ಕ್ಲಾಕ್ ಟವರ್​ನಲ್ಲಿ 74 ವರ್ಷಗಳ ಬಳಿಕ ಭಾರತದ ಧ್ವಜ ಹಾರಿಸಲಾಗಿದೆ: ಸಂಸದ ಮುನಿಸ್ವಾಮಿ

| Updated By: preethi shettigar

Updated on: Mar 19, 2022 | 6:26 PM

ಧ್ವಜಾರೋಹಣ ನಂತರ ಮಾತನಾಡಿದ ಕೋಲಾರದ ಸಂಸದ ಮುನಿಸ್ವಾಮಿ, 74 ವರ್ಷಗಳ ಕನಸು ನನಸಾಗಿದೆ. ಕ್ಲಾಕ್​ ಟವರ್ ಮೇಲೆ ಭಾರತದ ಧ್ವಜ ಹಾರಿಸಬೇಕೆಂಬ ಕನಸು ಇಂದು ನನಸಾಗಿದೆ. ಕೆಲವು ರಾಜಕಾರಣಿಗಳ ಓಟ್​ ಬ್ಯಾಂಕ್​ ರಾಜಕಾರಣದಿಂದ ಅದು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಕ್ಲಾಕ್ ಟವರ್​ನಲ್ಲಿ 74 ವರ್ಷಗಳ ಬಳಿಕ ಭಾರತದ ಧ್ವಜ ಹಾರಿಸಲಾಗಿದೆ: ಸಂಸದ ಮುನಿಸ್ವಾಮಿ
ಕ್ಲಾಕ್ ಟವರ್
Follow us on

ಕೋಲಾರ: ಸಮಯ ತಿಳಿಸುವ ಭವ್ಯ ಕಟ್ಟಡವಾದರೂ ಆ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಮಯ ಬಂದಿರಲಿಲ್ಲ. ಆದರೆ ಸಂಸದ ಮುನಿಸ್ವಾಮಿ (Muneswamy) ಮಾಡಿದ ಪ್ರತಿಭಟನೆಯಿಂದ ಎರಡೇ ದಿನದಲ್ಲಿ ತ್ರಿವರ್ಣ ಧ್ವಜ ವೀರಾಜಮಾನವಾಗಿ ಹಾರಾಡುವ ಇತಿಹಾಸ ಸೃಷ್ಟಿಯಾಗಿದೆ. ಸದ್ಯ ಭರದಿಂದ ಸಾಗಿರುವ ಕ್ಲಾಕ್​ ಟವರ್​ಗೆ( Clock Tower)  ಬಣ್ಣ ಬಳಿಯುವ ಕೆಲಸ ಆರಂಭವಾಗಿದ್ದು, ಕ್ಲಾಕ್ ಟವರ್ ಏರಿಯಾದಲ್ಲಿ ಬಿಗಿ ಪೊಲೀಸ್(Police) ಬಂದೋಬಸ್ತ್ ಮಾಡಲಾಗಿದೆ.

ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಆತಂಕದ ಕೇಂದ್ರವಾಗಿ ಬೂದಿ ಮುಚ್ಚಿದ ಕೆಂಡದಂತಿತ್ತು. ಇದಕ್ಕೆ ಕಾರಣ ಕೋಲಾರ ಸಂಸದ ಮುನಿಸ್ವಾಮಿ ಏಕಾಏಕಿ ಕೋಲಾರದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದ್ದೇ ಕಾರಣ. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮುನಿಸ್ವಾಮಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಪರಿಣಾಮ ಕೂಡಲೇ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು, ಮನವೊಲಿಸಿ ಮುನಿಸ್ವಾಮಿ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡದೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಮುಂಜಾನೆ ಐದು ಗಂಟೆಯಿಂದಲೇ ಕ್ಲಾಕ್​ ಟವರ್​ ಏರಿಯಾದಲ್ಲಿ ನಾಕಾ ಬಂಧಿ ಹಾಕಿಕೊಂಡು ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಕ್ಲಾಕ್ ಟವರ್​ಗೆ ಬಣ್ಣ ಬಳಿಯುವ ಕೆಲಸ ಮಾಡಿದರು.

