ಮಂಡ್ಯ ನಗರಸಭೆ ಚುನಾವಣೆ: ಕಾಂಗ್ರೆಸ್ ಸದಸ್ಯನ ಬೆಂಬಲದಿಂದ ಜೆಡಿಎಸ್​ಗೆ ಗೆಲವು

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿದ್ದ ಮಂಡ್ಯ ನಗರಸಭೆ ಚುನಾಣೆಯ ಫಲಿತಾಂಶ ಹೊರಬಿದ್ದಿದೆ. ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವೆಣೆಯಲ್ಲಿ ಜೆಡಿಎಸ್​ಗೆ ಗೆಲುವಾಗಿದೆ. ಈ ಮೂಲಕ ಬದ್ಧ ವೈರಿಯಾಗಿರುವ ಕಾಂಗ್ರೆಸ್​ ಜೆಡಿಎಸ್​ ಮುಂದೆ ಮಣಿದಿದೆ.

ಮಂಡ್ಯ ನಗರಸಭೆ ಚುನಾವಣೆ: ಕಾಂಗ್ರೆಸ್ ಸದಸ್ಯನ ಬೆಂಬಲದಿಂದ ಜೆಡಿಎಸ್​ಗೆ ಗೆಲವು
ಮಂಡ್ಯ ನಗರಸಭೆ ಕಾರ್ಯಾಲಯ
Follow us
| Updated By: ವಿವೇಕ ಬಿರಾದಾರ

Updated on:Aug 28, 2024 | 2:43 PM

ಮಂಡ್ಯ, ಆಗಸ್ಟ್​ 28: ಲೋಕಸಭೆ ಚುನಾವಣೆ ಬಳಿಕ ಮಂಡ್ಯ ನಗರಸಭೆ (Mandya Municipal Council) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರತಿಷ್ಠೆಯ ಕಣವಾಯ್ತು. ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ (JDS)​ ಗೆಲವು ಸಾಧಿಸಿದೆ. ನಗರಸಭೆ ಆವರಣದ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಿಸಿದರು. ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್​ನ ನಾಗೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.

ಮಂಡ್ಯ ನಗರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಇಂದು (ಆ.28) ನಡೆಯಿತು. ಜೆಡಿಎಸ್​ನ 15 ಸದಸ್ಯರ, ಬಿಜೆಪಿಯ ಇಬ್ಬರು, ಕಾಂಗ್ರೆಸ್​ನ ಒಬ್ಬ ಮತ್ತು ಸಂಸದ ಹೆಚ್​ಡಿ ಕುಮಾರಸ್ವಾಮಿ ಅವರ ಮತ ಸೇರಿ 19 ಮತಗಳು ಜೆಡಿಎಸ್​​ಗೆ ಬಂದಿವೆ. 35 ಸದಸ್ಯರ ಬಲ ಹೊಂದಿರುವ ಮಂಡ್ಯ ನಗರಸಭೆಯಲ್ಲಿ ಒಟ್ಟು 18 ಜನ ಜೆಡಿಎಸ್‌ ಸದಸ್ಯರಿದ್ದಾರೆ. ಬಿಜೆಪಿಯ ಇಬ್ಬರು, ಕಾಂಗ್ರೆಸ್‌ನ 10 ಮತ್ತು ಪಕ್ಷೇತರ 5 ಸದಸ್ಯರಿದ್ದಾರೆ. ಕಾಂಗ್ರೆಸ್​ನ 9 ಸದಸ್ಯರ, ಪಕ್ಷೇತರ 5, ಜೆಡಿಎಸ್‌ನ 3 ಮತ್ತು ಶಾಸಕ ಗಣಿಗ ರವಿಯ ಮತ ಸೇರಿ ಕಾಂಗ್ರೆಸ್​ಗೆ ಒಟ್ಟು 18 ಮತಗಳು ಬಂದಿವೆ.

ಜೆಡಿಎಸ್​ ರಾಜ್ಯ ಯುವ ಘಟಕ ನಾಯಕ ನಿಖಿಲ್​ ಕುಮಾರಸ್ವಾಮಿ ಮಾತನಾಡಿ, ಮಂಡ್ಯದ ನಗರಸಭೆ ಗದ್ದುಗೆಯನ್ನು ಜೆಡಿಎಸ್‌-ಬಿಜೆಪಿ ಹಿಡಿದಿದೆ. 37 ಮತದಾರಲ್ಲಿ 19 ಮಂದಿ ನಮಗೆ ಮತ ಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ನಾವು ಆ ಸವಾಲು ಸ್ವೀಕಾರ ಮಾಡಿದ್ವಿ. ನಮ್ಮ‌ ಸದಸ್ಯರು ಆಮಿಷಕ್ಕೆ ಒಳಗಾಗಲಿಲ್ಲ. ರಾಜಕೀಯ ಅಂದರೆ ಆಮಿಷ ಎಲ್ಲ ಸಹಜ. ಅಂತಿಮವಾಗಿ ನಂಬರ್ ಮುಖ್ಯ. ನಾವು ಆ ನಂಬರ್‌ನ್ನು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಎನ್‌ಡಿಎ ಗೆಲ್ಲುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಗಲಾಟೆ, ನಗರಸಭೆ ಕಚೇರಿ ಎದುರು ಹೈಡ್ರಾಮಾ

ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು ಎಂಬ ಶಾಸಕ ಗಣಿಗ ರವಿ ಹೇಳಿಕೆಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯೂ ಕಣ್ಣು, ಕೈ ಸನ್ನೇ ಮೂಲಕ ಹಣದ ಆಮೀಷ ಒಡ್ಡಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಬೇಕಾಯ್ತು. ಕ್ಯಾಬಿನೆಟ್ ಸಭೆ ಬಿಟ್ಟು ಪ್ರಧಾನಿಮಂತ್ರಿ ಅವರ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ನಿಸ್ಸೀಮವಾಗಿದೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:27 pm, Wed, 28 August 24