ಮೈಸೂರಿನಲ್ಲಿ ಜಿ20 ‘ಥಿಂಕ್ 20’ ಸಭೆ ಆರಂಭ; ಆಗಸ್ಟ್ 1, 2ರಂದು ಅರಮನೆ ಪ್ರವೇಶಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ
ಆಗಸ್ಟ್ 1ರ ಮಧ್ಯಾಹ್ನ 2.30ರಿಂದ ಅರಮನೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಗಸ್ಟ್ 2ರಂದು ರಾತ್ರಿ 7 ರಿಂದ 8 ಗಂಟೆಯ ವರೆಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಪ್ರವಾಸಿಗರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿ20 (G20 Summit) ಸದಸ್ಯರಾಷ್ಟ್ರಗಳ ‘ಥಿಂಕ್ 20 (Think20)’ ಶೃಂಗಸಭೆ ಸೋಮವಾರ ಆರಂಭಗೊಂಡಿದೆ. ಸದಸ್ಯ ರಾಷ್ಟ್ರಗಳ ಗಣ್ಯ ಪ್ರತಿನಿಧಿಗಳು ಮೈಸೂರಿಗೆ ಆಗಮಿಸಿದ್ದಾರೆ. ಶೃಂಗಸಭೆಯ ಪ್ರಯುಕ್ತ ಗಣ್ಯರು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಆಗಸ್ಟ್ 1 ಮತ್ತು 2ರಂದು ಮೈಸೂರು ಅರಮನೆಗೆ (Mysuru Palace) ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿ ಅಲ್ಲಿನ ಆಡಳಿತ ಮಂಡಿ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿಎಸ್ ಸುಬ್ರಹ್ಮಣ್ಯ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಆಗಸ್ಟ್ 1ರ ಮಧ್ಯಾಹ್ನ 2.30ರಿಂದ ಅರಮನೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಗಸ್ಟ್ 2ರಂದು ರಾತ್ರಿ 7 ರಿಂದ 8 ಗಂಟೆಯ ವರೆಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಪ್ರವಾಸಿಗರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿ20 ಶೃಂಗಸಭೆ ಒಟ್ಟು 43 ರಾಷ್ಟ್ರಗಳ ಗಣ್ಯರು ಆಗಮಿಸಿದ್ದು, ರ್ಯಾಡಿಸನ್ ಬ್ಲೂ ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್ನಲ್ಲಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. ಜುಲೈ 31 ರಿಂದ ಆಗಸ್ಟ್ 2 ರವರೆಗೆ ಮೂರು ದಿನಗಳ ಕಾಲ ಥಿಂಕ್20 ಶೃಂಗಸಭೆ ನಡೆಯುತ್ತಿದೆ.
ಈ ಸಭೆಯಲ್ಲಿ ಏಳು ‘ಥಿಂಕ್ 20’ ಕಾರ್ಯಪಡೆಗಳ ಸದಸ್ಯರು ಮತ್ತು ಪ್ರಪಂಚದಾದ್ಯಂತದ ನೀತಿ ತಜ್ಞರು ಭಾಗವಹಿಸುತ್ತಿದ್ದಾರೆ. ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ, ಸ್ಥೂಲ ಆರ್ಥಿಕತೆ ಮತ್ತು ವ್ಯಾಪಾರ, ಮಹಿಳಾ ನೇತೃತ್ವದ ಅಭಿವೃದ್ಧಿ, ಡಿಜಿಟಲ್ ರೂಪಾಂತರ, ಹಸಿರು ಪರಿವರ್ತನೆ ಮತ್ತು ಜಾಗತಿಕ ಹಣಕಾಸು ಕ್ರಮದಂತಹ ಸಮಸ್ಯೆಗಳು ಸೇರಿದಂತೆ ಭಾರತದ ಜಿ20 ಅಧ್ಯಕ್ಷತೆಯ ಆದ್ಯತೆಗಳ ಕುರಿತ ಕಲ್ಪನೆಗಳು ಮತ್ತು ಒಳನೋಟಗಳ ಕುರಿತು ವಿಸ್ತೃತ ಚರ್ಚೆ ಸಭೆಯಲ್ಲಿ ನಡೆಯಲಿದೆ.
ಇದನ್ನೂ ಓದಿ: ಇಂದಿನಿಂದ ಮೈಸೂರಿನಲ್ಲಿ 3 ದಿನ ಜಿ20 ಶೃಂಗಸಭೆ: ಪ್ರವಾಸಿಗರು ಮೈಸೂರು ಟ್ರಿಪ್ ಬದಲಾವಣೆ ಮಾಡಿಕೊಂಡ್ರೆ ಒಳಿತು
ಗಣ್ಯರಿಗೆ ಮೈಸೂರಿನ ಪ್ರಸಿದ್ಧ ಪ್ರವಾಸಿ ತಾಣಗಳ ಭೇಟಿಗೂ ಅವಕಾಶ ಮಾಡಿಕೊಡಲಾಗಿದೆ. ಆ ಮೂಲಕ ಪ್ರವಾಸೋದ್ಯಮದ ಉತ್ತೇಜನಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮೈಸೂರಿನ ಇನ್ನಷ್ಟು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:50 pm, Mon, 31 July 23