ಕೋಲಾರದಲ್ಲಿ ಧ್ವಜಕಂಬದಿಂದ ಕೆಳಗೆ ಬಿದ್ದ ಕನ್ನಡದ ಬಾವುಟ, ಕೊಪ್ಪಳ ರಾಜ್ಯೋತ್ಸವ ಕಾರ್ಯಕ್ರದಲ್ಲೂ ಎಡವಟ್ಟು

| Updated By: ಆಯೇಷಾ ಬಾನು

Updated on: Nov 01, 2023 | 1:47 PM

Kannada Rajyotsava 2023: ಕೋಲಾರದಲ್ಲಿ ಕನ್ನಡ ಬಾವುಟ ಧ್ವಜಾರೋಹಣ ವೇಳೆ ಧ್ವಜಕಂಬದಿಂದ ಬಾವುಟ ಕೆಳಗೆ ಬಿದ್ದಿದೆ. ಕೊಪ್ಪಳದ ಕರ್ನಾಟಕ ರಾಜೋತ್ಸವ ಕಾರ್ಯಕ್ರಮದಲ್ಲಿ ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರನ್ನೇ ಈ ವರ್ಷ ಕೂಡಾ ನಮೂದಿಸಲಾಗಿದೆ. ಜಿಲ್ಲಾಡಳಿತ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರು ಬರೆಯದೆ ಕಳೆದ ವರ್ಷದ ಪ್ರಶಸ್ತಿ ಪುರಸ್ಕೃತರ ಹೆಸರು ನಮೂದಿಸುವ ಮೂಲಕ ಎಡವಟ್ಟು ಮಾಡಿದೆ.

ಕೋಲಾರದಲ್ಲಿ ಧ್ವಜಕಂಬದಿಂದ ಕೆಳಗೆ ಬಿದ್ದ ಕನ್ನಡದ ಬಾವುಟ, ಕೊಪ್ಪಳ ರಾಜ್ಯೋತ್ಸವ ಕಾರ್ಯಕ್ರದಲ್ಲೂ ಎಡವಟ್ಟು
ಕೋಲಾರದಲ್ಲಿ ಧ್ವಜಕಂಬದಿಂದ ಕೆಳಗೆ ಬಿದ್ದ ಕನ್ನಡದ ಬಾವುಟ
Follow us on

ಕೋಲಾರ, ನ.01: ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸದ ಸಂಭ್ರಮ-ಸಡಗರ ಮನೆ ಮಾಡಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಾಡ ಧ್ವಜ ರಾರಾಜಿಸುತ್ತಿದೆ. ಕನ್ನಡಿಗರು ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೆದಿದ್ದಾರೆ (Kannada Rajyotsava). ಆದರೆ ಕೋಲಾರ, ಕೊಪ್ಪಳದಲ್ಲಿ ಸಂಭ್ರಮದ ವೇಳೆ ಎಡವಟ್ಟಾಗಿದೆ. ಕೋಲಾರದಲ್ಲಿ ಕನ್ನಡ ಬಾವುಟ (Kannada Flag) ಧ್ವಜಾರೋಹಣ ವೇಳೆ ಅಚಾತುರ್ಯ ನಡೆದಿದೆ. ಧ್ವಜಾರೋಹಣ ವೇಳೆ ಧ್ವಜಕಂಬದಿಂದ ಬಾವುಟ ಕೆಳಗೆ ಬಿದ್ದಿದೆ. ಕೋಲಾರ (Kolar) ನಗರದ ಎಂ.ಜಿ.ರಸ್ತೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ‌ಪಾಷಾ ಸೇರಿದಂತೆ ಶಾಸಕ, ಸಂಸದರು ಧ್ವಜಾರೋಹಣ ಮಾಡುವ ವೇಳೆ ಧ್ವಜಕಂಬದಿಂದ ಬಾವುಟ ಕೆಳಗೆ ಬಿದ್ದಿದೆ. ನಂತರ ಯುವಕನೋರ್ವ ಮತ್ತೆ ಧ್ವಜ ಕಂಬಕ್ಕೆ ಹತ್ತಿ ಕನ್ನಡ ಧ್ವಜ ಕಟ್ಟಿದ್ದಾನೆ.

ಇನ್ನು ಕೋಲಾರದಲ್ಲಿ ಭುವನೇಶ್ವರಿ ಕನ್ನಡ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆನೆಯ ಮೇಲೆ‌ ಕೋಲಾರಮ್ಮ ದೇವಿಯನ್ನು ಹೊತ್ತು ನಗರದಲ್ಲಿ ಮೆರವಣಿಗೆ ಮಾಡಲಾಗಿದೆ. ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಸಂಸದ ಮುನಿಸ್ವಾಮಿ ಅವರು ಚಾಲನೆ ನೀಡಿದರು. ಆನೆಯ ಜೊತೆಗೆ ಹತ್ತಾರು ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಕನ್ನಡಿಗರೂ ಅಭಿಮಾನ ಪಡುವಂತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ

ಕೊಪ್ಪಳದಲ್ಲೂ ಎಡವಟ್ಟು

ಕೊಪ್ಪಳದ ಕರ್ನಾಟಕ ರಾಜೋತ್ಸವ ಕಾರ್ಯಕ್ರಮದಲ್ಲಿ ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರನ್ನೇ ಈ ವರ್ಷ ಕೂಡಾ ನಮೂದಿಸಲಾಗಿದೆ. ಜಿಲ್ಲಾಡಳಿತ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರು ಬರೆಯದೆ ಕಳೆದ ವರ್ಷದ ಪ್ರಶಸ್ತಿ ಪುರಸ್ಕೃತರ ಹೆಸರು ನಮೂದಿಸುವ ಮೂಲಕ ಎಡವಟ್ಟು ಮಾಡಿದೆ. ಸಚಿವ ಶಿವರಾಜ ತಂಗಡಗಿ ಭಾಷಣದ ಪ್ರತಿಯಲ್ಲಿ ಈ ರೀತಿಯ ಎಡವಟ್ಟು ಕಂಡುಬಂದಿದೆ. ಸಚಿವ ಶಿವರಾಜ ತಂಗಡಗಿ ಭಾಷಣ ಪ್ರತಿಯಲ್ಲಿ ಕಳೆದ ವರ್ಷ ಪ್ರಶಸ್ತಿ ಪಡೆದವರ ಹೆಸರು ಉಲ್ಲೇಖಿಸಲಾಗಿದೆ. ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕೊಪ್ಪಳ ಜಿಲ್ಲೆಯ ಮೂವರ ಹೆಸರನ್ನು ಉಲ್ಲೇಖಿಸಿಲ್ಲ. ಈ ಬಾರಿ ಹುಚ್ಚಮ್ಮ ಚೌದ್ರಿ, ಕೇಶಪ್ಪ ಶಿಳ್ಳಿಕ್ಯಾತರ್, ಗುಂಡಪ್ಪ ವಿಭೂತಿ ಎಂಬುವವರು ಪ್ರಶಸ್ತಿ ಪಡೆದಿದ್ದಾರೆ. ಆದರೆ ಈ ಮೂವರು ಹೆಸರು ಉಲ್ಲೇಖಿಸದೆ ಕಳೆದ ವರ್ಷದ ಇಬ್ಬರ ಹೆಸರು ಉಲ್ಲೇಖ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:31 pm, Wed, 1 November 23