ಕಣೇಗೌಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯನ ಕೊಲೆ ಯತ್ನ ಪ್ರಕರಣ: ಜೈಲಿನಲ್ಲೇ ಇದ್ದುಕೊಂಡು ಕೊಲೆಗೆ ಸಂಚು
ಫೆಬ್ರವರಿ 15 ರಂದು ರಾತ್ರಿ ವೇಳೆ ಸಲೀಂ ಪಾಷ ಮೇಲೆ ಇರ್ಫಾನ್ ಹಾಗು ಛೋಟು ಸೇರಿ ಮೂವರಿಂದ ಕೊಲೆಗೆ ಯತ್ನ ನಡೆದಿತ್ತು. ಈ ಪ್ರಕರಣದ ತನಿಖೆ ವೇಳೆ ಸಿಸಿ ಟಿವಿ ಆಧರಿಸಿ ತನಿಖೆ ನಡೆಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿ ಇರ್ಫಾನ್ನನ್ನು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲ: ಫೆಬ್ರವರಿ 15 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಇಸ್ಲಾಂಪುರದಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ವೇಳೆ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕೊಲೆ ಪ್ರಕರಣವೊಂದರ ಅಪರಾಧಿ ಮುಬಾರಕ್ ಬೆಳಗಾವಿ ಜೈಲಿನಲ್ಲಿ ಇದ್ದುಕೊಂಡು ಕಣೇಗೌಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಲೀಂ ಪಾಷ ಕೊಲೆಗೆ ಯೋಜನೆ ರೂಪಿಸಿ ಇಸ್ಲಾಂಪುರದ ಇರ್ಫಾನ್ ಹಾಗೂ ಛೋಟುಗೆ ಸುಪಾರಿ ಕೊಟ್ಟಿದ್ದರು ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.
ಫೆಬ್ರವರಿ 15 ರಂದು ರಾತ್ರಿ ವೇಳೆ ಸಲೀಂ ಪಾಷ ಮೇಲೆ ಇರ್ಫಾನ್ ಹಾಗೂ ಛೋಟು ಸೇರಿ ಮೂವರಿಂದ ಕೊಲೆಗೆ ಯತ್ನ ನಡೆದಿತ್ತು. ಮುಖಕ್ಕೆ ಖಾರದ ಪುಡಿ ಎರಚಿ ದಾಳಿ ಮಾಡಿದ್ದರು. ಈ ಪ್ರಕರಣದ ತನಿಖೆ ವೇಳೆ ಸಿಸಿ ಟಿವಿ ಆಧರಿಸಿ ತನಿಖೆ ನಡೆಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿ ಇರ್ಫಾನ್ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಕೊಲೆ ಪ್ರಕರಣದಿಂದ ಬೆಳಗಾವಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಮುಬಾರಕ್ ಹಾಗೂ ಸಲೀಂ ಪಾಷಗೆ ಹಳೆ ವೈಷಮ್ಯವಿತ್ತು. ವೈಷ್ಯಮದ ಹಿನ್ನೆಲೆ ಕೊಲೆ ಮಾಡಲು ಫೋನ್ನಲ್ಲಿ ಕರೆ ಮಾಡಿ ಸುಪಾರಿ ಕೊಟ್ಟಿದ್ದರು. ಹಾಗಾಗಿ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಯತ್ನ ನಡೆಸಲಾಗಿದೆ ಎಂದು ಬಂಧಿತ ಆರೋಪಿ ಇರ್ಫಾನ್ ಬಾಯಿಬಿಟ್ಟಿದ್ದಾನೆ.
ತಲೆಮರೆಸಿಕೊಂಡಿರುವ ಛೋಟುಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದ್ದು, ಸದ್ಯ ಇರ್ಫಾನ್ ಮಾಹಿತಿ ಆಧರಿಸಿ ವಾರೆಂಟ್ ಪಡೆದ ಪೊಲೀಸರು ಮುಬಾರಕ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇನ್ನು ಮುಬಾರಕ್ 2007 ರಲ್ಲಿ ರಾಮನಗರ ನಗರಸಭೆ ಸದಸ್ಯ ಫಯಾಜ್ ಖಾನ್ನನ್ನು ನಡುಬೀದಿಯಲ್ಲಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: