Kolar Crime: ಸರ್ಕಾರಿ ಕೆಲಸದಲ್ಲಿದ್ದ ಅನ್ಯೋನ್ಯ ದಂಪತಿ, ಇಬ್ಬರು ಮಕ್ಕಳು, ಆದರೆ ತಾಯಿಯ ಮುಂಗೋಪಕ್ಕೆ ಕುಟುಂಬವೇ ಬಲಿ

ಇಬ್ಬರಿಗೂ ಸರ್ಕಾರಿ ಕೆಲಸ, ಸುಂದರವಾದ ಜೀವನ... ಹೀಗಿರುವಾಗ ಸಣ್ಣಪುಟ್ಟ ಗಲಾಟೆಯನ್ನ ದೊಡ್ಡದು ಮಾಡಿಕೊಂಡ ಮಹಿಳೆ ತನ್ನ ಮಕ್ಕಳ ಜೀವ ತೆಗೆದು ತಾನೂ ಸಾವನ್ನಪ್ಪಿದ್ದು ಮಾತ್ರ ದುರಂತ.

Kolar Crime: ಸರ್ಕಾರಿ ಕೆಲಸದಲ್ಲಿದ್ದ ಅನ್ಯೋನ್ಯ ದಂಪತಿ, ಇಬ್ಬರು ಮಕ್ಕಳು, ಆದರೆ ತಾಯಿಯ ಮುಂಗೋಪಕ್ಕೆ ಕುಟುಂಬವೇ ಬಲಿ
ತಾಯಿಯ ಮುಂಗೋಪಕ್ಕೆ ಕುಟುಂಬವೇ ಬಲಿ
Edited By: ಸಾಧು ಶ್ರೀನಾಥ್​

Updated on: Jun 22, 2023 | 7:33 AM

ಅವರಿಬ್ಬರೂ ಸಾರಿಗೆ ಸಂಸ್ಥೆ ನೌಕರರು, 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದವರು, ಅನೋನ್ಯವಾಗಿಯೇ ಇದ್ದವರ ಮಧ್ಯೆ ಆಗಾಗ ಸಣ್ಣಪುಟ್ಟ ಗಲಾಟೆ, ಮನಸ್ತಾಪಗಳು ಇತ್ತು (Family Dispute). ಹಿರಿಯರು ಹಲವು ಬಾರಿ ಸರಿಮಾಡಿಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು. ಆದ್ರೆ ಮುಂಗೋಪಿಯಾಗಿದ್ದಾಕೆ ತನ್ನಿಬ್ಬರೂ ಮಕ್ಕಳನ್ನ ಕೊಂದು (Toddler), ಡೆತ್ ನೋಟ್ ಬರೆದಿಟ್ಟು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ಮುಗಿಲು ಮುಟ್ಟುವಂತೆ ಗೋಳಿಡುತ್ತಿರುವ ಕುಟುಂಬಸ್ಥರು, ಪುಟ್ಟ ಮಕ್ಕಳನ್ನ ನೆನೆದು ಸಣ್ಣ ಮಕ್ಕಳಂತೆ ಕಣ್ಣೀರಿಡುತ್ತಿರುವ ಪೊಷಕರು, ಮತ್ತೊಂದೆಡೆ ಎಲ್ಲವನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು… ಇದೆಲ್ಲಾ ಕಂಡು ಬಂದಿದ್ದು ಕೋಲಾರದಲ್ಲಿ (Kolar). ಹೌದು ಕುಟುಂಬ ಕಲಹದ ಹಿನ್ನೆಲೆಯಲ್ಲಿ ದುಡುಕು ನಿರ್ಧಾರದಿಂದ ತಾಯಿಯೊಬ್ಬಳು ಡೆತ್​ ನೋಟ್​ ಬರೆದಿಟ್ಟು ತನ್ನಿಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕೋಲಾರ ತಾಲ್ಲೂಕು ಉಪ್ಪುಕುಂಟೆ ಗ್ರಾಮದಲ್ಲಿ ಮೊನ್ನೆ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.

