R Dhruvanarayana: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ತೀವ್ರ ರಕ್ತಸ್ರಾವದಿಂದ ನಿಧನ

KPCC Working President R Dhruvanarayana: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ(61) ತೀವ್ರ ರಕ್ತಸ್ರಾವದಿಂದ ನಿಧನರಾಗಿದ್ದಾರೆ.

Follow us
| Updated By: ಆಯೇಷಾ ಬಾನು

Updated on:Mar 11, 2023 | 11:32 AM

ಮೈಸೂರು: ಕಾಂಗ್ರೆಸ್ ಉಪಾಧ್ಯಕ್ಷರೂ ಮಾಜಿ ಸಂಸದರು ಆಗಿದ್ದ ಆರ್. ಧ್ರುವನಾರಾಯಣ (61)(R Dhruvanarayan) ಮಾರ್ಚ್ 11ನೇ ತಾರೀಕಿನ ಶನಿವಾರ ಹೃದಯ ಸ್ತಂಭನದಿಂದ(Cardiac Arrest) ನಿಧನರಾಗಿದ್ದಾರೆ. ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಶನಿವಾರ ಬೆಳಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರ ಕಾರು ಚಾಲಕರಿಗೆ ಕರೆ ಮಾಡಿ, ಕರೆಸಿಕೊಳ್ಳಲಾಗಿದೆ. ಆದರೆ ಧ್ರುವನಾರಾಯಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತೆರಳಿದಾಗ, ಧ್ರುವನಾರಾಯಣ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾಗಿ ಗೊತ್ತಾಗಿದೆ.

ಇದನ್ನೂ ಓದಿ: R Dhruvanarayana Obituary: ಕಾಂಗ್ರೆಸ್​ನ ಸಾಮಾನ್ಯ ಕಾರ್ಯಕರ್ತನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷತನಕ ಆರ್​.ಧ್ರುವನಾರಾಯಣ ನಡೆದು ಬಂದ ದಾರಿ

ಧ್ರುನಾರಾಯಣ ಅವರಿಗೆ ಇಬ್ಬರು ಪುತ್ರರು, ಪತ್ನಿ ಇದ್ದಾರೆ. 1983ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಇವರು 1986ರಲ್ಲಿ ಎನ್ ಎಸ್ ಯುಐ ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೇ ಕೊಳ್ಳೇಗಾಲ ಕ್ಷೇತ್ರದಿಂದ 1 ಬಾರಿ, ಸಂತೇಮರಹಳ್ಳಿ ಕ್ಷೇತ್ರದಿಂದ 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ವಿ. ಶ್ರೀನಿವಾಸ್ ಪ್ರಸಾದ್ ಎದುರು ಸೋಲು ಅನುಭವಿಸಿದ್ದರು.

ಧ್ರುವನಾರಾಯಣ ಅವರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಹಳೇ ಮೈಸೂರು ಭಾಗದ ಪ್ರಮುಖ ನಾಯಕ ಧ್ರುವನಾರಾಯಣ ಅವರ ಸಾವಿನಿಂದ ತೀವ್ರ ಆಘಾತವಾಗಿದೆ ಎಂದಿದ್ದಾರೆ.

ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶ

ಇನ್ನು ಮೈಸೂರಿನ ವಿಜಯನಗರದ ನಿವಾಸದಲ್ಲಿ ಧ್ರುವನಾರಾಯಣ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಬಳಿಕ ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡಿನ ಹುಲ್ಲಳ್ಳಿ ಸರ್ಕಲ್​ನಿಂದ ಆರ್​​ಪಿ ರಸ್ತೆವರೆಗೆ ಮೆರವಣಿಗೆ ನಡೆಯಲಿದ್ದು ನಂತರ ಚಾಮರಾಜನಗರ ಕಾಂಗ್ರೆಸ್ ಕಚೇರಿ ಬಳಿ ದರ್ಶನಕ್ಕೆ ಅವಕಾಶ‌ ನಿಡಲಾಗಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಹುಟ್ಟೂರು ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೈಸೂರಿನಲ್ಲಿ ಟಿವಿ9ಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 am, Sat, 11 March 23