ಕಾರು ಅಪಘಾತ: ಭವಾನಿ ರೇವಣ್ಣ ವಿಡಿಯೋ ವೈರಲ್, ಬೈಕ್​ ಸವಾರನ ವಿರುದ್ಧ ಕೇಸ್ ಬುಕ್

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಸೊಸೆ ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಡ್ಯಾಮೇಜ್‌ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಅವರು ಬೈಕ್‌ ಸವಾರನಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಇದೀಗ ಈ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಅಲ್ಲದೇ ಬೈಕ್​ ಸವಾರನ ವಿರುದ್ಧ ದೂರು ದಾಖಲಿಸಿದ್ದಾರೆ.

ಮೈಸೂರು, (ಡಿಸೆಂಬರ್ 04): ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರ ಪತ್ನಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭವಾನಿ ರೇವಣ್ಣ (Bhavani Revanna) ಅವರ ಕಾರಿಗೆ (Car) ಬೈಕ್‌ (Bike) ಡಿಕ್ಕಿ ಹೊಡೆದಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಸಾಲಿಗ್ರಾಮದ ಬಳಿ ನಡೆದಿದೆ. ಸುಮಾರು ಒಂದುವರೆ ಕೋಟಿ ರೂಪಾಯಿ ಮೌಲ್ಯದ ಟೊಯೋಟಾ ವೆಲ್ಫೇರ್​ ಕಾರಿನ ಮುಂಭಾಗ ಡ್ಯಾಮೇಜ್ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಅವರು ಬೈಕ್‌ ಸವಾರನಿಗೆ ಹಿಗ್ಗಾಮುಗ್ಗ ಜಾಡಿಸಿದ್ದು, ಇದೀಗ ಈ ದೃಶ್ಯದ ವೀಡಿಯೋ ಫುಲ್ ವೈರಲ್‌ ಆಗಿದೆ.

ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟು ದೂರದಿಂದ ಟೈರ್ ಉಜ್ಜಿಕೊಂಡು ಕಂಟ್ರೋಲ್‌ ಮಾಡಿದ್ದೀವಿ. ಬೈಕ್ ಓಡ್ಸೋಕೆ ಇತಿಮಿತಿ ಇಲ್ವಾ? ನಿನಗೆ ರೈಟ್ ಸೈಡ್ ಬರೋಕೆ ರೂಲ್ಸ್ ಎಲ್ಲಿದೆ? ಲೆಫ್ಟ್ ಸೈಡ್ ಬರಬೇಕು ನೀನು ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇನ್ನು ಈ ಸಂಬಂಧ ಭವಾನಿ ರೇವಣ್ಣ ಕಾರು ಚಾಲಕ ಮಂಜುನಾಥ್‌ ಅವರು ಅವರು ಬೈಕ್​ ಸವಾರ ಶಿವಣ್ಣ ಎನ್ನುವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲೇನಿದೆ?

01/12/2023ರಂದು 12.45ರ ಸುಮಾರಿಗೆ ಕೆಲಸ ನಿಮಿತ್ತ ಸಾಲಿಗ್ರಾಮದ ಪ್ರಕಾಶ್ ಮನೆಗೆ ಹೋಗಿದ್ದೆ. ವಾಪಸ್ಸು ಹೊಳೆನರಸೀಪುರಕ್ಕೆ ಹೊರಟಿದ್ದೆ. ಆಗ ರಾಂಪುರ ಜಂಕ್ಷನ್ ಬಳಿ ಎದರುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಅಡ್ಡ ದಿಡ್ಡಿಯಾಗಿ ಬಂದು ಕಾರಿನ ಮುಂಭಾಗಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಆದರೆ ಆತನಿಗೆ ಯಾವುದೇ ಗಾಯವಾಗಿಲ್ಲ. ಇನ್ನು ಕಾರಿನ ಬಂಪರ್ ಬ್ಯಾನೆಟ್, ನಂಬರ್ ಪ್ಲೇಟ್ ಮುಂಭಾಗದ ಬಿಡಿ ಭಾಗಗಳು ಜಖಂ ಆಗಿವೆ. ಹೀಗಾಗಿ ಶಿವಣ್ಣ ವಿರುದ್ದ ಕಾನೂನು ಕ್ರಮ‌ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಭವಾನಿ ರೇವಣ್ಣ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮನುಷ್ಯನ ಪ್ರಾಣಕ್ಕಿಂತ ತಮ್ಮ ಕಾರಿಗೆ ಆಗಿರುವ ಹಾನಿಯೇ ಹೆಚ್ಚಾಯ್ತಾ? ಅವರಿಂದಲೇ ಆಯ್ಕೆಯಾಗುವ ನಿಮ್ಮ ಈ ವರ್ತನೆ ಸರಿ ಅಲ್ಲ ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 am, Mon, 4 December 23

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us