ನಾನು ಬಡವ, ನನ್ನ ಕತ್ತು ಸೀಳ ಬೇಡಿ: ಉದಯಪುರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ವಿಭಿನ್ನ ಅಭಿಯಾನ

ಮೈಸೂರು ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಹಾಗೂ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ವಿಭಿನ್ನ ಅಭಿಯಾನ ಆರಂಭಿಸಿದ್ದಾರೆ.

ನಾನು ಬಡವ, ನನ್ನ ಕತ್ತು ಸೀಳ ಬೇಡಿ: ಉದಯಪುರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ವಿಭಿನ್ನ ಅಭಿಯಾನ
ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಟಿ.ನರಸೀಪುರದ ವ್ಯಾಪಾರಿಗಳು ಉದಯಪುರದ ಟೈಲರ್ ಹತ್ಯೆ ಖಂಡಿಸಿ ಪ್ರತಿಭಟಿಸಿದರು.
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 30, 2022 | 10:22 AM

ಮೈಸೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ (Udaipur tailor Kanhaiya Lal) ಖಂಡಿಸಿ ಜಿಲ್ಲೆಯ ನಂಜನಗೂಡು ಮತ್ತು ಟಿ.ನರಸೀಪುರದ ಬೀದಿಬದಿ ವ್ಯಾಪಾರಿಗಳು ಹಾಗೂ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ವಿಭಿನ್ನ ಅಭಿಯಾನ ಆರಂಭಿಸಿದರು. ‘ನಾನು ಬಡವ, ನನ್ನ ಕತ್ತು ಸೀಳಬೇಡಿ’ ಎಂಬ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ‘ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲುವುದೂ ಇಲ್ಲ. ನಾನು ಬಡವ, ನನ್ನ ಕತ್ತು ಸೀಳಬೇಡಿ’ ಎಂದು ಅಂಗಡಿಗಳ ಎದುರು ನಾಮಫಲಕ‌ ಹಿಡಿದು ಅಭಿಯಾನ ನಡೆಸಿದರು.

ಪ್ರಕರಣದ ಹಿನ್ನೆಲೆ

ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ರಾಜಸ್ಥಾನದ ಉದಯ್​ಪುರ್ ನಗರದ ನಿವಾಸಿ ಟೈಲರ್ ಕನ್ಹಯ್ಯಲಾಲ್ ಅವರನ್ನು ಜೂನ್ 28ರಂದು ಮುಸ್ಲಿಂ ಮೂಲಭೂತವಾದಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಜೂನ್ 17ರಂದೇ ಭೂಮಿಕೆ ಸಿದ್ಧವಾಗಿತ್ತು ಎನ್ನುವ ಆಘಾತಕಾರಿ ವಿಚಾರ ನಂತರ ಬಹಿರಂಗವಾಗಿತ್ತು. ಕೊಲೆಗೆ 11 ದಿನ ಮೊದಲೇ, ಅಂದರೆ ಜೂನ್ 17ರಂದೇ ಕೊಲೆಗಡುಕ ಮೊಹಮದ್ ರಿಯಾಜ್ ಅಖ್ತಾರಿ ತನ್ನ ಉದ್ದೇಶವನ್ನು ಬಹಿರಂಗಪಡಿಸಿದ್ದ. ಅಷ್ಟೇ ಅಲ್ಲದೆ, ಅತ್ಯಂತ ಹೆಮ್ಮೆಯಿಂದ ತನ್ನ ಉದ್ದೇಶಿತ ಕೃತ್ಯಕ್ಕೆ ವಿವರಣೆಯನ್ನೂ ಕೊಟ್ಟುಕೊಂಡಿದ್ದ. ನಾನು ಮೊದಲ ಕೊಲೆ ಮಾಡಿದ ನಂತರ ಇನ್ನಷ್ಟು ಜನರನ್ನು ಇದೇ ರೀತಿ ಕೊಂದುಹಾಕಿ ಎಂದು ಕರೆ ನೀಡಿದ್ದ.

ಇತರರು ಸಹ ತನ್ನ ಮಾದರಿಯನ್ನು ಯಾವುದೇ ಹೆದರಿಕೆಯಿಲ್ಲದೆ ಅನುಸರಿಸಬೇಕು. ಒಂದು ವೇಳೆ ಸಾವು ಬಂದರೂ ನಾನು ಹೆದರುವುದಿಲ್ಲ. ಸಾವು ಎನ್ನುವುದು ಸ್ವರ್ಗವಿದ್ದಂತೆ. ಜೈಲಿಗೆ ಹೋದರೂ ಪರವಾಗಿಲ್ಲ. ಯಾವುದೇ ಚಿಂತೆಯಿಲ್ಲ ಎಂದು ಹೇಳಿದ್ದ. ಹಿಂದೂಗಳೊಂದಿಗೆ ಶಾಂತಿ ಮತ್ತು ಸೌಹಾರ್ದದಿಂದ ವರ್ತಿಸಬೇಕು ಎನ್ನುವ ಮುಸ್ಲಿಮ್ ಸಮುದಾಯದ ಹಿರಿಯ ಬಗ್ಗೆಯೂ ಅಖ್ತಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ. ಮುಸ್ಲಿಮೇತರರ ಬಗ್ಗೆ ಮಾತನಾಡಲು ನೀವು ಹೆದರುತ್ತೀರಿ. ಹಸಿರು ಬಳೆ ತೊಟ್ಟು ಮನೆಗಳಲ್ಲಿಯೇ ಇರಿ ಎಂದು ಹೇಳಿದ್ದ.

ಶಿರಚ್ಛೇದದ ವಿಡಿಯೊ ಕಿಚ್ಚು ಹೊತ್ತಿಸುವಂತಿದೆ. ಅದನ್ನು ನೋಡಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಾಧ್ಯಮಗಳಿಗೂ ಇಂಥ ವಿಡಿಯೊ ಪ್ರಸಾರ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ಪೊಲೀಸ್ ಇಲಾಖೆಯ ಎಡಿಜಿ (ಕಾನೂನು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ, ಇದು ಮನಸ್ಸು ಕದಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.