Video: ಜೆಡಿಎಸ್ ರೋಡ್ಶೋನಲ್ಲಿ ನಾಯಕರ ದೃಷ್ಟಿ ತೆಗೆದು ನೋಟಿನ ಕಂತೆ ಎಸೆದ ಕಾರ್ಯಕರ್ತ
ಜೆಡಿಎಸ್ ರೋಡ್ಶೋನಲ್ಲಿ ಕಾರ್ಯಕರ್ತ ನೋಟಿನ ಕಂತೆ ಎಸೆದಿದ್ದಾರೆ. ಜಿಲ್ಲೆಯ ಮುಳಬಾಗಿಲು ಪಟ್ಟಣದ ನೂಗಲಬಂಡೆ ಬಳಿ ಘಟನೆ ನಡೆದಿದೆ.
ಕೋಲಾರ: ಜೆಡಿಎಸ್ (JdS) ರೋಡ್ಶೋನಲ್ಲಿ ಕಾರ್ಯಕರ್ತ (worker) ನೋಟಿನ ಕಂತೆ ಎಸೆದಿದ್ದಾರೆ. ಜಿಲ್ಲೆಯ ಮುಳಬಾಗಿಲು ಪಟ್ಟಣದ ನೂಗಲಬಂಡೆ ಬಳಿ ಘಟನೆ ನಡೆದಿದೆ. ಅಲ್ಪಸಂಖ್ಯಾತರ ಸಮಾವೇಶಕ್ಕೂ ಮುನ್ನ ನಡೆದ ರೋಡ್ಶೋ ಮಾಡಲಾಗಿದೆ. ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ಗೆ 10, 20, 50 ರೂ. ಮುಖಬೆಲೆ ನೋಟಿನ ಕಂತೆಯಲ್ಲಿ ದೃಷ್ಟಿ ತೆಗೆದು ಕಾರ್ಯಕರ್ತ ಎಸೆದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರು ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್ನಿಂದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮಾಲೀಕ ಅರುಣ್ ಎಂಬುವವರು ಸುಮಾರು 4,000 ರೂಪಾಯಿಗಳನ್ನು ಎಸೆದು ಸಂಚಲನ ಮೂಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಹುಚ್ಚಿಗಾಗಿ ಹಣ ಎಸೆದಿರುವುದು ತಿಳಿದುಬಂದಿತ್ತು. ರೀಲ್ಸ್ಗಾಗಿ ಮಾಡಿದ್ದಲ್ಲ, ನನಗೆ ಸ್ವಲ್ಪ ಸಮಯ ಕೊಡಿ ಎಲ್ಲವೂ ಹೇಳುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿದ್ದ ಅರುಣ್, ಪೊಲೀಸರ ಮುಂದೆ, ತಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಹಣ ಎಸೆದಿದ್ದೆ, ಹೆಚ್ಚು ಲೈಕ್ಸ್ ಹಾಗೂ ಪ್ರಚಾರ ಸಿಗಬೇಕು ಎಂದು ಈ ರೀತಿ ಮಾಡಿದ್ದೇನೆ ಎಂದು ಬಾಯಿಬಿಟ್ಟಿದ್ದರು.
ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲೆ ಬಂದ ಅರುಣ್ ಹಣ ಎಸೆದು ಸ್ಥಳದಿಂದ ತೆರಳಿದ್ದನು. ಈ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು, ನಾಗಬಾವಿಯ ಅರುಣ್ ನಿವಾಸಕ್ಕೆ ನೋಟಿಸ್ ಜಾರಿ ಮಾಡಿದ್ದರು. ಇದೇ ವೇಳೆ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಅರುಣ್ ಇರುವುದನ್ನು ಖಚಿತಪಡಿಸಿದ ಪೊಲೀಸರು ಕಚೇರಿಗೆ ಎಂಟ್ರಿ ಕೊಟ್ಟು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು.
ಇದನ್ನೂ ಓದಿ: ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್ನಿಂದ ಹಣ ಎಸೆದ ವ್ಯಕ್ತಿ ಖಾಕಿ ವಶಕ್ಕೆ
ಹಣ ಎಸೆದ ಅರುಣ್ ಹೇಳುವುದೇನು?
ನನಗೆ ಜ್ಞಾನ, ಬುದ್ಧಿ ಶಕ್ತಿ ಚೆನ್ನಾಗಿದೆ. ಕೆಟ್ಟ ಉದ್ದೇಶದಿಂದ ಹಣ ಎಸೆದಿಲ್ಲ ಎಂದು ಅರುಣ್ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದರು. ನಾನು ವಿದ್ಯಾವಂತನಾಗಿದ್ದೇನೆ, ನನಗೂ ಬುದ್ಧಿಯಿದೆ. ಸಾರ್ವಜನಿಕವಾಗಿ ಹಣ ಎಸೆದಿದ್ದು ತಪ್ಪು ಎಂದು ನನಗೆ ಗೊತ್ತಿದೆ. ರೀಲ್ಸ್ ಮಾಡುವ ಉದ್ದೇಶದಿಂದ ಹಣ ಎಸೆದಿಲ್ಲ. ನನಗೆ ಸಮಯ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ. ದಯವಿಟ್ಟು ನನಗೆ ಸಮಯ ಕೊಡಿ ಎಂದು ಹೇಳಿದ್ದರು.
ಇದನ್ನೂ ಓದಿ: Bengaluru: ವಿಧಾನಸೌಧ ಬಳಿ 10 ಲಕ್ಷ ರೂ. ಪತ್ತೆ: ಹಣದ ಮೂಲ ಪತ್ತೆ ವೇಳೆ ಮತ್ತೊಂದು ಪ್ರಕರಣ ಬೆಳಕಿಗೆ
ಹಣ ಎಸೆದ ಅರುಣ್ ವಿರುದ್ಧ ಎಫ್ಐಆರ್ ದಾಖಲು
ಫ್ಲೈಓವರ್ನಲ್ಲಿ ಹಣ ಎಸೆದ ಪ್ರಕರಣ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿತ್ತು. ರಸ್ತೆಯಲ್ಲಿ ಹಣ ಎಸೆದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಹಾಗೂ ಜನರು ಅಪಾಯಕಾರಿಯಾಗಿ ಓಡಾಡುವಂತೆ ಮಾಡಿದ ಆರೋಪ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 283, 290, ಕೆಪಿ ಕಾಯ್ದೆ 92(D)ರಡಿ ಪ್ರಕರಣ ದಾಖಲಿಸಿದ್ದರು.
ವಿಧಾನಸೌಧ ಬಳಿ 10 ಲಕ್ಷ ರೂ. ಪತ್ತೆ
ಅದೇ ರೀತಿಯಾಗಿ ಜನವರಿ 4 ರಂದು ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅನಧಿಕೃತವಾಗಿ 10.5 ಲಕ್ಷ ರೂ. ಹಣವನ್ನು ಸಾಗಿಸುತ್ತಿದ್ದರು. ಗೇಟ್ನಲ್ಲಿ ಪೊಲೀಸರು ಕಾರ್ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಬ್ಯಾಗ್ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ. ಆದರೆ ಹಣದ ಮೂಲದ ಕುರಿತಾಗಿ ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯಕ್ತಿ ನೀಡಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:53 pm, Mon, 20 March 23