ಟವರ್​ ಮೇಲ್ಬಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿದು ನಾಲ್ಕು ಗಂಟೆ ಸುಮಾರಿಗೆ ಹಲವು ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿ ಎಲ್ಲರೂ ಜೈ ಹಿಂದ್​ ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಅಂಜುಮನ್​ ಮುಖಂಡ ನಾವೂ ಕೂಡಾ ಈ ದೇಶಕ್ಕಾಗಿ ಹೋರಾಟ ಮಾಡಿದವರು. ನಾವು ಇದೇ ದೇಶದವರು ನಮಗೂ ದೇಶದ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು. ಇನ್ನು ಈ ವೇಳೆ ಮಾತನಾಡಿದ ಎಸ್​ಪಿ ದೇವರಾಜ್​ ಇನ್ನು ಒಂದು ವಾರಗಳ ಕಾಲ ಕೋಲಾರ ನಗರದಲ್ಲಿ ನಿಷೇದಾಜ್ನೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಮುಂಜಾನೆ ಐದು ಗಂಟೆಗೆ ಸುಮಾರು 400 ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಯೊಂದಿಗೆ ಪೀಲ್ಡಿಗಿಳಿದಿದ್ದ ಎಸ್ಪಿ ದೇವರಾಜ್​ ಹಾಗೂ ಡಿಸಿ ವೆಂಕಟರಾಜಾ ಐದು ಗಂಟೆಯಿಂದ ಸಂಜೆ ನಾಲ್ಕು ಗಂಟೆ ಧ್ವಜಾರೋಹಣ ಮಾಡುವವರೆಗೂ ಸ್ಥಳದಲ್ಲೇ ಮೊಕ್ಕಾಂ ಹೂಡಿದರು. ಟವರ್​ ಮೇಲಿನ ಅರ್ಧ ಚಂದ್ರಾಕೃತಿ ತೆಗೆಯುವ ವಿಚಾರ, ಕೆಲವು ಜನರು ಗುಂಪು ಸೇರಿ ಗಲಾಟೆ ಮಾಡುವ ವಿಚಾರ ಸೇರಿದಂತೆ ಆಗಾಗ ತಗಾದೆ ಶುರುವಾಯಿತಾದರೂ ಎಲ್ಲವನ್ನೂ ನಿಭಾಯಿಸಿದರೂ, ಜೊತೆಗೆ ಎಲ್ಲಾ ಮುಗಿಯುವವರೆಗೂ ಮುಸ್ಲಿಂ ಮುಖಂಡರೂ ಕೂಡಾ ಸ್ಥಳ ಬಿಟ್ಟು ಕದಲದೆ ಕುಳಿತು ಧ್ವಜಾರೋಹಣ ಮಾಡವವರೆಗೂ ಅಲ್ಲೇ ಇದ್ದು ಧ್ವಜಾರೋಹಣ ಮಾಡಿ ಜೈ ಹಿಂದ್​ ಘೋಷಣೆ ಕೂಗಿದರು.

ಧ್ವಜಾರೋಗಹಣ ನಂತರ ಮಾತನಾಡಿದ ಕೋಲಾರದ ಸಂಸದ ಮುನಿಸ್ವಾಮಿ, 74 ವರ್ಷಗಳ ಕನಸು ನನಸಾಗಿದೆ. ಕ್ಲಾಕ್​ ಟವರ್ ಮೇಲೆ ಭಾರತದ ಧ್ವಜ ಹಾರಿಸಬೇಕೆಂಬ ಕನಸು ಇಂದು ನನಸಾಗಿದೆ. ಕೆಲವು ರಾಜಕಾರಣಿಗಳ ಓಟ್​ ಬ್ಯಾಂಕ್​ ರಾಜಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಅದೇನೇ ಇದ್ದರು ಇಂದು ಎಲ್ಲರೂ ಹಿಂದೂಸ್ಥಾನ್​ ಜಿಂದಾಬಾದ್ ಎಂದು ಕೂಗಿದ್ದಾರೆ. ಇಂಥಾದೊಂದು ಕ್ಷಣಕ್ಕೆ ಸಹಕಾರ ಕೊಟ್ಟ ಎಲ್ಲಾ ಮುಸ್ಲಿಮರು ಹಾಗೂ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಕ್ಲಾಕ್​ ಟವರ್​ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಇದರಲ್ಲಿ ಬೇಡಿಕೆ ಇಟ್ಟವರು ಸಂಸದರಾದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಶ್ರಮವಹಿಸಿದೆ. ಈ ತ್ರಿವರ್ಣ ಧ್ವಜದ ಮೂಲಕವಾದರೂ ಹಲವು ವರ್ಷಗಳಿಂದಲೂ ಗೊಂದಲಮಯವಾಗಿದ್ದ ವಾತಾವರಣ ತಿಳಿಯಾಗಲೀ ಎನ್ನುವುದೇ ಎಲ್ಲರ ಆಶಯ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ:
ಕೋಲಾರ: ಕ್ಲಾಕ್ ಟವರ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನಿರಾಕರಣೆ; ಮುನಿಸ್ವಾಮಿ ಏಕಾಂಗಿ ಪ್ರತಿಭಟನೆಗೆ ನಿರ್ಧಾರ

ವಿವಾದಿತ ಕ್ಲಾಕ್​ ಟವರ್​ಗೆ ಬಣ್ಣ; ತ್ರಿವರ್ಣ ಧ್ವಜ ಹಾರಿಸಲು ಜಿಲ್ಲಾಡಳಿತ ಸಿದ್ಧತೆ

Published On - 6:25 pm, Sat, 19 March 22