ತನ್ನ ಇಬ್ಬರು ಮಕ್ಕಳೊಂದಿಗೆ 35 ವರ್ಷದ ತಾಯಿ ಸುಗುಣ ತನ್ನ ಮಕ್ಕಳಾದ ಮಕ್ಕಳಾದ 12 ವರ್ಷದ ಪ್ರೀತಂ ಗೌಡ ಹಾಗೂ 5 ವರ್ಷದ ನಿಶಿತಾ ಗೌಡರನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಪತಿ ಮುರಳಿ ಕಾನ್ಟಬೆಲ್​ ಆಗಿ ಕೆಲಸ ಮಾಡುತ್ತಿದ್ದರೆ ಹಾಗೂ ಪತ್ನಿ ಸುಗುಣ ಸರ್ಕಾರಿ ಬಸ್ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.

13 ವರ್ಷಗಳ ಹಿಂದೆ ಉಪ್ಪುಕುಂಟೆ ಗ್ರಾಮದ ಮುರಳಿಯನ್ನ ಗಿರನಹಳ್ಳಿಯ ಸುಗುಣ ಪ್ರೀತಿಸಿ ವಿವಾಹವಾಗಿದ್ದರು. ಅನೋನ್ಯವಾಗಿಯೇ ಇದ್ದ ಇಬ್ಬರು ಸಹ ಆಗಾಗ ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆಯಾಗಿ ಊಟ ಬಿಟ್ಟು ಮುನಿಸಿಕೊಳ್ಳುತ್ತಿದ್ದ ಪ್ರಸಂಗಗಳು ನಡೆಯುತಿತ್ತು. ಮನೆಯಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ಹೊರತು ಪಡಿಸಿದರೆ ಅಂತ ದೊಡ್ಡ ಗಲಾಟೆ ಏನಿರಲಿಲ್ಲ. ಆದರೂ ಅದೇನಾಯ್ತೋ ಏನೋ ಗೊತ್ತಿಲ್ಲ ಎಂದಿನಂತೆ ಮೊನ್ನೆ ಮಂಗಳವಾರ ಮಧ್ಯಾಹ್ನ ಸೆಕೆಂಡ್ ಶಿಫ್ಟ್ ಕೆಲಸಕ್ಕೆ ಪತಿ ಮುರಳಿ ಹೋದ ಮೇಲೆ ತನ್ನ ಪತಿಯ ಮೇಲಿನ ಕೋಪಕ್ಕೆ ಡೆತ್​ ನೋಟ್​ ಬರೆದಿಟ್ಟು ಅದನ್ನು ತನ್ನ ತಮ್ಮನಿಗೆ ವಾಟ್ಸ್​ಪ್ ಮಾಡಿ ನಂತರ ತನ್ನಿಬ್ಬರು ಮಕ್ಕಳನ್ನು ಕೊಂದು ತಾನು ಕೂಡಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಇನ್ನು ಇತ್ತೀಚೆಗೆ ಸುಗುಣ ತಂದೆ ಮೃತಪಟ್ಟಿದ್ರು, ಮೊನ್ನೆಯಷ್ಟೆ 3 ದಿನದ ತಿಥಿ ಕಾರ್ಯ ಮುಗಿಸಿ ದಂಪತಿಯಿಬ್ಬರೂ ವಾಪಸ್ ಬಂದಿದ್ರು. ರಾತ್ರಿ ನಿದ್ದೆ ಇಲ್ಲ ಅನ್ನೋ ಕಾರಣಕ್ಕೆ ಮಲಗಿದ್ದ ಮುರಳಿ ಜೊತೆಗೆ ಮಕ್ಕಳಿಗೆ ಹೋಂ ವರ್ಕ್ ಹೇಳಿಕೊಟ್ಟಿಲ್ಲ ಎಂದು ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಮೂರು ದಿನದಿಂದ ಊಟ ಸಹ ಮಾಡದೆ ಕೋಪ ಬೆಳೆಸಿಕೊಂಡಿದ್ದಾಳೆ.

