ಮಳೆ ಬಾರದಿದ್ದರೂ ನೀರಿಗೆ ಸಮಸ್ಯೆ ಆಗಬಾರದು, ಬೆಳೆ ಒಣಗದಂತೆ ಕ್ರಮಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ

|

Updated on: Jun 10, 2023 | 7:10 PM

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ. ಮಳೆ ಬರುವವರೆಗೆ ಕುಡಿಯುವ ನೀರು ಹಾಗೂ ಬೆಳೆ ಒಣಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಮಳೆ ಬಾರದಿದ್ದರೂ ನೀರಿಗೆ ಸಮಸ್ಯೆ ಆಗಬಾರದು, ಬೆಳೆ ಒಣಗದಂತೆ ಕ್ರಮಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ
ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಲು ಮೈಸೂರು ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Image Credit source: PTI
Follow us on

ಮೈಸೂರು: ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ. ಮಳೆ ಬರುವವರೆಗೆ ಕುಡಿಯುವ ನೀರು ಹಾಗೂ ಬೆಳೆ ಒಣಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚಿಸಿದ್ದಾರೆ. ಮೈಸೂರಿನ (Mysuru) ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಈ ಸೂಚನೆ ನೀಡಿದರು.

ಮೈಸೂರು ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ, 20 ದಿನ ಮಳೆ ಬಾರದಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ. ಆದರೆ ಬೆಳೆಗೆ ನೀರು ನಿಲ್ಲಿಸಿದ್ದೇವೆ. ಕೆಆರ್​ಎಸ್​ ಭಾಗದ ರೈತರಿಂದ ಕಬ್ಬು ಬೆಳೆಗೆ ನೀರಿನ ಬೇಡಿಕೆ ಬಂದಿದೆ. ಹೇಮಾವತಿ ಅಣೆಕಟ್ಟೆಯಲ್ಲಿ 15 TMC ನೀರು ಬಳಸಿಕೊಳ್ಳಬಹುದು ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಡಿಸಿ ಡಾ.ರಾಜೇಂದ್ರ ಅವರು ಮಾಹಿತಿ ನೀಡಿದರು.

ಮಾಹಿತಿ ಪಡೆದ ನಂತರ ಮಾತನಾಡಿದ ಸಿದ್ದರಾಮಯ್ಯ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ. ಮಳೆ ಬರುವವರೆಗೆ ಬೆಳೆ ಉಳಿಸಲು, ಕುಡಿಯುವ ನೀರಿಗೆ ಸಂಬಾಳಿಸಿ ಎಂದು ನೀರಾವರಿ ಅಧಿಕಾರಿಗೆ ಸೂಚಿಸಿದರು.

ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ಬಿಲ್ ಹೆಚ್ಚಳ: ವಿವಿಧ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ

ನಾನು ಇಂದು ಕೆಡಿಪಿ ಸಭೆ ನಡೆಸಲು ಬಂದಿಲ್ಲ. ಅಧಿಕಾರಿಗಳ ಮೀಟಿಂಗ್. ನಿಮಗೆ ಎಚ್ಚರಿಕೆ ಕೊಟ್ಟು ಹೋಗಲು ಬಂದಿದ್ದೇನೆ. ಜನ ಬದಲಾವಣೆ ಬಯಸಿ ಹೊಸ ಸರ್ಕಾರ ತಂದಿದ್ದಾರೆ. ಇದನ್ನು ಅಂಡರ್ ಲೈನ್ ಮಾಡಿಕೊಳ್ಳಿ. ಇಲ್ಲಿ ಜನರೇ ಮಾಲೀಕರು ಅವರಿಗಾಗಿಯೇ ನಾವೆಲ್ಲಾ ಇರುವವರು. ಸರ್ಕಾರಿ ನೌಕರರು, ರಾಜಕಾರಣಿಗಳು ಜನರಿಗಾಗಿಯೇ ಇರುವುದು. ಸರ್ಕಾರ ನಿಮ್ಮಿಂದ ಬಯಸಿದ್ದು ನಿಮ್ಮಲ್ಲಿ ಇರಬೇಕು. ಅದಿಲ್ಲದಿದ್ದರೆ ನಿಮ್ಮನ್ನು ಬದಲಾವಣೆ ಮಾಡುವುದಷ್ಟೆ ಅಲ್ಲ ಕ್ರಮವನ್ನೂ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಕೂಡದು ಎಂದು ಸಿದ್ದರಾಮಯ್ಯ ಹೇಳಿದರು.

ಮಳೆ ಬಂದ ಕೂಡಲೇ ಕೃಷಿ ಚಟುವಟಿಕೆ ತೀವ್ರಗತಿಯಲ್ಲಿ ನಡೆಯಲಿದೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ ಸಿಎಂ, ರೈತರಿಗೆ ಅನ್ಯಾಯವಾಗದಂತೆ ಪೂರೈಸಬೇಕು. ರೈತರನ್ನ ಅಲಸ್ಯ ಮಾಡಬಾರದು. ಎಲ್ಲವೂ ಇದ್ದು ರೈತರಿಗೆ ತೊಂದರೆ ಕೊಟ್ಟಿದ್ದು ಕಂಡುಬಂದರೆ ನಿಮ್ಮ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೆ ಪರಿಹಾರ ನೀಡಲು ಅಗತ್ಯಕ್ರಮ ಕೈಗೊಳ್ಳುತ್ತೇನೆ ಎಂದರು.

