AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತ ವಿಚಾರಣೆಗೆ ಖಾಸಗಿ ಕಾರಿನಲ್ಲೇ ಸಿಎಂ ಸಿದ್ದರಾಮಯ್ಯ ತೆರಳಲು ಇದುವೇ ಕಾರಣ!

ಮುಡಾ ಹಗರಣದ ವಿಚಾರಣೆಗಾಗಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳುವಾಗ ಸರ್ಕಾರಿ ಕಾರು, ಬೆಂಗಾವಲು ಪಡೆ ವಾಹನಗಳನ್ನು ಬಳಸಿಲ್ಲ. ವಕೀಲ ಪೊನ್ನಣ್ಣ ಅವರ ಸಾಥ್ ಮಾತ್ರ ಪಡೆದಿದ್ದಾರೆ. ಸಿಎಂ ಈ ನಡೆಯ ಹಿಂದೆ ಪ್ರಬಲವಾದ ಕಾರಣವೊಂದಿದೆ. ಅದೇನೆಂಬ ಮಾಹಿತಿ ಇಲ್ಲಿದೆ.

ಲೋಕಾಯುಕ್ತ ವಿಚಾರಣೆಗೆ ಖಾಸಗಿ ಕಾರಿನಲ್ಲೇ ಸಿಎಂ ಸಿದ್ದರಾಮಯ್ಯ ತೆರಳಲು ಇದುವೇ ಕಾರಣ!
ಲೋಕಾಯುಕ್ತ ವಿಚಾರಣೆಗೆ ಖಾಸಗಿ ಕಾರಿನಲ್ಲೇ ತೆರಳಿದ ಸಿಎಂ ಸಿದ್ದರಾಮಯ್ಯ
Pramod Shastri G
| Edited By: |

Updated on: Nov 06, 2024 | 12:04 PM

Share

ಬೆಂಗಳೂರು, ನವೆಂಬರ್ 6: ಮುಡಾ ಹಗರಣದಲ್ಲಿ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ಬುಧವಾರ ವಿಚಾರಣೆಗೆ ಹಾಜರಾದರು. ವಿಚಾರಣೆಗೆ ತೆರಳುವಾಗ ಅವರು ಖಾಸಗಿ ಕಾರಿನಲ್ಲೇ ಪ್ರಯಾಣಿಸಿದ್ದಾರೆ. ಅಲ್ಲದೆ, ಯಾವುದೇ ಸರ್ಕಾರಿ ಸವಲತ್ತುಗಳನ್ನು ಬಳಸಿಲ್ಲ. ಮುಖ್ಯಮಂತ್ರಿಯ ರೀತಿಯಲ್ಲಿ ತೆರಳುವ ಬದಲು, ಸಾಮಾನ್ಯರಂತೆ ವಿಚಾರಣೆಗೆ ತೆರಳಿದ್ದಾರೆ. ಸಿದ್ದರಾಮಯ್ಯರ ಈ ನಡೆಗೆ ಬಲವಾದ ಕಾರಣ ಇದೆಯಂತೆ!

ಅಂದಹಾಗೆ, ಸರ್ಕಾರಿ ಕಾರು ಮತ್ತು ಬೆಂಗಾವಲು ಪಡೆಯೊಂದಿಗೇ ವಿಚಾರಣೆಗೆ ತೆರಳಲು ಮೊದಲಿಗೆ ಸಿದ್ದರಾಮಯ್ಯ ಚಿಂತನೆ ನಡೆಸಿದ್ದರಂತೆ. ಆದರೆ, ಮಂಗಳವಾರ ಕಾನೂನು ಸಲಹೆಗಾರರು ಹಾಗೂ ಪ್ರಮುಖರ ಜತೆ ಸಭೆ ನಡೆಸಿದ ನಂತರ ನಿಲುವು ಬದಲಾಯಿಸಿದ್ದಾರೆ.

ಸಿದ್ದರಾಮಯ್ಯ ಆಪ್ತ ಬಳಗದಿಂದ ಸಲಹೆ

ಸರ್ಕಾರಿ ಕಾರಿನಲ್ಲಿ, ಬೆಂಗಾವಲು ವಾಹನದ ಜತೆ ತೆರಳಲು ಸಜ್ಜಾಗಿದ್ದ ಸಿದ್ದರಾಮಯ್ಯಗೆ ಖಾಸಗಿ ವಾಹನದಲ್ಲಿ ತೆರಳುವಂತೆ ಅವರ ಆಪ್ತ ವಲಯದವರು ಸಲಹೆ ನೀಡಿದ್ದರು. ಯಾವುದೇ ಸರ್ಕಾರಿ ಸವಲತ್ತು ಬಳಸದೇ ತೆರಳುವಂತೆ ಸಲಹೆ ನೀಡಿದ್ದರು. ಸರ್ಕಾರಿ ಸೌಕರ್ಯವಷ್ಟೇ ಅಲ್ಲದೇ, ಸಿಬ್ಬಂದಿಯನ್ನೂ ಜತೆಗೆ ಕರೆದೊಯ್ಯದಂತೆ ಸಲಹೆ ನೀಡಿದ್ದರು.

ಸಿದ್ದರಾಮಯ್ಯ ನಡೆಗೆ ಕಾರಣವೇನು?

ಮುಡಾ ಹಗರಣ ಸಬಂಧ ಲೋಕಾಯುಕ್ತ ತನಿಖೆಯ ಪ್ರಾಮಾಣಿಕತೆ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆ ಮಾಡಿವೆ. ತನಿಖೆ ಮೇಲೆ ಸರ್ಕಾರ ಪ್ರಭಾವ ಬೀರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರಿ ವಾಹನ, ಬೆಂಗಾವಲು ಪಡೆಯೊಂದಿಗೆ ವಿಚಾರಣೆಗೆ ತೆರಳಿದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರಿ ಯಂತ್ರದ ಬಳಕೆ ಮೂಲಕ ಒತ್ತಡ ಎಂಬ ವಿಪಕ್ಷಗಳ ಆರೋಪ ತಣ್ಣಗಾಗಿಸಲು ಸಿದ್ದರಾಮಯ್ಯ ಆಪ್ತರು ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮುಡಾ ಹಗರಣ ವಿಚಾರಣೆ: ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಪ್ರಶ್ನೆಗಳ ವಿವರ ಇಲ್ಲಿದೆ

ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ವಾದ ಮಂಡನೆ ವೇಳೆಯೂ ಈ ನಡೆ ಸಹಕಾರಿಯಾಗಲಿದೆ ಎಂಬುದು ಸಿದ್ದರಾಮಯ್ಯ ಆಪ್ತರ, ಕಾನೂನು ಸಲಹೆಗಾರರ ಅಭಿಪ್ರಾಯ. ಹೀಗಾಗಿ ಯಾವುದೇ ಸವಲತ್ತುಗಳಿಲ್ಲದೇ ಸಿಎಂ ವಿಚಾರಣೆಗೆ ತೆರಳಿದ್ದಾರೆ. ಅವರಿಗೆ ವಕೀಲ ಪೊನ್ನಣ್ಣ ಮಾತ್ರ ಸಾಥ್ ನೀಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