ಮಂಡ್ಯ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ, ರಾಜಕೀಯ ಬಿಟ್ಟು ಒಟ್ಟಾಗಿ ಅಭಿವೃದ್ಧಿ ಮಾಡೋಣ: ಕಾಂಗ್ರೆಸ್​ಗೆ ಪುಟ್ಟರಾಜು ಟಾಂಗ್

| Updated By: ಆಯೇಷಾ ಬಾನು

Updated on: Jun 13, 2024 | 2:58 PM

ಮಂಡ್ಯದಲ್ಲಿ ಜೆಡಿಎಸ್​ ನಾಯಕರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಕೂಡ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಸರ್ಕಾರದ ವೈಫಲ್ಯ ಕಾರಣ. ಒಂದು ವರ್ಷ ಕುಮಾರಸ್ವಾಮಿ ತೇಜೋವಧೆ ಮಾಡೋಕೆ ಸರ್ಕಾರ ನಿಂತಿತ್ತು. ಇದಕ್ಕೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

ಮಂಡ್ಯ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ, ರಾಜಕೀಯ ಬಿಟ್ಟು ಒಟ್ಟಾಗಿ ಅಭಿವೃದ್ಧಿ ಮಾಡೋಣ: ಕಾಂಗ್ರೆಸ್​ಗೆ ಪುಟ್ಟರಾಜು ಟಾಂಗ್
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
Follow us on

ಮಂಡ್ಯ, ಜೂನ್.13: ಇಷ್ಟು ದಿನ ಕಿತ್ತಾಡಿದ್ದು ಸಾಕು. ಚುನಾವಣೆ (Lok Sabha Election) ಮುಗಿದಿದೆ. ಇವಾಗ ಯಾವುದೇ ಕಿತ್ತಾಟ ಬೇಡ. ಇನ್ಮೇಲೆ ಕಾಂಟ್ರವರ್ಸಿಯೂ ಬೇಡ. ಈಗ ಜಿಲ್ಲೆಯ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ. ರಾಜಕೀಯ ಬಿಟ್ಟು ಒಟ್ಟಾಗಿ ಅಭಿವೃದ್ಧಿ ಮಾಡೋಣ ಎಂದು ಪರೋಕ್ಷವಾಗಿ ಸಚಿವ ಚಲುವರಾಯಸ್ವಾಮಿ (N Chaluvarayaswamy) ಮತ್ತು ಕೈ ನಾಯಕರಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು (CS Puttaraju) ಟಾಂಗ್ ಕೊಟ್ಟಿದ್ದಾರೆ.

ಜೆಡಿಎಸ್​ ನಾಯಕರು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಹೆಚ್​ಡಿ ಕುಮಾರಸ್ವಾಮಿ ಮಂಡ್ಯಕ್ಕೆ ಬರುವ ಬಗ್ಗೆ ವಿಚಾರ ತಿಳಿಸಿದ್ದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಹೆಚ್​ಡಿ ಕುಮಾರಸ್ವಾಮಿಯವರು ಮೋದಿ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಜಿಲ್ಲೆಯ ಜನರು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ. ಭಾನುವಾರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕುಮಾರಣ್ಣ ಬರ್ತಿದ್ದಾರೆ. ಜಿಲ್ಲೆಯ ನಾಗರೀಕರಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದೇವೆ.

