ಜೆಲ್ಲಿ ಕ್ರಷರ್​ಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು: ಸ್ಥಳಕ್ಕೆ ಡಾಗ್, ಬಾಂಬ್ ಸ್ಕ್ವಾಡ್​​ ತಂಡ ಭೇಟಿ‌

ಜೆಲ್ಲಿ ಕ್ರಷರ್​ಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜೆಲ್ಲಿ ಕ್ರಷರ್​ಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು: ಸ್ಥಳಕ್ಕೆ ಡಾಗ್, ಬಾಂಬ್ ಸ್ಕ್ವಾಡ್​​ ತಂಡ ಭೇಟಿ‌
​​ಕಲ್ಲು ಕ್ವಾರಿಯಲ್ಲಿ ಸ್ಫೋಟಗೊಂಡು ಕಾರ್ಮಿಕ ಸಾವು ಪ್ರಕರಣ
Updated By: ವಿವೇಕ ಬಿರಾದಾರ

Updated on: Oct 14, 2022 | 7:08 PM

ಕೋಲಾರ: ಜೆಲ್ಲಿ ಕ್ರಷರ್​ಲ್ಲಿ (jelly crusher) ಸ್ಫೋಟಕ ಸಿಡಿದು ಕಾರ್ಮಿಕ (Labor) ಸಾವನ್ನಪ್ಪಿರುವ ಘಟನೆ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಹಾರ (Bihar) ಮೂಲದ ರಾಕೇಶ್ ಸಾಣಿ (34) ಮೃತ ಕಾರ್ಮಿಕ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಡಾಗ್ ಮತ್ತು ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ‌ ನೀಡಿದೆ.

ಕೇಂದ್ರ ವಲಯ ಐಜಿ ಚಂದ್ರಶೇಖರ್ ಸ್ಪಷ್ಟನೆ

ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಎಸ್ಪಿ ದೇವರಾಜ್ ಅವರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು ನಿನ್ನೆ (ಅ. 13) ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಟ್ರಕ್ ನಿಂದ ಅಪಘಾತ ಆಗಿದೆ ಎಂದು ನಿತೀಶ್ ಕುಮಾರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಬಿಹಾರ್ ಮೂಲದ ರಾಕೇಶ್ ಎಂಬ ವ್ಯಕ್ತಿ ಮೃತ ಪಟ್ಟಿದ್ದಾನೆ. ಆದರೆ ನಮಗೆ ರಾಕೇಶ್​​ನ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದ್ದು, ತನಿಖೆ ಮಾಡುತ್ತಿದ್ದೇವೆ. ಸದ್ಯ ಮೇಲ್ನೋಟಕ್ಕೆ ಬ್ಲ್ಯಾಸ್ಟ್ ನಿಂದ ಸಾವು ಆಗಿದೆ ಅಂತ ಹೇಳಲಾಗುತ್ತಿದೆ. ಇಬ್ಬರಿಗೆ ಗಾಯಾಳಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ದೀಪೆನ್ ಎಂಬುವವರು ಬ್ಲ್ಯಾಸ್ಟ್ ಪರವಾನಿಗೆ ಹೊಂದಿದ್ದಾರೆ. ಕ್ರಷರ್ ಮಂಜುನಾಥ್ ಎಂಬುವವರಿಗೆ ಸೇರಿದೆ. ಆಕ್ಸಿಡೆಂಟ್ ಅನ್ನೋ ಕಟ್ಟು ಕಥೆ ಎಲ್ಲಿಂದ ಬಂತು ಅನ್ನೋ ತನಿಖೆ ಆಗುತ್ತಿದೆ. ಪೊಲೀಸರು ಏಕೆ ಆಕ್ಸಿಡೆಂಟ್ ಅಂತ ದೂರು ದಾಖಲಿಸಿಕೊಂಡಿದ್ದಾರೆ ಅನ್ನೋ ತನಿಖೆ ಮಾಡಿಸುತ್ತೇವೆ. ಎಫ್​ಐಆರ್​ ದಾಖಲು ಮಾಡಿರುವ ಅಧಿಕಾರಿ ಬಗ್ಗೆಯೂ ತನಿಖೆ ಮಾಡಲಾಗುತ್ತೆ. ಮೈನಿಂಗ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಕೊಮ್ಮನಹಳ್ಳಿಯಲ್ಲಿ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಗೆ  ಸಚಿವ ಮುನಿರತ್ನ ಭೇಟಿ 

ಕೋಲಾರ ಜಿಲ್ಲಾಸ್ಪತ್ರೆ ಶವಗಾರಕ್ಕೆ ಸಚಿವ ಮುನಿರತ್ನ ಭೇಟಿ ನೀಡಿ  ಶವವನ್ನು ಮರು ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಡಿಯೋ ಸಹಿತಿ ಮರಣೋತ್ತರ ಪರೀಕ್ಷೆಗೆ ಸೂಚನೆ ನೀಡಿದರು. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲಾ. ಪ್ರಕರಣದ ಸಂಪೂರ್ಣ ತನಿಖೆಗೆ ಸೂಚನೆ ನೀಡಿದ್ದೇನೆ.  ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುವೆ ಎಂದು ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Fri, 14 October 22