ಇದನ್ನು ಓದಿ: ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು, ಮೂರು ಪುಟಾಣಿ ಮಕ್ಕಳು ಸಹ ಇದ್ರು, ಕೊನೆಯ ಮಗುವನ್ನು ಅಪ್ಪ ಕೊಂದು ಬಿಟ್ಟ, ಕಾರಣವೇನು?

ಈ ವೇಳೆ ಮುರಳಿ ತನ್ನ ಪತ್ನಿ ಸುಗುಣಗೆ ಹೊಡೆದು ಬುದ್ದಿ ಸಹ ಹೇಳಿದ್ದಾನೆ, ಮೊದಲಿನಿಂದಲೂ ಮುಂಗೋಪಿಯಾಗಿರುವ ಸುಗುಣ ಪತಿಯ ಮೇಲಿನ ಕೋಪದಿಂದ ಹಠಕ್ಕೆ ಬಿದ್ದು ತನ್ನ ಗಂಡ ಹಾಗೂ ಅತ್ತೆ ಮಾವ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟ್ ಬರೆದು ತಮ್ಮನಿಗೆ ಮೆಸೇಜ್ ಮಾಡಿದ್ದಾಳೆ. ನಂತರ ಮಗಳು ನಿಶಿತಾ ಗೌಡಳನ್ನು ರೂಂ ನಲ್ಲಿ ನೇಣು ಹಾಕಿ, ನಂತರ ಮಗ ಪ್ರೀತಂ ಗೌಡನಿಗೆ ಮುಖಕ್ಕೆ ಪ್ಲಾಸ್ಟರ್​ ಹಾಕಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ.

ನಂತರ ತಾನು ಕೂಡಾ ಹಾಲ್​ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಆಗಷ್ಟೆ ಅತ್ತೆಯನ್ನ ಅಂಗಡಿಗೆ ಕಳುಹಿಸಿ ಮನೆಯಲ್ಲೆ ಇದ್ದ ಭಾವನ ಮಗಳನ್ನ ಮತ್ತೊಂದು ರೂಂನಲ್ಲಿ ಕೂಡಿ ಹಾಕಿ ನಂತರ ಸುಗುಣ ಪತಿಯ ಮೇಲಿನ ಕೋಪಕ್ಕೆ ತನ್ನಿಬ್ಬರ ಮಕ್ಕಳನ್ನ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸದ್ಯ ಡೆತ್​ ನೋಟ್​ ಹಾಗೂ ಸುಗುಣ ಪೊಷಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಸುಗುಣ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಸೇರಿದಂತೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ನಲ್ಲಿ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ, ಇಬ್ಬರಿಗೂ ಸರ್ಕಾರಿ ಕೆಲಸ, ಸುಂದರವಾದ ಜೀವನ… ಹೀಗಿರುವಾಗ ಸಣ್ಣಪುಟ್ಟ ಗಲಾಟೆಯನ್ನ ದೊಡ್ಡದು ಮಾಡಿಕೊಂಡು ಮಕ್ಕಳ ಜೀವ ತೆಗೆದು ತಾನೂ ಸಾವನ್ನಪ್ಪಿದ್ದು ಮಾತ್ರ ದುರಂತ. ಇಬ್ಬರ ಮಧ್ಯೆ ಗಲಾಟೆ, ಮನಸ್ತಾಪದಿಂದಾಗಿ ಬಾಳಿ ಬದುಕಬೇಕಿದ್ದ ಪುಟ್ಟ ಮಕ್ಕಳನ್ನ ಸಹ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದು ವಿಪರ್ಯಾಸವೇ ಸರಿ.

ಕೋಲಾರ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us