AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಬೇರೆ ರಾಜ್ಯದವರಿಗೆ ಕೆಲಸ ಕೊಡಲಾಗ್ತಿದೆ – ಮೇಲ್ಮನೆಯಲ್ಲಿ ನಾರಾಯಣಸ್ವಾಮಿ ಪ್ರಸ್ತಾಪ

ನಾನು AC ರೂಮ್‌ನಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ. ನಾನೇ ಖುದ್ದು ಫೀಲ್ಡ್‌ಗೆ ಹೋಗಿ ಪರಿಶೀಲನೆ ಮಾಡ್ತಿದ್ದೇನೆ. ಸ್ಥಳೀಯರಿಗೆ ಕೆಲಸ ಕೊಟ್ಟಿಲ್ಲ ಎಂಬ ಮಾಹಿತಿ ನೀಡಿದ್ರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ರು...

ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಬೇರೆ ರಾಜ್ಯದವರಿಗೆ ಕೆಲಸ ಕೊಡಲಾಗ್ತಿದೆ - ಮೇಲ್ಮನೆಯಲ್ಲಿ ನಾರಾಯಣಸ್ವಾಮಿ ಪ್ರಸ್ತಾಪ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
| Edited By: |

Updated on: Mar 23, 2021 | 3:06 PM

Share

ಬೆಂಗಳೂರು: ಮಾಲೂರಿನಲ್ಲಿ ನನ್ನ ಸೋದರ ಮಾವನ ಮಗ ಒಬ್ಬ ಇದ್ದಾನೆ. ಅವನು ಇಂಜಿನಿಯರಿಂಗ್ ಮಾಡಿದ್ದರೂ ಕೆಲಸ ಕೊಟ್ಟಿಲ್ಲ. ಅಲ್ಲಿನ ಸ್ಥಳೀಯ ಕಂಪನಿ ಅವನಿಗೆ ಉದ್ಯೋಗವನ್ನ ಕೊಟ್ಟಿಲ್ಲ ಎಂದು ಪ್ರಶ್ನೋತ್ತರ ಕಲಾಪದಲ್ಲಿ ನಾರಾಯಣಸ್ವಾಮಿ ಪ್ರಸ್ತಾಪಿಸಿದ್ದಾರೆ. ಎ, ಬಿ, ಸಿ‌ ವರ್ಗದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡ್ತಿಲ್ಲ. ಕಾರ್ಖಾನೆಯಲ್ಲಿ ಕನ್ನಡ ಮಾತನಾಡಲು ಆಗದ ಸ್ಥಿತಿ ಇದೆ. ಈ ಬಗ್ಗೆ ಕ್ರಮಕೈಗೊಳ್ಳ ಬೇಕು ಎಂದು ಕಾಂಗ್ರೆಸ್​ ಶಾಸಕ ನಾರಾಯಣಸ್ವಾಮಿ ಒತ್ತಾಯ ಮಾಡಿದ್ದಾರೆ.

ಕಾಂಗ್ರೆಸ್​ ಶಾಸಕ ನಾರಾಯಣಸ್ವಾಮಿ ಪ್ರಸ್ತಾಪಕ್ಕೆ ಸಚಿವ ಜಗದೀಶ್ ಶೆಟ್ಟರ್ ಉತ್ತರಿಸಿದ್ದು.. ನಾನು AC ರೂಮ್‌ನಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ. ನಾನೇ ಖುದ್ದು ಫೀಲ್ಡ್‌ಗೆ ಹೋಗಿ ಪರಿಶೀಲನೆ ಮಾಡ್ತಿದ್ದೇನೆ. ಸ್ಥಳೀಯರಿಗೆ ಕೆಲಸ ಕೊಟ್ಟಿಲ್ಲ ಎಂಬ ಮಾಹಿತಿ ನೀಡಿದ್ರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ರು. ಈ ಉತ್ತರಕ್ಕೆ ನಾರಾಯಣಸ್ವಾಮಿ ಮರು ಪ್ರಶ್ನೆ ಹಾಕಿದ್ದಾರೆ. ಜಮೀನು ಕೊಟ್ಟ ರೈತರಿಗೆ, ಸ್ಥಳೀಯರಿಗೆ ಎ,ಬಿ,ಸಿ ವರ್ಗದ ಹುದ್ದೆ ಕೊಡುತ್ತಿಲ್ಲ. ಈ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿದೆ. ಸ್ಥಳೀಯರ ಬದಲಾಗಿ ಬೇರೆ ಬೇರೆ ರಾಜ್ಯದವರಿಗೆ ಕೆಲಸ ಕೊಡಲಾಗ್ತಿದೆ. ಸ್ಥಳೀಯರಿಗೆ ಉದ್ಯೋಗ ಕೊಡದೇ ಇರೋ ಕಾರ್ಖಾನೆ ಸರ್ಕಾರ ವಶಕ್ಕೆ ಪಡೆಯಬೇಕು ಎಂದರು.

ಮಾತು ಮುಂದುವರೆಸಿದ ಸಚಿವ ಶೆಟ್ಟರ್.. ಸ್ಥಳೀಯರಿಗೆ ಕಡ್ಡಾಯವಾಗಿ ಆದ್ಯತೆ ನೀಡಲೇಬೇಕು. ಬೆಂಗಳೂರು ನಗರದಲ್ಲಿ ಒಟ್ಟು 2,071 ಕಾರ್ಖಾನೆಗಳಿವೆ. ಇದರಲ್ಲಿ 4,86,123 ಜನರಿಗೆ ಉದ್ಯೋಗ ನೀಡಲಾಗಿದೆ. 3,69,453 ಸ್ಥಳೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 292 ಕಾರ್ಖಾನೆಗಳಿವೆ. ಇದರಲ್ಲಿ 27,281 ಜನರಿಗೆ ಉದ್ಯೋಗ ನೀಡಲಾಗಿದೆ. ಇದರಲ್ಲಿ 24,826 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ.

