AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಮಹಿಳೆ ಮೇಲೆ​ ಹಲ್ಲೆ; ಪಿಎಸ್ಐ ಅಮಾನತು

ಆಕೆ ನಗರ ಪ್ರದೇಶದಲ್ಲಿ ಹಸುಗಳನ್ನ ಸಾಕಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಆದರೆ, ಆ ಹಸುಗಳು ರಸ್ತೆಗೆ ಬಂದು ಆಗಾಗ ಸಾರ್ವಜನಿಕರಿಗೆ ತೊಂದರೆ ಕೊಡುತ್ತವೆ ಎಂದು ಆ ಮಹಿಳೆಯ ಮೇಲೆ ಪಿಎಸ್​ಐ ಒಬ್ಬ ದರ್ಪ ಮೆರೆದಿದ್ದು, ಆ ಮಹಿಳೆಯನ್ನ ಠಾಣೆಗೆ ಕರೆತಂದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಇದೀಗ ಪಿಎಸ್​ಐನ್ನು ಮಂಡ್ಯ ಎಸ್​ಪಿ ಯತೀಶ್ ಅಮಾನತು ಮಾಡಿ ಆದೇಶಿಸಿದ್ದಾರೆ.

ಮಂಡ್ಯ: ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಮಹಿಳೆ ಮೇಲೆ​ ಹಲ್ಲೆ; ಪಿಎಸ್ಐ ಅಮಾನತು
ಸಂತ್ರಸ್ಥ ಮಹಿಳೆ, ಅಮಾನತುಗೊಂಡ ಪಿಎಸ್​ಐ
ಪ್ರಶಾಂತ್​ ಬಿ.
| Edited By: |

Updated on: Feb 14, 2024 | 8:03 PM

Share

ಮಂಡ್ಯ, ಫೆ.14: ವಿಚಾರಣೆ ನೆಪದಲ್ಲಿ ಮಹಿಳೆಯೊಬ್ಬಳ ಮೇಲೆ ಮಂಡ್ಯದ ಪೂರ್ವ ಠಾಣೆ ಪಿಎಸ್​ಐ(PSI) ಅಯ್ಯನಗೌಡ ಎಂಬುವವರು ದರ್ಪ ಮೆರೆದಿದ್ದು, ಮಂಡ್ಯದ(Mandya) ಅಶೋಕ್ ನಗರ ನಿವಾಸಿ ರೂಪದೇವಿ ಎಂಬಾಕೆಯ ಮೇಲೆ ಪೊಲೀಸ್​ ಠಾಣೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆ ಪಿಎಸ್ಐ ವಿರುದ್ದ ಮಹಿಳೆಯ ತಾಯಿ ಗೌರಮ್ಮ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಪಿಎಸ್​ಐರನ್ನ ಅಮಾನತು ಮಾಡಿ ಮಂಡ್ಯ ಎಸ್​ಪಿ ಯತೀಶ್ ಆದೇಶ ಮಾಡಿದ್ದಾರೆ.

ಏನಿದು ಪ್ರಕರಣ?

ಸಂತ್ರಸ್ಥ ಮಹಿಳೆ ರೂಪದೇವಿ ಅವರು ತನ್ನ ಕುಟುಂಬಸ್ಥರ ಜೊತೆ ಮಂಡ್ಯದ ಅಶೋಕ್ ನಗರದಲ್ಲಿ ವಾಸವಿದ್ದು, ನಗರ ಪ್ರದೇಶದಲ್ಲೇ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ, ರಸ್ತೆಯಲ್ಲಿ ಹಸುಗಳನ್ನ ಬಿಡುತ್ತಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಏಕಾಏಕಿ ಜೀಪ್​ನಲ್ಲಿ ಬಂದ್ದಿದ್ದ ಮಂಡ್ಯದ ಪೂರ್ವ ಠಾಣೆ ಪಿಎಸ್​ಐ ಅಯ್ಯನಗೌಡ, ಯಾವುದೇ ಮಹಿಳೆ ಪೇದೆ ಇಲ್ಲದೇ ಜೀಪ್​ನಲ್ಲಿಯೇ ರೂಪದೇವಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ಠಾಣೆಯಲ್ಲಿಯೇ ಹಲ್ಲೆ ಮಾಡಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಕೆಲ ಸಂಘಟನೆ ಕಾರ್ಯಕರ್ತರು ಠಾಣೆಯ ಬಳಿ ಹೋಗಿ ಪಿಎಸ್ ಐ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮಹಿಳೆಯನ್ನ ವಾಪಾಸ್ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಮಂಡ್ಯದಲ್ಲಿ ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ PSI ಹಲ್ಲೆ; ಮಹಿಳೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಅಂದಹಾಗೆ ಹಸುಗಳನ್ನ ರಸ್ತೆಗೆ ಕಟ್ಟುತ್ತಾರೆ ಎಂಬ ದೂರು ಒಂದು ಕಡೆಯಾದರೇ, ಅದೇ ಪೂರ್ವ ಠಾಣೆಯ ಮಹಿಳೆ ಪೇದೆಯೊಬ್ಬರು ಹಸುಗೆ ಸಿಲುಕಿ ಗಾಡಿಯಿಂದ ಬಿದ್ದಿದ್ದರು. ಈ ವಿಚಾರವಾಗಿ ಮಹಿಳೆಯ ಬಳಿ ಪರಿಹಾರ ಹಣವನ್ನ ಮಹಿಳೆ ಪೇದೆ ಕೂಡ ಕೇಳಿದ್ದರು. ಆ ಪರಿಹಾರ ಹಣವನ್ನ ಕೂಡ ಕೊಟ್ಟಿರಲಿಲ್ಲ. ಈ ವಿಚಾರವಾಗಿಯೂ ಕೂಡ ಮಹಿಳೆಯ ಮೇಲೆ ಪಿಎಸ್​ಐ ಗೆ ಕೋಪ ಇತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಮಹಿಳೆಯನ್ನ ಠಾಣೆಗೆ ಕರೆತಂದು ಹಲ್ಲೆ ಮಾಡಿದ್ದಾರೆ. ಇದರಿಂದಲೇ ಮಹಿಳೆಯ ತಾಯಿ ಠಾಣೆಗೆ ದೂರು ನೀಡಿದ್ದರು. ಇದರ ಪರಿಣಾಮ ಪಿಎಸ್​ಐ ರನ್ನ ಅಮಾನತು ಮಾಡಿ ಮಂಡ್ಯ ಎಸ್ ಪಿ ಆದೇಶಿಸಿದ್ದಾರೆ.

ದರ್ಪ ಖಂಡಿಸಿ ವಿವಿಧ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

ಇನ್ನು ಪಿಎಸ್​ಐ ದರ್ಪ ಖಂಡಿಸಿ ವಿವಿಧ ಸಂಘಟನೆ ಕಾರ್ಯಕರ್ತರು ಪೂರ್ವ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಒಟ್ಟಾರೆ ಅಧಿಕಾರಿ ಬಳಸಿಕೊಂಡು ಒಂಟಿಯಾಗಿ ಮಹಿಳೆಯನ್ನ ಕರೆದುಕೊಂಡು ಬಂದು ಪಿಎಸ್​ಐ ಹಲ್ಲೆ ಮಾಡುವ ಮೂಲಕ ದರ್ಪ ಮೆರೆದಿದ್ದು, ಇದೀಗ ಪಿಎಸ್ಐ ವಿರುದ್ದ ಮಂಡ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