Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನ ಹಗರಣದಲ್ಲಿ ಮನ್​​ಮುಲ್ ಆಡಳಿತ ಮಂಡಳಿಯೇ ಪಾಲುದಾರರೆಂಬ ಶಂಕೆ; ತನಿಖೆ ನಡೆಸುವಂತೆ ಜನರ ಆಗ್ರಹ

ಆಡಳಿತ ಮಂಡಳಿಯವರ ಗಮನಕ್ಕೆ ಬಾರದೆ ಇಷ್ಟೊಂದು ಪ್ರಮಾಣದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎನ್ನುತ್ತಿರುವ ಜನರು ಕೂಡಲೇ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ಹಗರಣ ಕುರಿತು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.

ಹಾಲಿನ ಹಗರಣದಲ್ಲಿ ಮನ್​​ಮುಲ್ ಆಡಳಿತ ಮಂಡಳಿಯೇ ಪಾಲುದಾರರೆಂಬ ಶಂಕೆ; ತನಿಖೆ ನಡೆಸುವಂತೆ ಜನರ ಆಗ್ರಹ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jun 11, 2021 | 12:56 PM

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಲ್ಲಿ ಬೆಳಕಿಗೆ ಬಂದಿದ್ದ ನೀರು ಮಿಶ್ರಿತ ಹಾಲು ಸರಬರಾಜು ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳಲಾರಂಭಿಸಿದೆ. ಹಗರಣ ಬೆಳಕಿಗೆ ಬಂದು 10 ದಿನಗಳೇ ಕಳೆದರೂ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಇನ್ನೊಂದೆಡೆ ಈ ಹಗರಣದಲ್ಲಿ ಮನ್​​ಮುಲ್ ಆಡಳಿತ ಮಂಡಳಿಯೇ ಪಾಲುದಾರರಾಗಿದ್ದಾರಾ ಎನ್ನುವ ಅನುಮಾನವೂ ಮೂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಮನ್​ಮುಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಹಕಾರ ಇಲಾಖೆ ಸಚಿವ ಎಸ್. ಟಿ. ಸೋಮಶೇಖರ್ ಹಗರಣ ಕುರಿತಂತೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆದುಕೊಂಡಿದ್ದು, ಹಗರಣ ಕುರಿತು ಪೊಲೀಸರ ತನಿಖೆಯ ಬಗೆಗೆ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಈಗ ಎಲ್ಲರ ಕೇಂದ್ರ ಬಿಂದುವಾಗಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿಯ ಈ ಹಾಲು ಒಕ್ಕೂಟದಲ್ಲಿ ಸದ್ಯ ಜೆಡಿಎಸ್ ಆಡಳಿತ ಮಂಡಳಿ ಅಧಿಕಾರ ನಡೆಸುತ್ತಿದ್ದು, ದಿನವೊಂದಕ್ಕೆ 9.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿರುವ ಮನ್​ಮುನ್​ನಲ್ಲಿ ಕಳೆದ ತಿಂಗಳ ಕೊನೆಯವಾರದಲ್ಲಿ ಹಳ್ಳಿಗಳಿಂದ ಹಾಲು ತುಂಬಿಕೊಂಡು ಬರುವ ಟ್ಯಾಂಕರ್​ಗಳಲ್ಲೇ ಅಪಾರ ಪ್ರಮಾಣದ ನೀರು ಮಿಶ್ರಣ ಮಾಡಿ ಜಿಲ್ಲಾ ಹಾಲು ಒಕ್ಕೂಟಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಸಂಬಂಧ 6 ಜನ ಅಧಿಕಾರಿಗಳನ್ನು ಅಮಾನತ್ತು ಪಡಿಸಿದ್ದನ್ನು ಹೊರತು ಪಡಿಸಿದರೆ ಪೊಲೀಸರ ತನಿಖೆಯಲ್ಲಿ ಯಾವುದೇ ರೀತಿಯ ಪ್ರಗತಿ ಕಂಡು ಬಂದಿಲ್ಲ. ಹೀಗಾಗಿಯೇ ಇದೊಂದು ಬಾರೀ ಪ್ರಮಾಣದ ಹಗರಣವಾಗಿದ್ದು, ಈಗ ಆಡಳಿತ ನಡೆಸುತ್ತಿರುವ ಆಡಳಿತ ಮಂಡಳಿಯವರ ಗಮನಕ್ಕೆ ಬಾರದೆ ಇಷ್ಟೊಂದು ಪ್ರಮಾಣದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎನ್ನುತ್ತಿರುವ ಜನರು ಕೂಡಲೇ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ಹಗರಣ ಕುರಿತು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.

