆ. ಆಳದ ಜೆಸಿಬಿ ಮತ್ತು ಹಿಟಾಚಿಗಳ ಮೂಲಕ ನಡೆಯುತ್ತಿರುವ ಮಣ್ಣು ತೆಗೆಯುವ ಕಾಮಗಾರಿ, ದೊಡ್ಡ ಪ್ರಪಾತದಂತೆ ಭಾಸವಾಗುತ್ತಿರುವ ಕೆರೆಗಳು, 50-60 ಅಡಿ ಆಳದವರೆಗೆ ಮಣ್ಣು ಬಗೆದಿರುವ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಬೇತಮಂಗಲ ಹೋಬಳಿಯಲ್ಲಿ.

ಕಳೆದ ಮೂರುನಾಲ್ಕು ವರ್ಷಗಳಿಂದ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಕೈಗಾರಿಕಾ ಅಭಿವೃದ್ದಿಗೆ ಅನುಕೂಲ ಎನ್ನುವ ನಿಟ್ಟಿನಲ್ಲಿ ಈ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಇದು ಒಂದು ರೀತಿಯ ಅನುಕೂಲ ಆದರೆ ಈ ಹೆದ್ದಾರಿ ನಿರ್ಮಾಣದಿಂದ ಕೋಲಾರ ಜಿಲ್ಲೆಯ ಕೆರೆಗಳ ಮಾರಣ ಹೋಮ ನಡೆಯುತ್ತಿದೆ.

ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಗೆ ಕೆರೆಗಳೇ ಇಲ್ಲಿನ ಜನರ ಜೀವನಾಡಿಗಳು, ಹೀಗಿರುವಾಗ ಹೆದ್ದಾರಿ ಕಾಮಗಾರಿಗೆ ಬೇಕಾಗುವ ಮಣ್ಣಿಗಾಗಿ ಜಿಲ್ಲೆಯ ನೂರಾರು ಕೆರೆಗಳನ್ನು ಅವೈಜ್ಞಾನಿಕವಾಗಿ ಬಗೆದು ಹಾಕಿದ್ದಾರೆ. ಕೆರೆಗಳಲ್ಲಿ ಮಣ್ಣು ಹಾಗೂ ಹೂಳು ತೆಗೆಯುವಾಗ ಕೆರೆಯಲ್ಲಿ ಕೇವಲ ಮೂರು ಮೀಟರ್ ಆಳಕ್ಕೆ ಮಾತ್ರ ಮಣ್ಣು ತೆಗೆಯಬೇಕು ಅನ್ನೋ ನಿಯಮ ಇದೆ.

ಆದರೆ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಆರ್ಕಾನ್ಸ್​ ಇನ್ಪಾಸ್ಟ್ರಕ್ಚರ್ ಅಂಡ್ ಕಂಸ್ಟ್ರಕ್ಷನ್ ಕಂಪನಿ ತಮ್ಮ ಮನಸೋಇಚ್ಚೆ ಕೆರೆಗಳನ್ನು ಬಗೆದು ಅವುಗಳ ಸ್ವರೂಪವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಒಪ್ಪಂದದ ಪ್ರಕಾರ ಮಣ್ಣು ತೆಗೆದುಕೊಳ್ಳುವ ಕೆರೆಗಳನ್ನು ಸರಿಯಾದ ರೀತಿಯಲ್ಲಿ ಸರಿಪಡಿಸಿ, ಕೆರೆಗಳಿಗೆ ತಂತಿ ಬೇಲಿ ಹಾಕಿ, ಪ್ರಾಣಿಗಳು ಜನರು ಕೆರೆಗೆ ಇಳಿದು ಹತ್ತಲು ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡಬೇಕು ಅಂತಾ ಸೂಚಿಸಲಾಗಿದೆ. ಆದರೆ ಗುತ್ತಿಗೆದಾರರು ಈ ಎಲ್ಲಾ ಒಪ್ಪಂದವನ್ನು ಗಾಳಿಗೆ ತೂರಿ ಇನ್ನೆರಡು ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಮುಗಿಸಿ ಇಲ್ಲಿಂದ ಕಾಲ್ಕೀಳಲು ಸಿದ್ದತೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಜಿಲ್ಲೆಯ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಮನಸೋ ಇಚ್ಚೆ ಕೆರೆಗಳನ್ನು ಬಗೆದು ಹಾಕುತ್ತಿದ್ದಾರೆ ಅನ್ನೋದು ಸ್ಥಳೀಯರ ಆರೋಪ.

