ಹೆಬ್ಬಾಳ್ಕರ್, ಸಾಹುಕಾರ ಮಧ್ಯೆ ಮತ್ತೆ ಶುರುವಾಯ್ತು ಸಮರ: ಜಾರಕಿಹೊಳಿಯ ಒಂದೊಂದು ಆರೋಪಕ್ಕೆ ತಿರುಗೇಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 28, 2024 | 3:31 PM

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ‌ಗೆ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್​ ವಾಗ್ದಾಳಿ ಮಾಡಿದ್ದಾರೆ. ಆ ಮೂಲಕ ಇದೀಗ ಮತ್ತೆ ಇಬ್ಬರ ನಡುವೆ ಸಮರ ಶುರುವಾಗಿದೆ. ರಮೇಶ್ ಜಾರಕಿಹೊಳಿ‌ ಈ ಹಿಂದೆ ಮಾಡಿದ್ದ ಕೆಲ ಆರೋಪಗಳಿಗೆ ಸದ್ಯ ಹೆಬ್ಬಾಳ್ಕರ್​ ಟಾಂಗ್​ ನೀಡಿದ್ದಾರೆ.

ಹೆಬ್ಬಾಳ್ಕರ್, ಸಾಹುಕಾರ ಮಧ್ಯೆ ಮತ್ತೆ ಶುರುವಾಯ್ತು ಸಮರ: ಜಾರಕಿಹೊಳಿಯ ಒಂದೊಂದು ಆರೋಪಕ್ಕೆ ತಿರುಗೇಟು
ಹೆಬ್ಬಾಳ್ಕರ್, ಸಾಹುಕಾರ ಮಧ್ಯೆ ಮತ್ತೆ ಶುರುವಾಯ್ತು ಸಮರ: ಜಾರಕಿಹೊಳಿಯ ಒಂದೊಂದು ಆರೋಪಕ್ಕೆ ತಿರುಗೇಟು
Follow us on

ಬೆಳಗಾವಿ, ಜೂನ್​ 28: ಶಾಸಕ ರಮೇಶ್​ ಜಾರಕಿಹೊಳಿ (Ramesh Jarkiholi) ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)​ ನಡುವಿನ ಸಮರ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಮತ್ತೊಮ್ಮೆ ಇಬ್ಬರ ಮಧ್ಯೆ ಸಮರ ಶುರುವಾಗಿದೆ. ರಮೇಶ್ ಜಾರಕಿಹೊಳಿ‌ಗೆ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್​ ವಾಗ್ದಾಳಿ ಮಾಡಿದ್ದಾರೆ. ಭಾರತದ ಸಂಸ್ಕೃತಿಯಲ್ಲಿ ನಾನು ನಂಬಿಕೆ ಇಟ್ಟವಳು. ರಮೇಶ್​ ಜಾರಕಿಹೊಳಿಗೆ ನಾನು ಉತ್ತರ ಕೊಡದಿರುವುದೇ ಲೇಸು. ಏಕೆಂದರೆ ಕ್ಷೇತ್ರದ ಜನರೇ ಉತ್ತರ ಕೊಡ್ತಾರೆ ಎಂದು ಟಾಂಗ್​ ನೀಡಿದ್ದಾರೆ.

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ವಿಷಕನ್ಯೆ ಅಂತಾರೋ‌ ಇನ್ನೊಂದು ಕನ್ಯೆ ಅಂತಾರೋ ಅನ್ನಲಿ. ರಮೇಶ್​ ಜಾರಕಿಹೊಳಿ ಎಂಥವರೆಂದು ಕರ್ನಾಟಕದ ಜನತೆಗೆ ಗೊತ್ತಿದೆ. ಅವರ ಸಂಸ್ಕೃತಿ ಎಂಥದ್ದು ಅಂತಾ ರಾಜ್ಯದ ಜನರೇ ನೋಡಿದ್ದಾರೆ. ಹೀಗಾಗಿ ಪಾಪ ಅವರ ಬಗ್ಗೆ ನಾನೇಕೆ ಮಾತನಾಡಲಿ ಎಂದು ವಾಗ್ಧಾಳಿ ಮಾಡಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಬೆಳಗಾವಿಯಲ್ಲಿ ತಮ್ಮ ತಾಕತ್ತು ತೋರಿಸಿದ ಜಾರಕಿಹೊಳಿ ಬ್ರದರ್ಸ್

ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಣ ತೂರಾಡಿದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ್ದು, ಎಂಎಲ್‌ಸಿ ಚುನಾವಣೆಯಲ್ಲಿ ಯಾರ ಸೊಕ್ಕಿನಿಂದ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಇಡೀ ರಾಜ್ಯದಲ್ಲಿ ನನ್ನ ಸಹೋದರ ಚನ್ನರಾಜ್ ಹೆಚ್ಚು ಲೀಡ್​ನಿಂದ ಗೆದ್ದಿದ್ದಾನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಂದ್ರು. ರಮೇಶ್ ಜಾರಕಿಹೊಳಿ ಪ್ರಯತ್ನಕ್ಕೆ ಕ್ಷೇತ್ರದ ಜನರೇ ಉತ್ತರ ಕೊಟ್ರು.

ಲಕ್ಷ್ಮೀ ಗೆದ್ದರೇ ದೊಡ್ಡ ಹಾರ ತಂದು ಹಾಕುತ್ತೇನೆ ಅಂತಾ ಹೇಳಿದ್ದರು. ಆ ಹಾರ ಎಲ್ಲಿದೆ ಅಂತಾ ಕಾಯ್ತಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮೇಲೂ ನಾನು ಉತ್ತರ ಕೊಡಲಿಲ್ಲ. ಈ ಮಾತಿಗೂ ಉತ್ತರ ಕೊಡಲ್ಲ, ಕಾಲಾಯ ತಸ್ಮೈ ನಮಃ ಎಂದಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಗಟ್ಟಿಗತ್ತಿ ಆದರೂ ನಾನು ಒಬ್ಬಳು ತಾಯಿ

ಪುತ್ರನ ಸೋಲಿನಿಂದ ಹೆಬ್ಬಾಳ್ಕರ್ ಮೌನ ಆಗಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಮಗ ಸೋತ ಮೇಲೆ ಮೌನ ಆಗಿದೆ ಅಂದ್ರು. ಲಕ್ಷ್ಮೀ ಹೆಬ್ಬಾಳ್ಕರ್ ಗಟ್ಟಿಗತ್ತಿ ಆದರೂ ನಾನು ಒಬ್ಬಳು ತಾಯಿ. ಮಗನ ಭವಿಷ್ಯ ಉಜ್ವಲ ಆಗಲಿ ಅನ್ನೋದು ತಪ್ಪಾ. ಮಗನ ಭವಿಷ್ಯ ಹೆಚ್ಚು ಕಡಿಮೆ ಆದಾಗ ಸಂಕಟ ಆಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಹೊರಗಿನವ ಅಂತ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ: ಜಗದೀಶ್ ಶೆಟ್ಟರ್

ಮಕ್ಕಳು ಬಿದ್ದಾಗ ಸಂಕಟ ಆಗುತ್ತೆ ಅಲ್ಲ, ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಂಕಟ ಆಗಿದೆ. ಆದರೆ ಸಂಕಟ ಆಗಿದೆ ಅಂತಾ ಕೈ ಕಟ್ಟಿ ಕೂರುವ ಜಾಯಮಾನ ನನ್ನದಲ್ಲ. ಮೀಸೆ ಮಣ್ಣಾಗಿದೆ ಅನ್ನೋ ಜಾಯಮಾನ ಅಲ್ಲ. ಈಗ ಬಿದ್ದಿದ್ದಾನೆ ಬಿದ್ದೋನು ಏಳುವುದು ಸಹಜ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:04 pm, Fri, 28 June 24