AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಬಿ ಬೆಟ್ಟದಲ್ಲಿ ಸ್ಫೋಟಕ ಸಾಮಾಗ್ರಿ ಪತ್ತೆ; 11 ಡಿಟೋನೇಟರ್‌, 20 ಜಿಲೆಟಿನ್ ಕಡ್ಡಿ ಪೊಲೀಸರ ವಶಕ್ಕೆ

ಬೇಬಿಬೆಟ್ಟದಲ್ಲಿ ಸ್ಫೋಟಕಗಳು ಸಿಕ್ಕಿದ್ದು 11 ಡಿಟೋನೇಟರ್‌ಗಳು, 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಹಿಂದೆ ಕೆಆರ್​ಎಸ್ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿ ಕೂಡಾ ಸ್ಫೋಟಕಗಳು ಪತ್ತೆಯಾಗಿದ್ದವು.

ಬೇಬಿ ಬೆಟ್ಟದಲ್ಲಿ ಸ್ಫೋಟಕ ಸಾಮಾಗ್ರಿ ಪತ್ತೆ; 11 ಡಿಟೋನೇಟರ್‌, 20 ಜಿಲೆಟಿನ್ ಕಡ್ಡಿ ಪೊಲೀಸರ ವಶಕ್ಕೆ
ಪತ್ತೆಯಾದ ಸ್ಫೋಟಕಗಳು
TV9 Web
| Updated By: Skanda|

Updated on: Aug 03, 2021 | 9:35 AM

Share

ಮಂಡ್ಯ: ಕೆಲ ದಿನಗಳ ಹಿಂದೆಯಷ್ಟೇ ತಾರಕಕ್ಕೇರಿದ್ದ ಅಕ್ರಮ ಗಣಿಗಾರಿಕೆ (Illegal Mining) ವಿವಾದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಬೇಬಿ ಬೆಟ್ಟದ (Baby Betta) ನಿಷೇಧಿತ ಗಣಿ ಪ್ರದೇಶದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಸ್ಫೋಟಕ ಸಿಕ್ಕಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪಾಂಡವಪುರ ಠಾಣೆ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಬೇಬಿಬೆಟ್ಟದಲ್ಲಿ ಸ್ಫೋಟಕಗಳು ಸಿಕ್ಕಿದ್ದು 11 ಡಿಟೋನೇಟರ್‌ಗಳು, 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಹಿಂದೆ ಕೆಆರ್​ಎಸ್ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿ ಕೂಡಾ ಸ್ಫೋಟಕಗಳು ಪತ್ತೆಯಾಗಿದ್ದವು.

ಸ್ಪೋಟಕಗಳ ಅಕ್ರಮ ಮಾರಾಟ ಪತ್ತೆಯಾದ ಬೆನ್ನಲ್ಲೇ ಸಿದ್ದಲಿಂಗೇಶ್ವರ ಕ್ರಷರ್ ಸಮೀಪದಲ್ಲಿ ಡಿಟೋನೇಟರ್‌ಗಳು, ಜಿಲೆಟಿನ್ ಕಡ್ಡಿಗಳು ಕಂಡುಬಂದಿರುವುದು ಗಮನಾರ್ಹವಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪತ್ತೆಯಾದ ಅಷ್ಟೂ ಸ್ಫೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ಮಾತನಾಡಿದ್ದ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ, ಅಕ್ರಮ ಗಣಿಗಾರಿಕೆ ಕಳೆದ ಎರಡೂವರೆ ತಿಂಗಳಿಂದ ನಡೆದಿದೆ ಅಂತ ಜ‌ನ ಹೇಳ್ತಿದ್ದಾರೆ. ಎಲ್ಲ ಅಧಿಕಾರಿಗಳನ್ನು ಕರೆದು ವಾರ್ನಿಂಗ್ ಮಾಡಿದ್ದೇನೆ. ಬೇಬಿ ಬೆಟ್ಟದ ತಲೆ‌ನೋವೇ ಬೇಡ ಅಂತ ಹೇಳಿದ್ದೇವೆ. ಅಲ್ಲಿ ಇರುವ ಎರಡು ಮೂರು ಗಣಿಗೆ ಬೇರೆ ಕಡೆ ಫ್ರಿ ಆಫ್ ಕಾಸ್ಟ್ ಅವಕಾಶ ಕೊಡಿ ಅಂತ ಡಿಸಿಯವರಿಗೆ ಹೇಳಿದ್ದೇನೆ. ಗಣಿಗಾರಿಕೆ ನಡೆಯಲೇಬೇಕು ಕಲ್ಲು ಜಲ್ಲಿ ಎಂ ಸ್ಯಾಂಡ್ ಬೇಕೇ ಬೇಕಾಗುತ್ತದೆ. ಅಧಿಕೃತವಾಗಿ ಅನುಮತಿ ಪಡೆದುಕೊಂಡವರು ಕ್ರಮಬದ್ದವಾಗಿ ನಡೆಸಲಿ. ಹಲವರು ರಾಯಲ್ಟಿ ಕಟ್ಟುತ್ತಿಲ್ಲ, ರಾಯಲ್ಟಿ ಸರಿಯಾಗಿ ಕಟ್ಟಿಕೊಂಡು ಹೋಗಬೇಕು ಎಂದು ಹೇಳಿದ್ದರು.