2020-25ರ ಕೈಗಾರಿಕೆ ನೀತಿ ಅನ್ವಯದಂತೆ ಡಿ ವರ್ಗದ ಹುದ್ದೆ ಶೇ.100ರಷ್ಟು ಸ್ಥಳೀಯರಿಗೆ ನೀಡಬೇಕು. ಒಟ್ಟಾರೆ ಕನಿಷ್ಠ ಶೇಕಡಾ 70ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕಾರ್ಖಾನೆಗಾಗಿ ಜಮೀನು ನೀಡಿರುವ ಒಬ್ಬರಿಗೆ ಕಡ್ಡಾಯವಾಗಿ ಕೆಲಸ ಕೊಡಬೇಕೆಂಬ ನಿಯಮ ವಿದೆ. ನಿಯಮ ಮೀರಿದ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ತೇವೆ ಎಂದು ವಿಧಾನ ಪರಿಷತ್‌ನಲ್ಲಿ ಕೈಗಾರಿಕಾ ಸಚಿವ ಶೆಟ್ಟರ್ ಹೇಳಿದ್ರು.

ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಿ ಇನ್ನು ಪೌರಾಡಳಿತ ಇಲಾಖೆಯಲ್ಲಿ ಸಾವಿರಾರು ಹುದ್ದೆ ಖಾಲಿ ಇವೆ. ಇಷ್ಟು ಹುದ್ದೆ ಖಾಲಿ ಇದ್ದರೆ ಹೇಗೆ ಕೆಲಸ ಮಾಡುತ್ತೀರಾ? ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಿ ಎಂದು ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಪ್ರಶ್ನೆ ಮಾಡಿದ್ದು ಸಚಿವ ಎಂಟಿಬಿ ನಾಗರಾಜ್ ಉತ್ತರ ನೀಡಿದ್ದಾರೆ. ಪೌರಾಡಳಿತ ಇಲಾಖೆಯಲ್ಲಿ 9,972 ಹುದ್ದೆಗಳು ಖಾಲಿ ಇವೆ. ಗ್ರೂಪ್ ಬಿ ಮತ್ತು ಸಿ ವರ್ಗದಲ್ಲಿ 530 ಹುದ್ದೆ ಭರ್ತಿಗೆ ಕ್ರಮವಹಿಸಲಾಗಿದೆ. ಸಿ ಮತ್ತು ಡಿ ಹುದ್ದೆ ನೇಮಕಕ್ಕೆ ಡಿಸಿ ಹಂತದಲ್ಲಿ ಅನುಮತಿ ನೀಡಿ ಉಳಿದ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಕೇಳಲಾಗಿದೆ. ಆರ್ಥಿಕ ಇಲಾಖೆ ಅನುಮತಿ ಕೊಟ್ಟ ಬಳಿಕ ನೇಮಕ ಮಾಡುತ್ತೇವೆ ಎಂದು ಪರಿಷತ್‌ನಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉತ್ತರಿಸಿದ್ರು.

ರಾಜ್ಯದಲ್ಲಿ 36 ವಿಶೇಷ ಆರ್ಥಿಕ ವಲಯ ಕಾರ್ಯನಿರ್ವಹಣೆ ಮಾಡುತ್ತಿದೆ. ಭಾರತ ಸರ್ಕಾರದ ನಿಯಮದ ಅನ್ವಯ ವಲಯ ಸ್ಥಾಪನೆ ಮಾಡಲಾಗಿದೆ. ಈ ವಲಯಗಳು ರಾಜ್ಯದ ನಿಯಮಾವಳಿ ಅಳವಡಿಸಿಕೊಂಡಿವೆ. ಈ ವಲಯಗಳಲ್ಲಿ ಒಟ್ಟು 495 ಘಟಕ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸುಮಾರು 3,74,728 ಜನರಿಗೆ ಉದ್ಯೋಗ ಸಿಕ್ಕಿದೆ. ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಕಾರ್ಖಾನೆ ಮುಚ್ಚಿಲ್ಲ. ಆದರೆ ಕಚ್ಚಾವಸ್ತು ಪೂರೈಕೆ, ಬಿಡಿಭಾಗಗಳ ಪೂರೈಕೆಗೆ ಸಮಸ್ಯೆಯಾಗಿದೆ. ಆದ್ರೂ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಕೊವಿಡ್ ಮಾರ್ಗಸೂಚಿ ಅನ್ವಯ ವಿಶೇಷ ಅನುಮತಿ ನೀಡಲಾಗಿದೆ ಎಂದು ಎಂಎಲ್​ಸಿ ರಮೇಶ್​ ಪ್ರಶ್ನೆಗೆ ಸಚಿವ ಜಗದೀಶ್ ಶೆಟ್ಟರ್ ಉತ್ತರಿಸಿದ್ದಾರೆ.

ಇದನ್ನೂ ಓದಿ: ಕಲಾಪ ಆರಂಭದಲ್ಲೇ ಗೊಂದಲ.. RSS ಅಜೆಂಡಾ ವಿರುದ್ಧ ಸಿದ್ದರಾಮಯ್ಯ ಕಿಡಿ, 15 ನಿಮಿಷ ಕಾಲ ಕಲಾಪ ಮುಂದೂಡಿಕೆ