‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!

ಕೋಲಾರದ ಹೊರವಲಯದಲ್ಲಿ ಯುವಕ ಸಲ್ಮಾನ್ ಪಾಷಾ ಬರ್ಬರ ಕೊಲೆಯಾಗಿದ್ದಾನೆ. ಸೋಫಾ ಆರ್ಡರ್ ನೆಪದಲ್ಲಿ ಕರೆದೊಯ್ದು, ಮದ್ಯ ಹಾಗೂ ಗಾಂಜಾ ಅಮಲಿನಲ್ಲಿದ್ದ ಅಬ್ದುಲ್ ರಶೀದ್ ಕಲ್ಲು ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಕುಟುಂಬಸ್ಥರು ದುಃಖದಲ್ಲಿದ್ದು, ಜಿಲ್ಲೆಯಲ್ಲಿ ಮಾದಕವಸ್ತು ಹಾವಳಿ ಹೆಚ್ಚಿರುವುದು ಇಂತಹ ಕೃತ್ಯಗಳಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸೋಫಾ ಅಳತೆ ಮಾಡಿಕೊಡು ಬಾ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!
ಸಲ್ಮಾನ್ ಪಾಷಾ (26)
Edited By:

Updated on: Apr 28, 2026 | 7:34 PM

ಕೋಲಾರ, ಏ.28: ಜಿಲ್ಲೆಯಲ್ಲಿ ಒಂದು ಆರ್ಡರ್​ ಇದೆ ಎಂದು ನಂಬಿಸಿ ಕರೆದೊಯ್ದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ. ಬೀಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (26) ಕೊಲೆಯಾದ ದುರ್ದೈವಿ ಎಂದು ಹೇಳಲಾಗಿದ . ಸೋಫಾ ತಯಾರಿಕೆ ಮತ್ತು ರಿಪೇರಿ ಕೆಲಸ ಮಾಡಿಕೊಂಡಿದ್ದ ಸಲ್ಮಾನ್ ಪಾಷಾ ಮನೆಗೆ ನಿನ್ನೆ ರಾತ್ರಿ 11:30ರ ಸುಮಾರಿಗೆ ಪರಿಚಯಸ್ಥ ಹುಡುಗರು ಬಂದಿದ್ದರು. “ಹೊಸ ಸೋಫಾ ಆರ್ಡರ್ ಬಂದಿದೆ, ಅದರ ಅಳತೆ ತೆಗೆದುಕೊಳ್ಳಲು ಬಾ” ಎಂದು ಹೇಳಿ ಆಟೋದಲ್ಲಿ ಸಲ್ಮಾನ್‌ನನ್ನು ಕರೆದುಕೊಂಡು ಹೋಗಿದ್ದಾರೆ.

ಎಪಿಎಂಸಿ ಮಾರುಕಟ್ಟೆ ಸಮೀಪದ ಮೆಹಬೂಬ್ ಪೆಟ್ರೋಲ್ ಬಂಕ್ ಬಳಿಯಿರುವ ಲಕ್ಷ್ಮೀ ಬಾರ್ ಬಳಿ ಬಂದಾಗ ಎಲ್ಲರೂ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಮತ್ತು ಜಮಾಲ್ ಷಾ ನಗರದ ಆಟೋ ಚಾಲಕ ಅಬ್ದುಲ್ ರಶೀದ್ ನಡುವೆ ಗಲಾಟೆ ಶುರುವಾಗಿದೆ. ಗಾಂಜಾ ಮತ್ತು ಮದ್ಯದ ಅಮಲಿನಲ್ಲಿದ್ದ ಅಬ್ದುಲ್ ರಶೀದ್ ಏಕಾಏಕಿ ಸಲ್ಮಾನ್ ಪಾಷಾ ಮೇಲೆ ಕಲ್ಲು ಎತ್ತಿಹಾಕಿ, ನಂತರ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಲ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು, ಕೊಲೆ ಮಾಡಿ ಅದೇ ಸ್ಥಳದಲ್ಲಿ ಕುಡಿದ ಮತ್ತಿನಲ್ಲಿ ಬಿದ್ದಿದ್ದ ಆರೋಪಿ ಅಬ್ದುಲ್ ರಶೀದ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಎಂ.ಜಿ. ರೋಡ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ; ಮ್ಯಾನೇಜರ್ ಮೇಲೆ ಬಟ್ಟೆ ಹರಿಯಲು ಯತ್ನಿಸಿದ ಆರೋಪ

“ಮನೆಗೆ ಆಸರೆಯಾಗಿದ್ದ ಮಗನನ್ನು ಆರ್ಡರ್ ಕೊಡ್ತೀವಿ ಅಂತ ಸುಳ್ಳು ಹೇಳಿ ಕರೆದುಕೊಂಡು ಹೋಗಿ ಕೊಂದಿದ್ದಾರೆ” ಎಂದು ಸಲ್ಮಾನ್ ತಂದೆ ಖಾದರ್ ಪಾಷಾ ಮತ್ತು ತಾಯಿ ಶಕೀಲಾ ಕಣ್ಣೀರಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us