Mysuru News: ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್​, ಖಾಸಗಿ ವಾಹನ ನಿಷೇಧ; ದೇವರ ದರ್ಶನಕ್ಕೆ ಟಿಕೆಟ್, ಇಲ್ಲಿದೆ ವಿವರ

|

Updated on: Jun 22, 2023 | 6:59 PM

ಗುರುವಾರ ರಾತ್ರಿ 10 ಗಂಟೆಯಿಂದ ದೇಗುಲಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭಕ್ತರು ತಮ್ಮ ವಾಹನಗಳನ್ನು ನಿಗದಿತ ಜಾಗದಲ್ಲಿ ನಿಲ್ಲಿಸಿ ಲಲಿತ ಮಹಲ್ ಪ್ರದೇಶದಿಂದ ಕೆಎಸ್​ಆರ್​​ಟಿಸಿ ಬಸ್​​ನಲ್ಲಿ ತೆರಳಿ ದರ್ಶನ ಪಡೆದು ಹಿಂತಿರುಗಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

Mysuru News: ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್​, ಖಾಸಗಿ ವಾಹನ ನಿಷೇಧ; ದೇವರ ದರ್ಶನಕ್ಕೆ ಟಿಕೆಟ್, ಇಲ್ಲಿದೆ ವಿವರ
ಚಾಮುಂಡಿಬೆಟ್ಟ
Follow us on

ಮೈಸೂರು: ಆಷಾಢಮಾಸ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hills) ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಗುರುವಾರ ತಿಳಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತರಿಗೆ ಉಚಿತ ಬಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ಲಲಿತಮಹಲ್ ಮೈದಾನದಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ಸೇವೆ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ದೇವರ ದರ್ಶನಕ್ಕೆ 300 ಮತ್ತು 50 ರೂ. ಟಿಕೆಟ್ ವಿತರಣೆ ಮಾಡಲಾಗುವುದು ಎಂದೂ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಬಾರಿ ಪ್ಲಾಸ್ಟಿಕ್​​ ಮುಕ್ತ ಆಷಾಢಮಾಸ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್​ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮೆಟ್ಟಿಲು, ದೇವಸ್ಥಾನ ಸುತ್ತಮುತ್ತ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಬೆಟ್ಟಕ್ಕೆ ತೆರಳುವ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹೇರಲಾಗಿದೆ. ಬಸ್​​​ನಲ್ಲಿ ಮಾತ್ರ ಚಾಮುಂಡಿಬೆಟ್ಟಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಸಾದ ವಿತರಣೆ ಮಾಡುವವರಿಗೆ ಪ್ರಮಾಣಪತ್ರ ಕಡ್ಡಾಯವಾಗಿದೆ. ಆಹಾರ ಸುರಕ್ಷತಾ ಅಧಿಕಾರಿ ಬಳಿಯಿಂದ ಪ್ರಮಾಣಪತ್ರ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಆಷಾಢ ಮಾಸದ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಸೂಕ್ತ ಸಿದ್ಧತೆ ಮಾಡಲಾಗಿದ್ದು, ಮೊದಲ ಶುಕ್ರವಾರದಂದು ಭಕ್ತರಿಗೆ ಹಂಚಲು ಸುಮಾರು 25 ಸಾವಿರ ಮಾವಿನ ಬರ್ಫಿ ಸಿದ್ಧಪಡಿಸಲಾಗಿದೆ. ಮೈಸೂರಿನ ಚಾಮುಂಡಿ ಸೇವಾ ಸಮಿತಿಯವರು ಸಿಹಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ

ಗುರುವಾರ ರಾತ್ರಿ 10 ಗಂಟೆಯಿಂದ ದೇಗುಲಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನ ಪಾಸ್‌ಗಳನ್ನು ಪಡೆದ ವಿವಿಐಪಿಗಳು, ನಿಯೋಜಿತ ಸರ್ಕಾರಿ ಸಿಬ್ಬಂದಿ ಮತ್ತು ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ಮಾತ್ರ ಈ ನಿರ್ಬಂಧವು ಅನ್ವಯಿಸುವುದಿಲ್ಲ. ಭಕ್ತರು ತಮ್ಮ ವಾಹನಗಳನ್ನು ನಿಗದಿತ ಜಾಗದಲ್ಲಿ ನಿಲ್ಲಿಸಿ ಲಲಿತ ಮಹಲ್ ಪ್ರದೇಶದಿಂದ ಕೆಎಸ್​ಆರ್​​ಟಿಸಿ ಬಸ್​​ನಲ್ಲಿ ತೆರಳಿ ದರ್ಶನ ಪಡೆದು ಹಿಂತಿರುಗಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

ಮೈಸೂರು ಜಿಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