ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
ರನ್ಯಾ ರಾವ್ ಅವರನ್ನು 14.2 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಡಿಆರ್ಐ ಅಧಿಕಾರಿಗಳು 17.29 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಸಿಬಿಐ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ತನಿಖೆ ನಡೆಯುತ್ತಿದೆ. ರನ್ಯಾ ರಾವ್ ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ಬೆಂಗಳೂರು, ಮಾರ್ಚ್ 08: ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರನ್ಯಾ ರಾವ್ (Ranya Rao) ವಿರುದ್ಧ ಡಿಆರ್ಐ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಕೇಂದ್ರ ತನಿಖಾ ದಳ (CBI) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣ ಸಂಬಂಧ ಸಿಬಿಐ ಮುಂಬೈ ಹಾಗೂ ಬೆಂಗಳೂರಿನಲ್ಲಿ ತನಿಖೆ ಆರಂಭಿಸಿದೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ನಟಿ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಡಿಆರ್ಐ ಅಧಿಕಾರಿಗಳು ಈಗಾಗಲೇ ವಶಪಡಿಸಿಕೊಂಡಿದ್ದಾರೆ.
ಆಗಾಗ ವಿದೇಶಕ್ಕೆ ಹೋಗುತ್ತಿದ್ದ ರನ್ಯಾ ರಾವ್
ನಟಿ ರನ್ಯಾ ರಾವ್ ನಿರಂತರವಾಗಿ ವಿದೇಶಕ್ಕೆ ಪ್ರಯಾಣ ಮಾಡುತ್ತಲೇ ಇದ್ದರು. ರನ್ಯಾ ರಾವ್ ಇದನ್ನೇ ಬಂಡವಾಳವಾಗಿ ಕೂಡ ಮಾಡಿಕೊಂಡಿದ್ದರು. ರನ್ಯಾ ರಾವ್ ಡಿಆರ್ಐ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರಕಾರ, ಯೂರೋಪ್, ಅಮೇರಿಕ, ದುಬೈ ದೇಶಗಳನ್ನು ಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 24 ರಂದು ದುಬೈಗೆ ತೆರಳಿ, ಡಿಸೆಂಬರ್ 27 ಕ್ಕೆ ಭಾರತಕ್ಕೆ ವಾಪಸ್ಸು ಆಗಿದ್ದರು.
ಬಳಿಕ, ಜನವರಿ 18 ರಂದು ಅಮೆರಿಕಾಕ್ಕೆ ತೆರಳಿ ಏಳು ದಿನ ಅಲ್ಲೇ ತಂಗಿದ್ದರು. ಜನವರಿ 25 ರಂದು ಅಮೆರಿಕಾದಿಂದ ಬೆಂಗಳೂರಿಗೆ ವಾಪಸ್ಸು ಆಗಿದ್ದರು. ನಂತರ ಫೆಬ್ರವರಿಯಿಂದ ನಿರಂತರವಾಗಿ ದುಬೈಗೆ ತೆರಳಿದ್ದಾರೆ. ಫೆಬ್ರವರಿ 2 ರಿಂದ ಮಾರ್ಚ್ 3ವರೆಗೂ ಐದು ಬಾರಿ ರನ್ಯಾ ರಾವ್ ದುಬೈಗೆ ತೆರಳಿದ್ದರು.
ರನ್ಯಾ ರಾವ್ ಬಂಧನವಾಗಿದ್ದು ಹೇಗೆ?
ಮಾರ್ಚ್ 3ರ ರಾತ್ರಿ ದುಬೈದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ್ದ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲ ಮಗಳು, ನಟಿ ರನ್ಯಾ ರಾವ್ರನ್ನು ಡಿಆರ್ಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ರನ್ಯಾ ರಾವ್ ಬಳಿ 14.2 ಕೆಜಿ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಅದರ ಮೌಲ್ಯ 12.56 ಕೋಟಿ ರೂಪಾಯಿಯಾಗಿತ್ತು. ಕೂಡಲೆ ಅಧಿಕಾರಿಗಳು ರನ್ಯಾ ರಾವ್ರನ್ನು ವಶಕ್ಕೆ ಪಡೆದ್ದಿದ್ದರು.
