ರನ್ಯಾ ಮಲತಂದೆ ರಾಮಚಂದ್ರ ರಾವ್​ಗೆ ಸಂಕಷ್ಟ: 11 ವರ್ಷಗಳ ಹಿಂದಿನ ಪ್ರಕರಣ ಮತ್ತೆ ಮುನ್ನೆಲೆಗೆ

| Updated By: ವಿವೇಕ ಬಿರಾದಾರ

Updated on: Mar 16, 2025 | 9:31 AM

ಮೈಸೂರಿನ ಇಲವಾಲ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಅವರು ಸಿಬಿಐಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಈ ಘಟನೆಯಿಂದಾಗಿ ಚಿನ್ನ ಕಳ್ಳಸಾಗಾಣಿಕೆ ಮತ್ತು ಹವಾಲಾ ಹಣದ ಮೂಲದ ಬಗ್ಗೆಯೂ ತನಿಖೆ ಅಗತ್ಯ ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರನ್ಯಾ ಮಲತಂದೆ ರಾಮಚಂದ್ರ ರಾವ್​ಗೆ ಸಂಕಷ್ಟ: 11 ವರ್ಷಗಳ ಹಿಂದಿನ ಪ್ರಕರಣ ಮತ್ತೆ ಮುನ್ನೆಲೆಗೆ
ಐಜಿಪಿ ರಾಮಚಂದ್ರ ರಾವ್, ಸ್ನೇಹಮಯಿ ಕೃಷ್ಣ
Follow us on

ಮೈಸೂರು, ಮಾರ್ಚ್​ 16: 11 ವರ್ಷಗಳ ಹಿಂದೆ ನಡೆದಿದ್ದ ಇಲವಾಲ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದಲ್ಲಿ ಚಿನ್ನ ಕಳ್ಳಸಗಾಣಿಕೆಯಲ್ಲಿ (Gold Smuggling) ಬಂಧಿತವಾಗಿರುವ ರನ್ಯಾ ರಾವ್​ (Ranya Rao) ಅವರ ಮಲತಂದೆ ಐಜಿಪಿ ರಾಮಚಂದ್ರ ರಾವ್ (Ramchandra Rao) ಹೆಸರು ತಳಕು ಹಾಕಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದಿದ್ದಾರೆ.

ಅಂದು ಚಿನ್ನ ಕಳ್ಳಸಾಗಣೆ ಮಾಡಿದ ವ್ಯಕ್ತಿಗಳ ವಿರುದ್ಧ ಹಾಗೂ ಪ್ರಕರಣ ಮುಚ್ಚಿ ಹಾಕಿದ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಸಿಬಿಐಗೆ 9 ಪುಟಗಳ ಪತ್ರ ಬರೆದಿದ್ದಾರೆ. ಅಂದಿನ ಸಿಐಡಿ ಡಿಜಿಪಿ ಕಿಶೋರ್​​ಚಂದ್ರ, ಸಿಐಡಿ ಐಜಿಪಿ ಪ್ರಣವ್ ಮೊಹಂತಿ, ಪೊಲೀಸ್​ ವರಿಷ್ಠಾಧಿಕಾರಿ ಕೃಷ್ಣಭಟ್, ಡಿವೈ‌ಎಸ್‌ಪಿ ರಾಘವೇಂದ್ರ ಹೆಗ್ಡೆ, ಅಂದಿ‌ನ ಮೈಸೂರು ಎಸ್​​ಪಿ ಅಭಿನವ ಖರೆ, ಡಿವೈ‌ಎಸ್‌ಪಿ ವಿಕ್ರಂ ಆಮ್ಟೆ, ಇಲವಾಲ ಪಿಎಸ್​​ಐ ಗಣೇಶ್ ಸೇರಿ ಹಲವರ ವಿರುದ್ಧ ಸಿಬಿಐಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ನಟಿ ರನ್ಯಾ ರಾವ್​ ಪ್ರಕರಣದ ಜೊತೆಗೆ ಇದನ್ನು ಸೇರಿಸಿಕೊಂಡು ತನಿಖೆ ಮಾಡಬೇಕು. ಸಾಧ್ಯವಾಗದಿದ್ದರೆ ಪ್ರತ್ಯೇಕ ಪ್ರಕರಣವಾಗಿ ತನಿಖೆ ನಡೆಸಿ. 2014ರಿಂದಲೇ ಈ ರೀತಿ ಚಿನ್ನ ಕಳ್ಳಸಾಗಣೆ ನಡೆದುಕೊಂಡು ಬರುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರೇ, ಇಂತಹ ಪ್ರಕರಣ ತಡೆಯಬಹುದಿತ್ತು ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಹಿಂದೆ ಖಾವಿ ಕೃಪೆ: ಸ್ವಾಮೀಜಿ ಶಾಮೀಲು
ಚಿನ್ನ ಕಳ್ಳ ಸಾಗಣೆ: ರನ್ಯಾ ಜತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿಗಳು
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
ಅಧಿಕಾರಿಗಳ ಮುಂದೆ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಒಪ್ಪಿಕೊಂಡ ನಟಿ ರನ್ಯಾ ರಾವ್

ಇದನ್ನೂ ಓದಿ: ಸರ್ಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಾಟ: ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಏನಿದು ಪ್ರಕರಣ

2014ರಲ್ಲಿ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ 2.27 ಕೋಟಿ ಹಣ ಹಾಗೂ 2 ಕೆಜಿ ಚಿನ್ನ ದರೋಡೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಿದ್ದರು. ಅಂದಿನ ದಕ್ಷಿಣ ವಲಯದ ಐಜಿಪಿ ರಾಮಚಂದ್ರ ರಾವ್ ಗನ್‌ಮ್ಯಾನ್, ದಕ್ಷಿಣ ಠಾಣೆ ಸಿಬ್ಬಂದಿ ಸೇರಿ ಡಿವೈಎಸ್​ಪಿ ಸ್ಕ್ವಾಡ್ ವಿರುದ್ಧ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ವಿಚಾರಣೆ ನಡೆದು ಎಲ್ಲರೂ ಆರೋಪ ಮುಕ್ತರಾಗಿದ್ದರು. ಆದರೆ, ಈವರೆಗೂ ಗೋಲ್ಡ್ ಸ್ಮಗ್ಲಿಂಗ್ ಹಾಗೂ ಹವಾಲಾ ಹಣದ ಮೂಲದ ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಇದೀಗ, ಸ್ನೇಹಮಯಿ ಕೃಷ್ಣ ದೂರಿನಿಂದ ಪ್ರಕರಣ ಮತ್ತೆ ಮರುಜೀವ ಪಡೆದುಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