ಮಳೆ ಬಾರದೆ ಇದ್ದರೆ ಕುಡಿವ ನೀರಿಗೆ ಸಮಸ್ಯೆ ಆಗಬಾರದು. ಕುಡಿಯುವ ನೀರಿಗೆ ಸಮಸ್ಯೆ ಆದರೆ ಜಿಲ್ಲಾಧಿಕಾರಿ ಮತ್ತು ಸಿಇಓ ಹೊಣೆಯಾಗುತ್ತೀರಿ. ದುಡ್ಡು ಇಲ್ಲ ಅಂದರೆ ಕೊಡುತ್ತೇವೆ. ಹಣ ಇದ್ದೂ ನಿಮ್ಮ ತಪ್ಪಿಂದ ತೊಂದರೆ ಆಗದಂತೆ ನೋಡಿಕೊಳ್ಳಿ. ಬೆಳೆ ಒಣಗದ ರೀತಿಯಲ್ಲೂ ನೋಡಿಕೊಳ್ಳಬೇಕು. ಬೆಳೆ ಕಟಾವಿಗೆ ಹತ್ತಿರ ಬಂದಿದೆ. ಕುಡಿವ ನೀರಿಗೆ ನೀರು ಇಟ್ಟುಕೊಂಡು ಬೆಳೆಯನ್ನೂ ಉಳಿಸುವ ಪ್ರಯತ್ನ ಮಾಡಬೇಕು. ಮಂಡ್ಯ, ಮೈಸೂರು ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹೇಮಾವತಿಯಲ್ಲಿ ಹೆಚ್ಚಿನ ನೀರು ಇದ್ದರೆ ಆ ಜಿಲ್ಲೆಯ ರೈತರಿಗೂ ಕೊಡಬೇಕು. ಅಲ್ಲಿನ ರೈತರಿಗೆ ಕೊಟ್ಟು ನೀರು ಉಳಿದರೆ ಇಲ್ಲಿಗೆ ಬಳಸಿಕೊಳ್ಳಬಹುದು ಎಂದರು.

ಮಳೆ ಕೊರತೆ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ

ಮುಖ್ಯಮಂತ್ರಿ ಅವರಿಗೆ ಮಳೆ ಕೊರತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಕೇರಳ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇದ್ದೇವೆ. ಮುಂದಿನ 48 ಗಂಟೆಗಳಲ್ಲಿ ಮಾನ್ಸೂನ್ ರಾಜ್ಯ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದರು. ಈ ವೇಳೆ, ಮೇ ತಿಂಗಳಲ್ಲಿ ಮಳೆ ಆಗಿತ್ತಲ್ಲ. ಜನ ಬಿತ್ತನೆ ಮಾಡಿದ್ದಾರಾ? ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿ, ಶೇ 44ರಷ್ಟು ಮಳೆ ಆಗಿದೆ ಎಂದರು.

ಈಗ ಪರಿಸ್ಥಿತಿ ಏನಾಗಿದೆ ಎಂಬ ಸಿಎಂ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿ, ಎರಡು ದಿನದಲ್ಲಿ ಮಳೆ ಆಗದಿದ್ದರೆ ಉದ್ದು, ಹೆಸರು, ಸೂರ್ಯಕಾಂತಿ ಬೆಳೆಗೆ ಕಷ್ಟವಾಗಲಿದೆ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್‌ರಿಂದಲೂ ಮಾಹಿತಿ ಪಡೆದ ಸಿಎಂ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಇದಿಯಾ? ಎಂದು ಕೇಳಿದ್ದಾರೆ. ಭತ್ತ ಸ್ಟಾಕ್ ಇದೆ ಕಾಲುವೆ ನೀರು ಬಿಟ್ಟಾಗ ರೈತ ಸಂಪರ್ಕ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಯಾವಾ ಬೀಜ, ಯಾವ ತಳಿ? ಬೇಕಾದಷ್ಟು ಸ್ಟಾಕ್ ಇದಿಯಾ? ಡಿಎಪಿ, ಯೂರಿಯಾ, ರೈತರಿಗೆ ಬೇಕಾದ ಬೀಜ ಗೊಬ್ಬರ ಎಲ್ಲ ಇದಿಯಾ? ಎಂದು ಸಿಎಂ ಕೇಳಿದ್ದಾರೆ. ಇದಕ್ಕೆ ಜಂಟಿ ನಿರ್ದೇಶಕರು, ಎಲ್ಲವೂ ಇದೆ. ಶೇ 98 ಸಕ್ಸಸ್ ರೇಟ್ ಬೀಜ ಇದೆ ಎಂದಿದ್ದಾರೆ. ರೈತರು ಬೀಜ ಸರಿ ಇಲ್ಲ ಎಂದು ಬೆಳೆ ವಿಫಲವಾದರೆ ನೀವೆ ಜವಾಬ್ದಾರಿ. ಯಾವುದೇ ದೂರು ಬರದಂತೆ ನೋಡಿಕೊಳ್ಳಬೇಕು, ಇಲ್ಲ ನಿನ್ನ ಮೇಲೆ ಕ್ರಮ ತೆಗೆದುಕೊಳ್ಳುತೇನೆ ಎಂದು ಸಿಎಂ ಎಚ್ಚರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Sat, 10 June 23