ಅಂದು ಘಟನೆ ನಡೆದ ಸಂರ್ಭದಲ್ಲಿ ಚೆನ್ನಪಟ್ಟಣ ಮೂಲದ ಒಬ್ಬ ಗುತ್ತಿಗೆದಾರರ ರಾಜು ಎಂಬಾತನ ವಿರುದ್ಧ ದೂರು ನೀಡಲಾಗಿತ್ತು. ಅದನ್ನು ಹೊರತು ಪಡಿಸಿದರೆ ತನಿಖೆ ಕುರಿತು ಯಾವುದೇ ಪ್ರಗತಿಯಾಗಿಲ್ಲ. ಹಗರಣದ ಬಗೆಗೆ ಮಾಹಿತಿ ಪಡೆದುಕೊಳ್ಳಲು ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದ ಸಹಕಾರ ಸಚಿವ ಸೋಮಶೇಖರ್ ಪ್ರಕರಣ ದಾಖಲಿಸಿಕೊಂಡು ಹಾಲಿನ ಟ್ಯಾಂಕರ್​ಗಳನ್ನು ವಶಕ್ಕೆ ಪಡೆದುಕೊಂಡಿರುವ ಮದ್ದೂರು ಪೊಲೀಸ್ ಠಾಣೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಸೋಮಶೇಖರ್​ಗೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ಮತ್ತು ಮನ್​ಮುಲ್​ನ ಅಧಿಕಾರಿಗಳು ಟ್ಯಾಂಕರ್​ಗಳಲ್ಲಿ ನೀರನ್ನು ಹೇಗೆ ಮಿಶ್ರಣ ಮಾಡುತ್ತಿದ್ದರು ಎಂಬ ಬಗೆಗೆ ಮಾಹಿತಿ ನೀಡಿದರು. ಇದೇ ವೇಳೆ ಸ್ಥಳದಲ್ಲೇ ಇದ್ದ ಮಂಡ್ಯ ಎಎಸ್​ಪಿ ಧನಂಜಯ ಅವರನ್ನು ಕುರಿತು ಪ್ರಶ್ನಿಸಿದ ಸಚಿವ ಸೋಮಶೇಖರ್ ಪ್ರಕರಣ ಸಂಬಂಧ ಯಾರನ್ನು ಬಂಧಿಸಿದ್ದೀರಿ, ಟ್ಯಾಂಕರ್​ಗೆ ಎಲ್ಲಿ ಮತ್ತು ಯಾವ ವರ್ಕ್ ಶಾಪ್​ಗಳಲ್ಲಿ ನೀರು ಮಿಶ್ರಣ ಮಾಡುವುದಕ್ಕಾಗಿ ವಿನ್ಯಾಸಗೊಳಿಸುವ ಕೆಲಸ ಮಾಡಲಾಗುತ್ತಿತ್ತು ಎಂದು ಕೇಳಿದ್ದಾರೆ.

ಸೋಮಶೇಖರ್​ ಪ್ರಶ್ನೆಗೆ ಉತ್ತರಿಸಿದ ಎಎಸ್​ಪಿ ಧನಂಜಯ ಇಲ್ಲ ಸರ್. ಅದು ಎಲ್ಲಿ ಎಂದು ಗೊತ್ತಾಗಿಲ್ಲ. ಒಬ್ಬ ಚಾಲಕನನ್ನಷ್ಟೇ ಬಂಧಿಸಲಾಗಿದೆ ಎಂದರು. ವರ್ಕ್ ಶಾಪ್ ಪತ್ತೆ ಹಚ್ಚಿ ಈ ವೇಳೆಗೆ ಬಂಧಿಸಬೇಕಿತ್ತು ಎಂದು ಹೇಳಿ ಪೊಲೀಸರ ತನಿಖೆಯ ಬಗೆಗೆ ಸಚಿವ ಸೋಮಶೇಖರ್ ಅಸಮಾದಾನ ಹೊರ ಹಾಕಿದರು. ಈ ವೇಳೆ ಮಾತನಾಡಿದ ಸೋಮಶೇಖರ್ ಹಗರಣ ಸಂಬಂಧ ಇಲಾಖೆಯ ವತಿಯಿಂದಲೂ ತನಿಖೆ ನಡೆಸಲಾಗುತ್ತಿದ್ದು, ವರದಿ ಕೈ ಸೇರಿದ ಕೂಡಲೇ ಯಾವ ರೀತಿಯ ತನಿಖೆ ನಡೆಸಬೇಕೆಂಬ ಬಗೆಗೆ ಮುಖ್ಯಮಂತ್ರಿ ನಿರ್ಧಾರಿಸುತ್ತಾರೆ. ಹಗರಣದಲ್ಲಿ ಆಡಳಿತ ಮಂಡಳಿಯ ಕೈವಾಡ ಇದ್ದರೆ ಸೂಪಡ್ ಸೀಡ್ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಹಗರಣವಾಗಿರುವ ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರ ಕೈವಾಡ ಇರುವುದರಿಂದ ಸರ್ಕಾರ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕೆಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ. ಆದರೆ, ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:

ಮನ್ಮುಲ್​ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ; 6 ಅಧಿಕಾರಿಗಳು ಅಮಾನತು

ಚಿಕ್ಕಮಗಳೂರು: ರೈತರಿಂದ ಹಾಲು ಖರೀದಿಸಲು ಡೇರಿ ಸಿಬ್ಬಂದಿ ನಿರಾಕರಣೆ; ಕಂಗಾಲಾಗಿರುವ ರೈತರು