ಸದ್ಯದ ಪರಿಸ್ಥಿತಿಯಲ್ಲಿ ಬೇತಮಂಗಲ ಹೋಬಳಿಯ, ಕಮ್ಮಸಂದ್ರ, ದೊಡ್ಡಕಾರಿ, ಪೋತರಾಜನಹಳ್ಳಿ, ಬೆಟ್ಕೂರು, ವಡ್ರಹಳ್ಳಿ, ಗೆನ್ನೇರಹಳ್ಳಿ, ಎನ್​.ಜಿ.ಹುಲ್ಕೂರು, ರಾಮಸಾಗರ, ಸುಂದರಪಾಳ್ಯ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕೆರೆಗಳಲ್ಲಿ ಮಣ್ಣು ಬಗೆದುಹಾಕಲಾಗಿದೆ. ಪರಿಣಾಮ ಕೆರೆಯ ಒಳಗೆ ಒಂದು ಸಣ್ಣ ಪ್ರಾಣಿಯೂ ಹೋಗಲಾಗದ ಪರಿಸ್ಥಿತಿ ಇದೆ. ಕೆರೆಗಳು ದೊಡ್ಡ ದೊಡ್ಡ ಪ್ರಪಾತದ ರೀತಿಯಲ್ಲಿ ಕಂಡುಬರುತ್ತಿದೆ.

ಮನಸೋಇಚ್ಚೆ ಕೆರೆಗಳಲ್ಲಿ ಈ ರೀತಿ ಮಣ್ಣು ತೆಗೆದಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ಕುಡಿಯಲು ಹೋಗುವ ಜಾನುವಾರುಗಳು, ಮನುಷ್ಯರು, ಅಥವಾ ಕೆರೆಯ ಪಕ್ಕದಲ್ಲಿರುವ ಶಾಲಾ ಮಕ್ಕಳು ಕೆರೆಗೆ ಹೋಗಿ ಯಾಮಾರಿ ಜಾರಿ ಬಿದ್ದರೆ ಅವರ ಕಥೆ ಮುಗಿದೇ ಹೋಗುತ್ತದೆ. ಅಷ್ಟರ ಮಟ್ಟಿಗೆ ಕೆರೆಗಳನ್ನು ಬಗೆಯಲಾಗಿದೆ.

ಇದಿಷ್ಟು ಕೆರೆಗಳ ಪಾಡಾದ್ರೆ ಈ ಮಣ್ಣು ಸಾಗಿಸಲು ಈ ಲಾರಿಗಳು ಟಿಪ್ಪರ್‌ಗಳು ಓಡಾಡುವ ರಸ್ತೆಗಳೂ ಕೂಡಾ ಹಾಳಾಗಿ ಹೋಗಿದ್ದು ಈ ಭಾಗದ ಜನರಿಗಂತು ಹೆದ್ದಾರಿ ಕಾಮಗಾರಿ ಸಾಕಪ್ಪ ಸಾಕು ಎನ್ನುವಂತಾಗಿದೆ. ಹಾಗಾಗಿ ಸ್ಥಳೀಯರು ಹೆದ್ದಾರಿ ಕಾಮಗಾರಿ ಮುಗಿಯುವ ಮೊದಲು ಕೆರೆಗಳನ್ನು ಸರಿಪಡಿಸಿಕೊಡು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಹೆದ್ದಾರಿ ನಿರ್ಮಾಣ ಅಭಿವೃದ್ದಿ ಅನ್ನೋದು ಒಂದು ಕಡೆ ಸಂತೋಷದ ವಿಷಯವಾದರೆ ಇನ್ನೊಂದು ಕಡೆ ಕೆರೆಗಳ ನಿರ್ನಾಮ ಮಾಡಿರುವುದು ಸ್ಥಳೀಯ ಗ್ರಾಮಗಳ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದೆಡೆ ಹೆದ್ದಾರಿಗೆ ಭೂಮಿಯನ್ನು ಕೊಟ್ಟು ತಮ್ಮೂರಿನ ಕೆರೆಗಳನ್ನು ಕಳೆದುಕೊಂಡು ಕೊನೆಗೆ ಗ್ರಾಮಗಳ ಜನ ಊರುಬಿಡುವಂತಾಗಿರುವುದು ಮಾತ್ರ ಸುಳ್ಳಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us