ಮಂಡ್ಯದ ಸ್ಟೇಡಿಯಂನಲ್ಲಿ ಜೂನ್ 16ರ ಸಂಜೆ 5 ಗಂಟೆಗೆ ಬೃಹತ್ ಅಭಿನಂದನಾ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಕುಮಾರಸ್ವಾಮಿಯವರು ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಜೊತೆ ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ಎರಡೂ ಪಕ್ಷದ ರಾಜ್ಯ ನಾಯಕರು ಕಾರ್ಯಕ್ರಮಕ್ಕೆ ಬರ್ತಾರೆ. ಸುಮಲತಾ ಸೇರಿ ಮೈತ್ರಿ ಪಕ್ಷದ ಎಲ್ಲ ನಾಯಕರನ್ನು ಕರೆಯುತ್ತೇವೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಕುಮಾರಸ್ವಾಮಿಯವರೇ ಜಿಲ್ಲೆ ಅಭಿವೃದ್ದಿಗೆ ಘೋಷಣೆ ಮಾಡ್ತಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಲಿದ್ದಾರೆ ಎಂದು ಸಿ.ಎಸ್.ಪುಟ್ಟರಾಜು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಾಬಾಬುಡನ್ ಗಿರಿ ಅರ್ಚಕರಿಗಿಲ್ಲ ಸಂಬಳ; ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಲು ಬಿಜೆಪಿ ಚಿಂತನೆ

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಂಡ್ಯಕ್ಕೆ ಹೊಸ ಇಂಡಸ್ಟ್ರಿ ಕೊಡ್ತಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡ್ತಾರೆ. ಸಕ್ಕರೆ ಕಾರ್ಖಾನೆ ಬಗ್ಗೆಯೂ ಕೂಡ ಮಾತನಾಡಲಾಗಿದೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬಹಳ ಉತ್ಸಾಹ ಕುಮಾರಣ್ಣ ಅವರಲ್ಲಿದೆ. ಮಂಡ್ಯ ಜನ ನ್ಯಾಯಯುತವಾದ ಮತದಾನ ಮಾಡಿದ್ದಾರೆ. ಜಿಲ್ಲಾ ಮಂತ್ರಿಗಳು ಇಷ್ಟು ದಿನ ದೊಡ್ಡ ತಪ್ಪು ಮಾಡಿದ್ದಾರೆ. ಇವಾಗಾದ್ರೂ ರೈತರಿಗೆ ನೀರು ಬಿಡಿ. ಕಂಟ್ರಾಕ್ಟರ್ ಒಬ್ಬರಿಗೆ ಅನುಕೂಲ ಮಾಡಲು ರೈತರಿಗೆ ನಾಲೆಗಳಿಗೆ ನೀರು ಬಿಟ್ಟಿಲ್ಲ‌. ತಕ್ಷಣವೇ ನಾಲೆಗೆ ನೀರು ಬಿಟ್ಟು ತಪ್ಪು ತಿದ್ದಿಕೊಳ್ಳಿ. ಮಾನವೀಯತೆ ದೃಷ್ಟಿಯಿಂದ ನೀರು ಬಿಡಿ. ಇದಕ್ಕೆ ನಿಮ್ಮನ್ನು ಜನರು ತಿರಸ್ಕರಿಸಿದ್ದಾರೆ. ಹಾಗಾಗಿ ನೀರು ಬಿಟ್ಟು, ರೈತರನ್ನ ಉಳಿಸಿ. ಕಾಂಗ್ರೆಸ್ ಸೋಲಿಗೆ ಸರ್ಕಾರದ ವೈಫಲ್ಯ ಕಾರಣ. ಒಂದು ವರ್ಷ ಕುಮಾರಸ್ವಾಮಿ ತೇಜೋವಧೆ ಮಾಡೋಕೆ ಸರ್ಕಾರ ನಿಂತಿತ್ತು. ಇದಕ್ಕೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ. ಇನ್ನಾದ್ರೂ ಅದನ್ನೆಲ್ಲ ಬಿಟ್ಟು ಜಿಲ್ಲೆಯ ಅಭಿವೃದ್ಧಿಯತ್ತ ಗಮನಕೊಡಿ ಎಂದು ಕಾಂಗ್ರೆಸ್​ಗೆ ರವೀಂದ್ರ ಶ್ರೀಕಂಠಯ್ಯ ಬುದ್ಧಿ ಪಾಠ ಮಾಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:57 pm, Thu, 13 June 24