ಕರ್ನಾಟಕ ರಾಜ್ಯ ಮುಕ್ತ ವಿವಿ: ಅಧ್ಯಾಪಕರ ಸಂಘದ ಸಭೆಗೆ ಕುಲಪತಿಗಳಿಂದ ಅನುಮತಿ ನಿರಾಕರಣೆ; ಬಯಲಿನಲ್ಲೇ ನಡೆದ ಸಭೆ
ಮುಕ್ತ ವಿವಿಯಲ್ಲಿನ ಬೆಳವಣಿಗೆಗಳಿಂದ ಅಸಮಧಾನಗೊಂಡು, ಹಳಿ ತಪ್ಪಿರುವ ವಿವಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಂಘಕ್ಕೆ ಮರುಜೀವ ನೀಡಲಾಗಿದೆ ಎಂದು ಕೆಲ ಪ್ರಾಧ್ಯಾಪಕರು ತಿಳಿಸಿದ್ದಾರೆ. ಸದ್ಯ ಇದು ಪ್ರಾಧ್ಯಾಪಕರು ಹಾಗೂ ಮುಕ್ತ ವಿವಿ ಆಡಳಿತ ಮಂಡಳಿಯ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಧ್ಯಾಪಕರ ಸಂಘದ ಸಭೆಗೆ ಕುಲಪತಿಗಳು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಬಯಲಿನಲ್ಲೇ ಸಭೆ ನಡೆಸಿದ ಪ್ರಾಧ್ಯಾಪಕರು ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ(ರಿ)ದ ಸರ್ವ ಸದಸ್ಯರ ಸಭೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ಮುಂದಿನ ಅವಧಿಗೆ ಆಯ್ಕೆ ಮಾಡಲಾಗಿದೆ.
ಮುಕ್ತ ವಿವಿಯ ಕ್ಯಾಂಪಸ್ ಆವರಣದಲ್ಲಿನ ಕಾವೇರಿ ಭವನದಲ್ಲಿ ಸರ್ವ ಸಮಿತಿ ಸಭೆ ನಡೆಸಲು ವಿಶ್ವವಿದ್ಯಾನಿಲಯಕ್ಕೆ ಡಿಸೆಂಬರ್ 6 ರಂದೇ ಲಿಖಿತ ಮನವಿ ಸಲ್ಲಿಸಲಾಗಿತ್ತು, ಆದರೆ ಕುಲಪತಿ ಪ್ರೊ ವಿದ್ಯಾಶಂಕರ್ ಸಭೆಗೆ ಸ್ಥಳಾವಕಾಶ ನಿರಾಕರಿಸಿದ್ದಾರೆ. ಈ ಬಗ್ಗೆ ಮುಕ್ತ ವಿವಿ ಕುಲಸಚಿವರು ಡಿಸೆಂಬರ್ 9 ರಂದು ಪತ್ರ ಮುಖೇನ ಅಧ್ಯಾಪಕರ ಸಂಘಕ್ಕೆ ಈ ಬಗ್ಗೆ ಸ್ಪಷ್ಟಪಡಿಸಿತ್ತು. ಇದರಿಂದ ವಿಧಿಯಿಲ್ಲದೆ ಕಾವೇರಿ ಭವನದ ಹೊರಭಾಗ ರಸ್ತೆಯ ಪಕ್ಕ ಮರದ ಕೆಳಗೆ ಬಯಲಿನಲ್ಲೇ ಮುಕ್ತವಾಗಿ ಸರ್ವಸದಸ್ಯರ ಸಾಮಾನ್ಯ ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಸರ್ವಾನುಮತದಿಂದ ಸಂಘದ ಅಧ್ಯಕ್ಷರಾಗಿ ಡಾ. ಎನ್.ಜಿ.ರಾಜು, ಉಪಾಧ್ಯಕ್ಷರಾಗಿ ಡಾ.ಸಿ. ಮಹದೇವಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಜಗದೀಶ್ ಬಾಬು ಹೆಚ್.ಕೆ., ಖಜಾಂಚಿಯಾಗಿ ಡಾ. ಎಸ್. ನಿರಂಜನ್ ರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಎನ್. ಕೃಷ್ಣಪ್ಪ, ಡಾ. ಎಂ.ಎಸ್. ಹೇಮಲತಾ, ಡಾ. ಜೆ.ಎಸ್. ಚಂದ್ರಶೇಖರ್, ಶ್ರೀ ಎಸ್.ವಿ. ನಿರಂಜನ್, ಪ್ರೊ. ಎ. ರಂಗಸ್ವಾಮಿ, ಡಾ. ಗೋಪಾಲಸ್ವಾಮಿ, ಡಾ. ಛಾಯ .ಆರ್ ರವರನ್ನು ಆಯ್ಕೆ ಮಾಡಲಾಗಿದೆ.
ಈಗ ಏಕೆ ಸಂಘ? ಕರ್ನಾಟಕ ರಾಜ್ಯ ಮುಕ್ತ ವಿವಿ ಅಧ್ಯಾಪಕರ ಸಂಘ ನೋಂದಾಣಿಗೊಂಡು ಹತ್ತಾರು ವರ್ಷಗಳೇ ಕಳೆದಿತ್ತು. ಆದರೆ ಕೆಲ ವರ್ಷಗಳಿಂದ ಅದು ನಿಷ್ಕ್ರಿಯವಾಗಿತ್ತು. ಇದೀಗ ಮುಕ್ತ ವಿವಿಯಲ್ಲಿನ ಬೆಳವಣಿಗೆಗಳಿಂದ ಅಸಮಧಾನಗೊಂಡು, ಹಳಿ ತಪ್ಪಿರುವ ವಿವಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಂಘಕ್ಕೆ ಮರುಜೀವ ನೀಡಲಾಗಿದೆ ಎಂದು ಕೆಲ ಪ್ರಾಧ್ಯಾಪಕರು ತಿಳಿಸಿದ್ದಾರೆ. ಸದ್ಯ ಇದು ಪ್ರಾಧ್ಯಾಪಕರು ಹಾಗೂ ಮುಕ್ತ ವಿವಿ ಆಡಳಿತ ಮಂಡಳಿಯ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ವರದಿ: ರಾಮ್ ಟಿವಿ9 ಮೈಸೂರು
ಇದನ್ನೂ ಓದಿ: ಮೈಸೂರು ಪರಿಷತ್ ಚುನಾವಣೆ: ಆಕ್ಸಿಜನ್ ಜೊತೆಗೆ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ
ಇದನ್ನೂ ಓದಿ: ಮೈಸೂರು ಸಮೀಪದ ಕಂತೆ ಮಾದಪ್ಪ ಬೆಟ್ಟದಲ್ಲಿ ಮತ್ತೆ ಕಾಣಿಸಿಕೊಂಡವು ಕಾಡಾನೆಗಳು, ಆತಂಕದಲ್ಲಿ ಜನ




