ಪಿರಿಯಾಪಟ್ಟಣದಲ್ಲಿ ರೈತನ ಮೇಲೆ ಚಿರತೆ ದಾಳಿ, ಮೈಸೂರು ತಾಲೂಕಿನಲ್ಲಿ ಹುಲಿ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ

| Updated By: Rakesh Nayak Manchi

Updated on: Dec 11, 2023 | 8:38 AM

ಮೈಸೂರಿನಲ್ಲಿ ಮತ್ತೊಂದು ಚಿರತೆ ದಾಳಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆ ಹಿಡಿಯವಂತೆ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ, ಮೈಸೂರು ತಾಲೂಕಿನಲ್ಲಿ ಭೀತಿ ಹುಟ್ಟಿಸಿರುವ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದೆ.

ಪಿರಿಯಾಪಟ್ಟಣದಲ್ಲಿ ರೈತನ ಮೇಲೆ ಚಿರತೆ ದಾಳಿ, ಮೈಸೂರು ತಾಲೂಕಿನಲ್ಲಿ ಹುಲಿ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ
ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿ ರೈತನ ಮೇಲೆ ಚಿರತೆ ದಾಳಿ (ಸಾಂದರ್ಭಿಕ ಚಿತ್ರ)
Follow us on

ಮೈಸೂರು, ಡಿ.11: ಜಿಲ್ಲೆಯಲ್ಲಿ ಚಿರತೆ ಮತ್ತು ಹುಲಿಗಳ ಕಾಟ ಹೆಚ್ಚಾಗಿದೆ. ಜನರು ಹಾಗೂ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಇದೀಗ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಚಿರತೆ ದಾಳಿ (Leopard Attack) ನಡೆಸಿದ ಘಟನೆ ಪರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಇನ್ನೊಂದೆಡೆ, ಮೈಸೂರು ತಾಲೂಕಿನಲ್ಲಿ ಭೀತಿ ಹುಟ್ಟಿಸಿರುವ ಹುಲಿಯ (Tiger) ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ರಾಜೇಶ್ ಎಂಬುವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ ನಡೆಸಿದ್ದು, ಕಿವಿ ಹಾಗೂ ತಲೆ ಭಾಗಕ್ಕೆ ಗಾಯಗೊಳಾಗಿವೆ. ಇವರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿರತೆ ದಾಳಿಯಿಂದ ಆಕ್ರೋಶಗೊಂಡಿರುವ ಜನರು, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿ ಪತ್ತೆ, ಮೂರರಲ್ಲಿ ಒಂದು ಕಪ್ಪು!

ಹುಲಿ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ

ಮೈಸೂರು ತಾಲೂಕಿನಲ್ಲಿ ಭೀತಿ ಹುಟ್ಟಿಸಿರುವ ಹುಲಿ ಸೆರೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಚಿಕ್ಕಕಾನ್ಯ ಗ್ರಾಮ, ದೊಡ್ಡಕಾನ್ಯ ಬ್ಯಾತಹಳ್ಳಿ, ಸಿಂದುವಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಕಾಣಿಸಿಕೊಂಡ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಶೇಷ ರಕ್ಷಣಾ ದಳ, ಚಿರತೆ ಕಾರ್ಯಪಡೆ ಭಾಗಿಯಾಗಿದ್ದು, ಕ್ಯಾಮರಾಗಳ ಮೂಲಕ ಹುಲಿ ಚಲನವಲನ ಪತ್ತೆ ಹಚ್ಚುತ್ತಿದ್ದಾರೆ. ಅನಗತ್ಯವಾಗಿ ಹೊರಗೆ ಓಡಾಡದಂತೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮನವಿ ಮಾಡಿದ್ದು, ಹುಲಿ ಸೆರೆ ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