
ಮಂಡ್ಯ, ಸೆ.1: ಸೋಷಿಯಲ್ ಮೀಡಿಯಾದಲ್ಲಿ ಸಮಾಜಸೇವಕನಂತೆ ಪೋಸ್ ನೀಡುತ್ತಾ, ಹಿಂಬಾಲಕರೊಂದಿಗೆ ಓಡಾಡಿಕೊಂಡು ‘ಬಿಲ್ಡಪ್’ ನೀಡುತ್ತಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರ (PDO) ಅಸಲಿ ಬಣ್ಣ ಬಯಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಕೋಟ್ಯಾಂತರ ರೂಪಾಯಿ ಸರ್ಕಾರಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆತಗೂರು ಗ್ರಾ.ಪಂ. ಪಿಡಿಒ ಶಶಿಧರ್ ಅವರನ್ನು ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್. ನಂದಿನಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಆತಗೂರು ಹಾಗೂ ತಗ್ಗಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 15ನೇ ಹಣಕಾಸು ಯೋಜನೆಯ ಬರೋಬ್ಬರಿ 1.5 ಕೋಟಿ ರೂ.ಗೂ ಅಧಿಕ ಹಣವನ್ನು ಪಿಡಿಒ ಶಶಿಧರ್ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿತ್ತು. ಸಲ್ಲಿಕೆಯಾಗಿದ್ದ ದೂರಿನ ಅನ್ವಯ ಮಂಡ್ಯ ಜಿ.ಪಂ ಸಿಇಓ ಕೆ.ಆರ್. ನಂದಿನಿ ಅವರು ವಿಶೇಷ ತನಿಖಾ ತಂಡ ರಚಿಸಿದ್ದರು. ಈ ತಂಡವು ಡಿ.ಸಿ. ಬಿಲ್ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಾಲು ಸಾಲು ಲೋಪಗಳು ಹಾಗೂ ಹಣ ಲೂಟಿಯಾಗಿರುವುದು ಸಾಕ್ಷಿ ಸಮೇತ ಪತ್ತೆಯಾಗಿದೆ.
ತನಿಖಾ ವರದಿ ಕೈಸೇರುತ್ತಿದ್ದಂತೆ ಆಕ್ಷನ್ನಲ್ಲಿ ಇಳಿದ ಸಿಇಓ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಶಿಧರ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಪಿಡಿಒ ಶಶಿಧರ್ಗೆ ಇದು ಮೊದಲೇನಲ್ಲ. ಈ ಹಿಂದೆ ಹಲಗೂರು ಗ್ರಾಮ ಪಂಚಾಯತಿ ಪಿಡಿಒ ಆಗಿದ್ದ ಸಂದರ್ಭದಲ್ಲೂ ಇದೇ ರೀತಿ ಸರ್ಕಾರಿ ಹಣ ಲಪಟಾಯಿಸಿ ಸೇವೆಯಿಂದ ಸಸ್ಪೆಂಡ್ ಆಗಿದ್ದ. ಹಳೆ ಚಾಳಿಯನ್ನು ಮುಂದುವರಿಸಿ ಮತ್ತೆ ಅದೇ ಕಳ್ಳಾಟವಾಡಿ ಇದೀಗ ಎರಡನೇ ಬಾರಿಗೆ ಅಮಾನತಿನ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: ವಿಕಲಚೇತನರ ಪಿಂಚಣಿಗೆ ಲಂಚ ಪಡೆದಿದ್ದ ಉಪ ತಹಶೀಲ್ದಾರ್ಗೆ 4 ವರ್ಷ ಜೈಲು, 40 ಸಾವಿರ ರೂ. ದಂಡ
ಸಾಮಾನ್ಯ ಪಿಡಿಒ ಆಗಿದ್ದುಕೊಂಡು ಲಕ್ಷ ಲಕ್ಷ ಖರ್ಚು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಲ್ಡಪ್ ಕೊಡುವ ಹಾಗೂ ಸಮಾಜಸೇವೆ ಹೆಸರಿನಲ್ಲಿ ಶೋಕಿ ಮಾಡುವ ಹಣ ಎಲ್ಲಿಂದ ಬಂತು? ಹಳ್ಳಿಗಳ ಅಭಿವೃದ್ಧಿಗೆ ಬರಬೇಕಿದ್ದ ಸರ್ಕಾರಿ ಹಣವನ್ನೇ ಲಪಟಾಯಿಸಿ ಈತ ‘ಹೀರೋ’ ಆಗುತ್ತಿದ್ದನಾ ಎಂದು ಸ್ಥಳೀಯರು ಹಾಗೂ ದೂರುದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಇಓ ಕ್ರಮವನ್ನು ಸ್ವಾಗತಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