ಬಳಿಕ ಡಿಆರ್ಐ ಅಧಿಕಾರಿಗಳು ಲ್ಯಾವೆಲ್ಲಿ ರಸ್ತೆಯಲ್ಲಿರುವ ರನ್ಯಾ ರಾವ್ ಅಪಾರ್ಟ್ಮೆಂಟ್ನಲ್ಲಿ ತಪಾಸಣೆ ನಡೆಸಿದಾಗ 2.06 ಕೋಟಿ ಮೌಲ್ಯದ ಚಿನ್ನಾಭರಣ, 2.67 ಕೋಟಿ ನಗದು ಸೇರಿ ಒಟ್ಟು 17.29 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿತ್ತು. ರನ್ಯಾ ರಾವ್ರನ್ನು ಸುದೀರ್ಘ ವಿಚಾರಣೆ ನಡೆಸಿ ಮಾರ್ಚ್ 5ರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಮಾರ್ಚ್ 7ರ ಮಧ್ಯಾಹ್ನ ರನ್ಯಾ ರಾವ್ರನ್ನು 3 ದಿನಗಳ ಕಾಲ ಡಿಆರ್ಐ ಕಸ್ಟಡಿಗೆ ನೀಡಿ ವಿಶೇಷ ಆರ್ಥಿಕ ಅಪರಾಧ ವಿಭಾಗದ ನ್ಯಾಯಾಧೀಶರು ಆದೇಶ ನೀಡಿದ್ದರು. ಜೊತೆಗೆ ಸಂಜೆ ವೇಳೆ ಓಪನ್ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದರು. ಹೀಗಾಗಿ ರನ್ಯಾ ರಾವ್ ಅವರನ್ನು ಸಂಜೆ 5.45 ರ ಸುಮಾರಿಗೆ ಡಿಆರ್ಐ ಅಧಿಕಾರಿಗಳು ನೃಪತುಂಗ ರಸ್ತೆಯಲ್ಲಿರುವ ಅಪರಾಧ ವಿಭಾಗಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದ್ದರು.
ಸೋಮವಾರ (ಮಾರ್ಚ್ 10) ರಂದು ಸಂಜೆ 4.30 ರೊಳಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೋರ್ಟ್ಗೆ ಹಾಜರು ಪಡಿಸಬೇಕು. ವಿಚಾರಣೆಯನ್ನು ಕಚೇರಿ ಅವಧಿ ಒಳಗೆ ಮುಗಿಸಿ, ವಿಚಾರಣೆ ಬಳಿಕ ಡಿಆರ್ಐ ಅಧಿಕಾರಿ ಸಮ್ಮುಖದಲ್ಲಿ ಆರೋಪಿ ರನ್ಯಾ ರಾವ್ ಅವರಿಗೆ ಅರ್ಧ ಗಂಟೆ ವಕೀಲರ ಭೇಟಿಗೆ ಅವಕಾಶ ನೀಡಬೇಕು ನ್ಯಾಯಾಧೀಶರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಅಗತ್ಯ ಬಿದ್ದರೆ ತಕ್ಷಣಕ್ಕೆ ಆರೋಪಿಗೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ವಿಚಾರಣೆ ವೇಳೆ ಒತ್ತಡ ಹೇರಬಾರದು ಅಂತ ಡಿಆರ್ಐ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಇದನ್ನೂ ಓದಿ: ನಟಿ ರನ್ಯಾ ಮಲತಂದೆ ರಾಮಚಂದ್ರ ರಾವ್ ಹಿನ್ನೆಲೆಯೇನು? ಚಿನ್ನ ಸ್ಮಗ್ಲಿಂಗ್ನಲ್ಲಿ ಡಿಜಿಪಿ ಕೈವಾಡವೂ ಇತ್ತೇ?
ರನ್ಯಾ ರಾವ್ ವಿಚಾರಣೆಗೆ ಸಹಕರಿಸಬೇಕು ಇಲ್ಲದಿದ್ದರೇ, ಆದೇಶ ಬರೆಯುವಾಗ ಎಲ್ಲವನ್ನು ಪರಿಗಣಿಸಬೇಕಾಗುತ್ತೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಸದ್ಯ ರನ್ಯಾ ರಾವ್ ಅವರನ್ನು ಡಿಆರ್ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Sat, 8 March 25