ನೂರು ಲಾರಿ ಜಲ್ಲಿ ಹೊಡೆದು ಐದು ಹತ್ತು ಲಾರಿಗೆ ರಾಯಲ್ಟಿ ಕಟ್ಟೋದು ತಪ್ಪು. ರಸ್ತೆಗಳು, ಪರಿಸರ ಹಾಳಾಗ್ತಿದೆ. ಎಸ್.ಪಿ ಮಟ್ಟದ ಅಧಿಕಾರಿಗಳಿಗೂ ಅಕ್ರಮ ಗಣಿ ನಡಿತಾ ಇದ್ರೆ ಕ್ರಮ ತೆಗೆದುಕೊಳ್ಳೋದಕ್ಕೆ ಹೇಳಿದ್ದೇವೆ. ಏನಾದ್ರೂ ಮುಂದೆ ಆ ರೀತಿ ಕಂಡು ಬಂದರೆ ನಾನೇ ಸೀಜ್ ಮಾಡಿಸ್ತೇನೆ. ಶಿವಮೊಗ್ಗ ಸ್ಪೋಟದ ತರಹ ಇಲ್ಲಿ ನಡೆದರೆ ನಮ್ಮ ಡ್ಯಾಂಗೆ ಎಫೆಕ್ಟ್ ಆಗತ್ತೆ ಎಂಬ ಭಯದ ವಾತಾವರಣ ಇದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬೇಡವೇ ಬೇಡ. ಟೋಟಲ್ ಆಗಿ ಬೇಬಿ ಬೆಟ್ಟದ ಗಣಿಗಾರಿಕೆ ಸ್ಟಾಪ್ ಆಗಬೇಕು. ಇಲ್ಲಿ ಯಾರದ್ದಾದ್ರೂ ಪಾತ್ರ ಇರಲಿ ಅದು ನಿಲ್ಲಬೇಕು. ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ. ಜೆಡಿಎಸ್​​ನವರು ಅಕ್ರಮ ಗಣಿಗಾರಿಕೆ ಸ್ಟಾಪ್ ಮಾಡಿ ಅಂದಿದ್ದಾರೆ. ಇದೇ ಮಾತನ್ನು ಜೆಡಿಎಸ್​ನವರು ಮುಂದುವರೆಸಿಕೊಂಡು ಹೋಗಬೇಕು. ಯಾವ ಕಾರಣಕ್ಕೂ ಈ ಮಾತಿನಿಂದ ಹಿಂದೆ ಸರಿಯಬಾರದು. ಡ್ಯಾಂ ಭಾಗದಲ್ಲಿ ಎಲ್ಲಿಯೂ ಗಣಿಗಾರಿಕೆ ನಡೆಯಲೇಬಾರದು. ಡ್ಯಾಂ ರಕ್ಷಣೆ‌ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದರು.

ಇದನ್ನೂ ಓದಿ: ಬೇಬಿ ಬೆಟ್ಟದಲ್ಲಿ ಎಲ್ಲ ಜನಪ್ರತಿನಿಧಿಗಳ ಎದುರು ನುರಿತ ವಿಜ್ಞಾನಿಗಳಿಂದ ಬ್ಲಾಸ್ಟಿಂಗ್ ಟೆಸ್ಟ್: ಗಣಿ ಸಚಿವ ಮುರುಗೇಶ್ ನಿರಾಣಿ ಘೋಷಣೆ 

ಬೇಬಿಬೆಟ್ಟದಲ್ಲಿ ಸಂಸದೆ ಸುಮಲತಾ ಪರಿಶೀಲನೆ: ಗಣಿಗಾರಿಕೆ ಪರ, ವಿರೋಧ ಘೋಷಣೆ ಕೂಗಿದ ಜನರು

(Gelatin Detonator found in Baby betta near Mandya)