ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ: ಸಿದ್ದರಾಮಯ್ಯ ಆಪ್ತ ಮಲ್ಲೇಶ್ ವಿರುದ್ಧ ದೂರು

ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಪ.ಮಲ್ಲೇಶ್ ವಿರುದ್ಧ ದೂರು ದಾಖಲಾಗಿದೆ

ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ: ಸಿದ್ದರಾಮಯ್ಯ ಆಪ್ತ ಮಲ್ಲೇಶ್ ವಿರುದ್ಧ ದೂರು
P Mallesh
Updated By: ನಯನಾ ರಾಜೀವ್

Updated on: Nov 18, 2022 | 8:51 AM

ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಪ.ಮಲ್ಲೇಶ್ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಬ್ರಾಹ್ಮಣರ ವಿರುದ್ಧ ಹೇಳಿಕೆ ನೀಡಿರುವ ಮಲ್ಲೇಶ್​ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಲಾಗಿದೆ.

ಸಿದ್ದರಾಮಯ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಲ್ಲೇಶ್ ಮಾಡಿದ್ದ ಭಾಷಣದಲ್ಲಿ ಬ್ರಾಹ್ಮಣ ಸಮುದಾಯವನ್ನು ಟೀಕಿಸಿದ್ದರು, ಈ ಕುರಿತು ಪ.ಮಲ್ಲೇಶ್ ವಿರುದ್ಧ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘವು ದೂರು ದಾಖಲಿಸಿದೆ.

ಮತ್ತಷ್ಟು ಓದಿ: ಬ್ರಾಹ್ಮಣರನ್ನು ನಂಬಬೇಡಿ, ದೇಶ ಹಾಳು ಮಾಡಿದ್ದು ವೇದ-ಉಪನಿಷತ್ತುಗಳು: ಸಿದ್ದರಾಮಯ್ಯ ಸಮಕ್ಷಮ ವೈದಿಕ ಸಂಸ್ಕೃತಿ ವಿರುದ್ಧ ಹರಿಹಾಯ್ದ ಮಲ್ಲೇಶ್

ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬ್ರಾಹ್ಮಣ್ಯ, ವೇದ ಉಪನಿಷತ್ತುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ದೂರಲಾಗಿದೆ. ಜಾತಿ ನಿಂದನೆ ಹಿನ್ನೆಲೆ ಐಪಿಸಿ 153ಎ, 295, 295ಎ ಸೆಕ್ಷನ್​ಗಳಲ್ಲಿ ಎಫ್​ಐರ್ ದಾಖಲಿಸುವಂತೆ ಮನವಿ ಮಾಡಲಾಗಿದೆ.

ಪಿ ಮಲ್ಲೇಶ್ ಅವರು ಭಾಷಣದಲ್ಲಿ ಹೇಳಿದ್ದೇನು?
ಯಾವ ಕಾರಣಕ್ಕೂ ಬ್ರಾಹ್ಮಣರನ್ನು, ಬ್ರಾಹ್ಮಣಿಕೆಯನ್ನು ನಂಬಬೇಡಿ. ದೇಶ ಹಾಳು ಮಾಡಿದ್ದೇ ವೇದ-ಉಪನಿಷತ್ತುಗಳು. ಬುದ್ಧನ ಕೈಹಿಡಿಯಿರಿ, ನಮಗೆಲ್ಲರಿಗೂ ಬುದ್ಧನಿದ್ದಾನೆ’ ಎಂದು ಸಿದ್ದರಾಮಯ್ಯ ಆಪ್ತ ಮಲ್ಲೇಶ್ ಹೇಳಿದರು. ‘ಸಿದ್ದರಾಮಯ್ಯ@75’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ 50ರಿಂದ ಶೇ 60ಕ್ಕೆ ಹೆಚ್ಚಿಸುವಲ್ಲಿಯೂ ಬ್ರಾಹ್ಮಣರ ಕೈವಾಡವಿದೆ. ಮೊದಲಿಗೆ ಬ್ರಾಹ್ಮಣರು, ಲಿಂಗಾಯಿತರು ಮಠಗಳನ್ನು ಮಾಡಿಕೊಂಡರು.

ಈಚೆಗೆ 20 ವರ್ಷಗಳಿಂದ ಗೌಡರು ಮಠ ಕಟ್ಟಿಕೊಂಡರು. ಈಗ ಎಲ್ಲ ಜಾತಿಗಳು ಮಠ ಮಾಡಿಕೊಂಡಿವೆ. ಎಷ್ಟೊಂದು ಸ್ವಾಮಿಗಳು, ಎಷ್ಟೊಂದು ಮಠಗಳು. ಎಲ್ಲರೂ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

ವೇದಿಕೆಯ ಮೇಲಿದ್ದ ಸಿದ್ದರಾಮಯ್ಯ ಈ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ‘ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆದರೆ ಅವರು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಸಮಸ್ಯೆ ಹೋಗುವುದಿಲ್ಲ. ಅವರ ಮೇಲೆ ಹೊಣೆ ವರ್ಗಾಯಿಸಿ, ನಾವು ಸುಮ್ಮನಿರಲು ಆಗುವುದಿಲ್ಲ’ ಎಂದು ಮಲ್ಲೇಶ್ ಹೇಳಿದರು. ದಿಕ್ಕೇ ಇಲ್ಲದ ಸಮಾಜವನ್ನು ಇಂದು ನಾವು ಕಟ್ಟುತ್ತಿದ್ದೇವೆ. ಪ್ರಧಾನಮಂತ್ರಿ ಎಂದರೆ ಈ ದೇಶಕ್ಕೆ ಪ್ರಮುಖರು. ಅವರು ನನಗೂ-ನಿಮಗೂ ಎಲ್ಲರಿಗೂ ಪ್ರಧಾನಿಯೇ. ಆದರೆ ಇಂದಿನವರು ಕೇವಲ ಆರ್​ಎಸ್​ಎಸ್​ ಮತ್ತು ಬಿಜೆಪಿಯವರಿಗೆ ಮಾತ್ರವೇ ಪ್ರಧಾನಿಯಾಗಿದ್ದಾರೆ. ಆದರೆ ನಮ್ಮ ಪ್ರತಿಕ್ರಿಯೆ ಏನು? ಯುವಕರು ಏನು ಮಾಡುತ್ತಿದ್ದಾರೆ? ಇಷ್ಟೊಂದು ಅನ್ಯಾಯ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