ಕೊಪ್ಪಳ: ಅಂಗನವಾಡಿ ಮೇಲ್ಚಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳಿಗೆ ಗಾಯ

| Updated By: ಆಯೇಷಾ ಬಾನು

Updated on: Sep 23, 2024 | 1:46 PM

ಕೊಪ್ಪಳ ಜಿಲ್ಲೆ ಗಂಗಾವತಿಯ ಮೆಹಬೂಬ್ ನಗರದಲ್ಲಿ ಅಂಗನವಾಡಿ ಮೇಲ್ಚಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಕೊಪ್ಪಳ: ಅಂಗನವಾಡಿ ಮೇಲ್ಚಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳಿಗೆ ಗಾಯ
ಅಂಗನವಾಡಿ ಮೇಲ್ಚಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳಿಗೆ ಗಾಯ
Follow us on

ಕೊಪ್ಪಳ, ಸೆ.23: ಅಂಗನವಾಡಿ (Anganwadi) ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ದಿಡೀರನೆ ಉದುರಿ ಬಿದ್ದಿದ್ದರಿಂದ ನಾಲ್ವರು ಮಕ್ಕಳು (Children) ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮೆಹಬೂಬ್ ನಗರದಲ್ಲಿ ನಡೆದಿದೆ. ಮಹೆಬೂಬ್ ನಗರದಲ್ಲಿರೋ 11 ನೇ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕಾಂಕ್ರಿಟ್ ಉದುರಿ ಬಿದ್ದಿದೆ.

ಇಂದು ಮುಂಜಾನೆ ಅಂಗನವಾಡಿಗೆ 20ಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದವು. ಆದರೆ ಮುಂಜಾನೆ 10.30ರ ಸಮಯದಲ್ಲಿ ದಿಡೀರನೆ ಕಾಂಕ್ರೀಟ್ ಉದುರಿ ಬಿದ್ದಿದೆ. ಇದರಿಂದ ನಾಲ್ಕು ಮಕ್ಕಳ ತಲೆ ಮತ್ತು ಕಾಲುಗಳಿಗೆ ಗಾಯವಾಗಿವೆ. ಮೆಹಬೂಬ್ ನಗರದ ಅಮನ್, ಮನ್ವಿತ್,ಮದ೯ನ್,‌ ಸುರಕ್ಷಾ ಅನ್ನೋ ಮಕ್ಕಳು ಗಾಯಗೊಂಡಿವೆ. ಗಾಯಗೊಂಡ ಮಕ್ಕಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿವೆ. ಇನ್ನು ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ನಗರಸಭೆ ಅಧ್ಯಕ್ಷ ಮತ್ತು ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಕಷ್ಟ; ಇತ್ತ ಸಂಬಳವೂ ಇಲ್ಲ, ಮೊಟ್ಟೆ, ತರಕಾರಿಗೂ ಸ್ವಂತ ಹಣ ಹಾಕಿ ಕಂಗಾಲು

ಕಳಪೆ ಕಾಮಗಾರಿಯೇ ಘಟನೆಗೆ ಕಾರಣ

ಇನ್ನು ಮೆಹಬೂಬ್ ನಗರದಲ್ಲಿ ನಿರ್ಮಾಣವಾಗಿರೋ ಅಂಗನವಾಡಿ ಕಟ್ಟಡ ತೀರಾ ಹಳೆಯ ಕಟ್ಟಡವೇನಲ್ಲಾ. ಈ
ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ ಕೇವಲ ಏಳು ವರ್ಷವಾಗಿದೆ. ಏಳೇ ವರ್ಷಕ್ಕೆ ಕಟ್ಟಡದ ಕಾಮಗಾರಿ ಅಸಲಿಯತ್ತು ಬಯಲಾಗಿದೆ. ಹೌದು ಕಳಪೆ ಕಾಮಗಾರಿಯಿಂದಲೇ ಈ ಘಟನೆ ನಡೆದಿದ್ದು ಇದಕ್ಕೆ ಕಾರಣವಾಗಿರೋ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಪಾಲಕರು ಆಗ್ರಹಿಸಿದ್ದಾರೆ.

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ. ಜೊತೆ 3-4 ತಿಂಗಳಿಂದ ಕಾರ್ಯಕರ್ತೆಯರಿಗೆ ಸಂಬಳ ಬಂದಿಲ್ಲ. ಮೊಟ್ಟೆ ಖರೀದಿಸಿರುವ ಹಣ ಕೂಡ ಪೆಂಡಿಂಗ್ ಇದೆ. ಇದರ ಜೊತೆಗೆ ಈಗ ತರಕಾರಿಗೂ ತಮ್ಮದೇ ಸ್ವಂತ ಹಣ ಹಾಕಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಸ್ಥಿತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಂದಿದೆ. ಇಂತಹ ಸಮಸ್ಯೆಗಳ ನಡುವೆ ಇದೀಗ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಕೂಡ ಸರಿ ಇಲ್ಲ. ಈ ರೀತಿಯ ಅವ್ಯವಸ್ಥೆ ಇದ್ದರೆ ಯಾವ ಪೋಷಕರು ಕೂಡ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸಲು ಇಷ್ಟ ಪಡುವುದಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:36 pm, Mon, 23 September 24