40% ಕಮಿಷನ್​ ಆರೋಪ: ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು?: ಸರ್ಕಾರಕ್ಕೆ ಹೈಕೋರ್ಟ್​​​​ ಪ್ರಶ್ನೆ

ಬಿಲ್​ ಪಾವತಿ ಮಾಡಲು ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಪಡೆಯಲಾಗಿದೆ ಎಂಬ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ, ಈ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಹೆಚ್​.ಎನ್​ ನಾಗಮೋಹನ್​ ದಾಸ್​ ಅವರ ಏಕ ವ್ಯಕ್ತಿ ಆಯೋಗ ಈವರಗೆ ಹೈಕೋರ್ಟ್​ಗೆ ಒಂದೇ ಒಂದು ದಾಖಲೆ ಸಲ್ಲಿಸದಿದ್ದಕ್ಕೆ ಹೈಕೋರ್ಟ್​​ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

40% ಕಮಿಷನ್​ ಆರೋಪ: ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು?: ಸರ್ಕಾರಕ್ಕೆ ಹೈಕೋರ್ಟ್​​​​ ಪ್ರಶ್ನೆ
ಕರ್ನಾಟಕ ಹೈಕೋರ್ಟ್
Edited By: ವಿವೇಕ ಬಿರಾದಾರ

Updated on: Feb 12, 2024 | 1:24 PM

ಬೆಂಗಳೂರು, ಫೆಬ್ರವರಿ 11: ಬಿಲ್​ ಪಾವತಿ ಮಾಡಲು ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಪಡೆಯಲಾಗಿದೆ ಎಂಬ ಗುತ್ತಿಗೆದಾರರ (Contractor) ಆರೋಪಕ್ಕೆ ಸಂಬಂಧಿಸಿದಂತೆ, ಈ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಹೆಚ್​.ಎನ್​ ನಾಗಮೋಹನ್​ ದಾಸ್​ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ರಾಜ್ಯ ಸರ್ಕಾರ (Karnataka Government) ತಿಳಿಸಬೇಕು. ಇಲ್ಲವಾದಲ್ಲಿ ಸೂಕ್ತ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್‌ (High Court) ಎಚ್ಚರಿಸಿದೆ.

ರಾಜ್ಯ ಸರ್ಕಾರ ರಚಿಸಿರುವ ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಆಯೋಗ ರಚನೆ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ: ಮತ್ತೆ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘ: ಈ ಬಾರಿ ಅಧಿಕಾರಿಗಳೇ ಹಣ ಕೇಳ್ತಿದ್ದಾರೆ ಎಂದ ಕೆಂಪಣ್ಣ

ಮುಂದಿನ ವಿಚಾರಣೆಯ ವೇಳೆಗೆ ಸಮಿತಿಯ ಮುಂದೆ ಇದುವರೆಗೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದರ ಕುರಿತು ತಿಳಿಸಬೇಕು. ಒಂದೊಮ್ಮೆ ಪ್ರಕ್ರಿಯೆ ನಡೆಯದಿರುವುದನ್ನು ಸಮರ್ಥನೆ ಮಾಡದಿದ್ದರೆ ಅರ್ಜಿದಾರರ ಕೋರಿಕೆಯಂತೆ ಸೂಕ್ತ ಆದೇಶ ಮಾಡಲಾಗುವುದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ನ್ಯಾ. ನಾಗಮೋಹನದಾಸ್ ಆಯೋಗದಲ್ಲಿ ಈವರೆಗೆ ವಿಚಾರಣಾ ಪ್ರಕ್ರಿಯೆ ನಡೆದಿಲ್ಲ. ವಿಚಾರಣೆಯ ನೆಪವೊಡ್ಡಿ ಸರ್ಕಾರ ಗುತ್ತಿಗೆದಾರರ ವೇತನ ಪಾವತಿಸುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್​ ಮಾಹಿತಿ ನೀಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಹೈಕೋರ್ಟ್ ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು. ಸರ್ಕಾರದ ಪ್ರತಿಕ್ರಿಯೆ ಬಾರದಿದ್ದರೆ ಸೂಕ್ತ ಆದೇಶ ಹೊರಡಿಸಲಾಗುವುದು. ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗ ರಚಿಸಿದೆ ಎಂಬ ಗುತ್ತಿಗೆದಾರರ ಪರ ಹಿರಿಯ ವಕೀಲರ ಆಪಾದನೆ ಮೇಲ್ನೋಟಕ್ಕೆ ಸರಿ ಇದ್ದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 am, Sun, 11 February 24

Ramesha M
Follow Us